ಕೋಲಾಹಲಕ್ಕೆ ಕಾರಣವಾದ 'ವಿಭಜನೆಗೆ ಕಾರಣರು ಯಾರು?' ಎಂಬ ಪ್ರಶ್ನೆ
ನವದೆಹಲಿ, ಜೂನ್ 28: "ದೇಶ ವಿಭಜನೆಗೆ ಕಾರಣರು ಯಾರು?" ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನೆ ಶುಕ್ರವಾರ ಸಂಸತ್ ನಲ್ಲಿ ಭಾರೀ ಗದ್ದಲಕ್ಕೆ ಕಾರಣ ಆಯಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಮುಂದುವರಿಸುವ ಮಸೂದೆ ಬಗ್ಗೆ ಚರ್ಚೆ ನಡೆಯುವ ವೇಳೆ ಈ ಘಟನೆ ಸಂಭವಿಸಿತು.
ವಾದವು ತೀವ್ರ ಸ್ವರೂಪ ಪದೆದುಕೊಂಡು, ದೇಶ ವಿಭಜನೆ ಕಡೆಗೆ ತಿರುಗಿಕೊಂಡು ಹಾಗೂ ರಾಜ್ಯಗಳ ಮೇಲೆ ಕೇಂದ್ರ ಸರಕಾರ ಹೇರಬಹುದಾದ ಪರಿಚ್ಛೇದ 356ರ ಬಗ್ಗೆ ಕೂಡ ಪ್ರಸ್ತಾವ ಆಯಿತು. ಕಾಂಗ್ರೆಸ್ ವಿರುದ್ಧ ದಾಳಿಗೆ ಇಳಿದ ಅಮಿತ್ ಶಾ, ಬಿಜೆಪಿಯಲ್ಲ, ಅದು ಕಾಂಗ್ರೆಸ್. ಪರಿಚ್ಛೇದ 356 ಅನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿದೆ ಎಂದರು.
ವಿಶೇಷ ಸಂದರ್ಭದಲ್ಲಿ ನಾವು ರಾಷ್ಟ್ರಪತಿ ಆಳ್ವಿಕೆ ತಂದಿದ್ದೇವೆ. ಈ ದಿನಕ್ಕೂ ಮುನ್ನ ಪರಿಚ್ಛೇದ 356 ಅನ್ನು 132 ಬಾರಿ ಹೇರಲಾಗಿದೆ. ಅದರಲ್ಲಿ 93 ಬಾರಿ ಅದನ್ನು ಬಳಸಿರುವುದು ಕಾಂಗ್ರೆಸ್ ಪಕ್ಷ. ಈಗ ಅವರು ನಮಗೆ ಪರಿಚ್ಛೇದ 356 ಹೇಗೆ ಬಳಸಬೇಕು ಎಂದು ಹೇಳಿಕೊಡಲು ಬರುತ್ತಾರೆ ಎಂದು ಭಾರೀ ಪ್ರತಿಭಟನೆಯ ಮಧ್ಯೆ ಆಮಿತ್ ಶಾ ಹೇಳಿದ್ದಾರೆ.

ಆದರೆ, ಮಸೂದೆ ವಿರುದ್ಧ ಇರುವ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತು. ಚರ್ಚೆಗೆ ಪ್ರತಿಕ್ರಿಯೆ ನೀಡಿದ ಅಮಿತ್ ಶಾ, ದೇಶ ವಿಭಜನೆ ಬಗ್ಗೆ ಮನೀಶ್ ತಿವಾರಿ ಈಗ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ನಾನು ಅವರಿಗೆ ಪ್ರಶ್ನಿಸಲು ಬಯಸುತ್ತೇನೆ. ವಿಭಜನೆಗೆ ಯಾರು ಕಾರಣ? ಇಂದು ಮೂರನೇ ಒಂದು ಭಾಗದಷ್ಟು ಜಮ್ಮು ಮತ್ತು ಕಾಶ್ಮೀರ ನಮ್ಮ ಹತೋಟಿಯಲ್ಲಿ ಇಲ್ಲ. ಅದಕ್ಕೆ ಕಾರಣ ಯಾರು ಎಂದು ಪ್ರಶ್ನಿಸಿದ್ದಾರೆ.
ಚರ್ಚೆಯ ವೇಳೆ ಜವಾಹರ್ ಲಾಲ್ ನೆಹರೂ ಹೆಸರನ್ನು ಎಳೆದು ತಂದಿದ್ದಕ್ಕೆ ಕಾಂಗ್ರೆಸ್ ನಿಂದ ಜೋರು ಧ್ವನಿಯಲ್ಲಿ ಪ್ರತಿಭಟನಾ ಘೋಷಣೆ ಕೂಗಲಾಯಿತು. ಆ ವೇಳೆ ಅಮಿತ್ ಶಾ, ಅವರ ಹೆಸರು ಹೇಳುವುದರಿಂದ ಅಷ್ಟು ನೋವಾಗುತ್ತದೆ ಅಂದರೆ ಇನ್ನು ಮುಂದೆ ದೇಶದ ಮೊದಲ ಪ್ರಧಾನಮಂತ್ರಿ ಎಂದು ಕರೆಯುವುದಾಗಿ ಹೇಳಿದರು.
ಬಿಜೆಪಿ ಜತೆ ಹೊಂದಾಣಿಕೆ ಸಾಧ್ಯವಿಲ್ಲದ ಪಿಡಿಪಿ ಜತೆಗೆ ಮೈತ್ರಿ ಮಾಡಿಕೊಂಡ ಕಾರಣಕ್ಕೆ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ತರಬೇಕಾಯಿತು. ಸಮಸ್ಯೆ ಮೂಲ ಇರುವುದು ಹೊಂದಾಣಿಕೆ ಇಲ್ಲದ ಪಿಡಿಪಿ- ಬಿಜೆಪಿ ಮೈತ್ರಿಯಲ್ಲಿ ಎಂದು ಕಾಂಗ್ರೆಸ್ ನ ಮನೀಶ್ ತಿವಾರಿ ಹೇಳಿದರು.












Click it and Unblock the Notifications