ಅಮಿತ್ ಶಾ ಗೆ ಕ್ಲೀನ್ ಚಿಟ್ ನೀಡಿಲ್ಲ: ಸದಾಶಿವಂ
ನವದೆಹಲಿ, ಸೆ. 4: ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಪಳನಿಸ್ವಾಮಿ ಸದಾಶಿವಂರನ್ನು ಕೇರಳದ ನೂತನ ರಾಜ್ಯಪಾಲರಾಗಿ ಕೇಂದ್ರ ಸರ್ಕಾರ ನೇಮಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ನಕಲಿ ಎನ್ ಕೌಂಟರ್ ಆರೋಪ ಹೊತ್ತಿರುವ ಅಮಿತ್ ಶಾ ಅವರಿಗೆ ಸದಾಶಿವಂ ಅವರಿದ್ದ ನ್ಯಾಯಪೀಠ ಕ್ಲೀನ್ ಚಿಟ್ ನೀಡಿತ್ತು, ಹೀಗಾಗಿ ಬಿಜೆಪಿ ಈಗ ಋಣ ಸಂದಾಯ ಮಾಡುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
65 ವರ್ಷದ ಸದಾಶಿವಂ ರಾಜ್ಯಪಾಲ ಹುದ್ದೆಗೆ ನೇಮಕಗೊಂಡ ಮೊದಲ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನಿಸಿದ್ದಾರೆ. ಹುದ್ದೆಗಳ ಶ್ರೇಣೀಕೃತ ಭಾರತೀಯ ವ್ಯವಸ್ಥೆಯಲ್ಲಿ ರಾಜ್ಯಪಾಲ ಹುದ್ದೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಹುದ್ದೆಗಿಂತ ಕೆಳಗಿನದಾಗಿದೆ. ಹೊಸ ಎನ್ಡಿಎ ಸರಕಾರ ರಾಜ್ಯಪಾಲ ಹುದ್ದೆಗೆ ನೇಮಿಸಿದ ಮೊದಲ ರಾಜಕೀಯೇತರ ವ್ಯಕ್ತಿ ಅವರಾಗಿದ್ದಾರೆ.

ಈ ಮೊದಲು ಕೇರಳದ ರಾಜ್ಯಪಾಲರಾಗಿದ್ದ ಶೀಲಾ ದೀಕ್ಷಿತ್ ಕಳೆದ ವಾರ ರಾಜೀನಾಮೆ ಸಲ್ಲಿಸಿದ್ದರು. ನಂತರ ಎನ್ ಡಿಎ ಸರ್ಕಾರ ಸದಾಶಿವಂ ಅವರನ್ನು ನೇಮಕ ಮಾಡಿತ್ತು. ಈ ನೇಮಕಕ್ಕೆ ಸದ್ಯ ವೈಷ್ಣೋದೇವಿ ಪ್ರವಾಸ ನಿರತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕೂಡಾ ಅಂಕಿತ ಹಾಕಿದ್ದಾರೆ. ಸೆ.5ರಂದು ಬೆಳಗ್ಗೆ 10ಗಂಟೆಗೆ ಕೇರಳ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಲು ಸದಾಶಿವಂ ಅವರು ಸಜ್ಜಾಗಿದ್ದಾರೆ.[ಕನ್ನಡಿಗ ದತ್ತು ಸುಪ್ರೀಂಕೋರ್ಟ್ ನೂತನ ಸಿಜೆ]
ಕಾಂಗ್ರೆಸ್ ಟೀಕೆಗೆ ಉತ್ತರ: ಬಿಜೆಪಿ ಅಧ್ಯಕ್ಷ ಅಮಿತ್ ಶಾಆರೋಪಿಯಾಗಿದ್ದ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಶಾ ಅವರ ವಿರುದ್ಧದ ಎರಡನೇ ಎಫ್ ಐಆರ್ ರದ್ದು ಮಾಡಲು ಆದೇಶ ನೀಡಿದ ನ್ಯಾಯಪೀಠದಲ್ಲಿ ಸದಾಶಿವಂ ಅವರು ಕೂಡಾ ಇದ್ದರು. ಹೀಗಾಗಿ ಬಿಜೆಪಿ ಈಗ ಅವರಿಗೆ ರಾಜ್ಯಪಾಲರ ಹುದ್ದೆ ಉಡುಗೊರೆಯಾಗಿ ನೀಡುತ್ತಿದೆ ಎಂದು ಕಾಂಗ್ರೆಸ್ ಮಾಡಿರುವ ಟೀಕೆಗೆ ಸದಾಶಿವಂ ಅವರು ಉತ್ತರಿಸಿದ್ದಾರೆ.
ಏಪ್ರಿಲ್ 2013ರಲ್ಲಿ ತುಳಸಿ ಪ್ರಜಾಪತಿ ಕೇಸ್ ನ ಆರೋಪಿಯಾಗಿದ್ದ ಅಮಿತ್ ಶಾ ಅವರು ಆಗ ಬಿಜೆಪಿ ಅಧ್ಯಕ್ಷರಾಗಲಿ ಯಾವುದೇ ಉನ್ನತ ಹುದ್ದೆಯಲ್ಲಿರಲಿಲ್ಲ. ಅಲ್ಲದೇ, ಮಿ.ಶಾ ಅವರಿಗೆ ನಾವು ಕ್ಲೀನ್ ಚಿಟ್ ನೀಡಿಲ್ಲ. ಸೊಹ್ರಾಬುದ್ದೀನ್ ಪ್ರಕರಣವನ್ನು ಮಹಾರಾಷ್ಟ್ರದ ನ್ಯಾಯಪೀಠಕ್ಕೆ ವರ್ಗಾಯಿಸಲಾಯಿತು. ಶಾ ಅವರ ವಿರುದ್ಧ ಹೆಚ್ಚುವರಿ ಚಾರ್ಚ್ ಶೀಟ್ ದಾಖಲಿಸಲು ಅನುಮತಿ ನೀಡಲಾಯಿತು. ನಾನು ಎಂದಿಗೂ ನನ್ನ ಕರ್ತವ್ಯಕ್ಕೆ ದ್ರೋಹ ಬಗೆದಿಲ್ಲ ಹಾಗೂ ಯಾರಿಂದಲೂ ಬಳುವಳಿಯನ್ನು ಅಪೇಕ್ಷಿಸಿಲ್ಲ ಎಂದು ನ್ಯಾ. ಸದಾಶಿವಂ ಅವರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications