ರಸ್ತೆ ಅಪಘಾತ; ಪ್ರತಿಭಟನೆಯಿಂದ ಹಿಂದಿರುಗುತ್ತಿದ್ದ ರೈತರ ಸಾವು
ನವದೆಹಲಿ, ಡಿಸೆಂಬರ್ 15: ಪ್ರತಿಭಟನೆಯಲ್ಲಿ ಪಾಲ್ಗೊಂಡು ದೆಹಲಿಯಿಂದ ವಾಪಸ್ಸಾಗುತ್ತಿದ್ದ ಇಬ್ಬರು ರೈತರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.
ಮಂಗಳವಾರ ಬೆಳಿಗ್ಗೆ ಹರಿಯಾಣದಲ್ಲಿನ ಕರ್ನಾಲ್ ಎಂಬಲ್ಲಿ ದೆಹಲಿ-ಚಂಡೀಗಢ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ವಾಹನವೊಂದು ಈ ರೈತರಿದ್ದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದ್ದು, ಇಬ್ಬರು ರೈತರು ಸಾವನ್ನಪ್ಪಿದ್ದಾರೆ. ಗುರ್ ಪ್ರೀತ್ ಸಿಂಗ್ (24) ಹಾಗೂ ಲಾಭ್ ಸಿಂಗ್ (65) ಅಪಘಾತದಲ್ಲಿ ಮೃತಪಟ್ಟವರು.
ಭೀಕರ ವಿಡಿಯೋ: ಧರ್ಮಪುರಿ ಬಳಿ ಅಪಘಾತಕ್ಕೆ ನಾಲ್ವರು ಬಲಿ
ಇವರು ಪಂಜಾಬ್ ನ ಪಟಿಯಾಲ ಜಿಲ್ಲೆಯ ಸಫೇರಾ ಗ್ರಾಮದವರು ಎನ್ನಲಾಗಿದೆ. ಇದೇ ಗ್ರಾಮದ ಇನ್ನಿತರ ಮೂವರು ರೈತರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತವು ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಸಂಭವಿಸಿರಬಹುದು, ಹಿಂದಿನಿಂದ ವಾಹನವೊಂದು ಡಿಕ್ಕಿ ಹೊಡೆದಿದ್ದು, ಹೆದ್ದಾರಿಯಲ್ಲಿ ವಾಹನ ಉರುಳಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗುರ್ ಪ್ರೀತ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಲಾಭ್ ಸಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಾವನ್ನಪ್ಪಿದ್ದಾರೆ. ಗಾಯಗೊಂಡ ರೈತರನ್ನು ಕರ್ನಾಲ್ ನ ಕಲ್ಪನಾ ಚಾವ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಸಾವನ್ನಪ್ಪಿದ ರೈತ ಗುರ್ ಪ್ರೀತಿ ಸಿಂಗ್, ಕುಟುಂಬಕ್ಕೆ ಒಬ್ಬನೇ ಮಗನಾಗಿದ್ದ, ಆತನೇ ಕುಟುಂಬಕ್ಕೆ ಆಧಾರವಾಗಿದ್ದ ಎಂದು ಅಪಘಾತದಲ್ಲಿ ಗಾಯಗೊಂಡಿರುವ ರೈತ ನರೇಂದ್ರ ಸಿಂಗ್ ಕಣ್ಣೀರಿಟ್ಟಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಾಯಗೊಂಡಿರುವ ರೈತರಿಂದ ಹೇಳಿಕೆಗಳನ್ನು ಪಡೆಯಲಾಗುತ್ತಿದೆ. ಅಪಘಾತ ಮಾಡಿದ ವಾಹನ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.