ಹಾವೂ ಸಾಯಬಾರದು, ಕೋಲೂ...: ಬಿಜೆಪಿ-ಕಾಂಗ್ರೆಸ್ ಬಚಾವ್
ನವದೆಹಲಿ, ಫೆಬ್ರವರಿ 13: ರಾಜ್ಯಸಭೆಯಲ್ಲಿ ಎರಡು ಮಹತ್ವದ ಮತ್ತು ವಿವಾದಾತ್ಮಕ ಮಸೂದೆಗಳು ನಿರೀಕ್ಷೆಯಂತೆಯೇ ಅನುಮೋದನೆಗೊಳ್ಳದೆ ನನೆಗುದಿಗೆ ಬಿದ್ದಿವೆ.
ಬಜೆಟ್ ಅಧಿವೇಶನದ ಕೊನೆಯ ದಿನವಾದ ಬುಧವಾರ ರಾಜ್ಯಸಭೆಯಲ್ಲಿ ಪೌರತ್ವ (ತಿದ್ದುಪಡಿ) ಮಸೂದೆ 2019, ಮುಸ್ಲಿಂ ಮಹಿಳೆ (ಮದುವೆಯ ಹಕ್ಕಿನ ರಕ್ಷಣೆ) ಮಸೂದೆ 2019 ಅಥವಾ ತ್ರಿವಳಿ ತಲಾಖ್ ಮಸೂದೆಗಳು ಚರ್ಚೆಗೆ ಬರಬೇಕಿತ್ತು. ಆದರೆ, ಕಲಾಪ ಮುಂದೂಡಿಕೆಯಾಗಿದ್ದರಿಂದ ಈ ಮಸೂದೆಗಳು ಅನುಮೋದನೆ ಪಡೆದುಕೊಳ್ಳಲಿಲ್ಲ.
ಬುಧವಾರ ಕೊನೆಯ ದಿನದ ಕಲಾಪ ಆರಂಭವಾದಾಗ ಬಜೆಟ್ ಅಧಿವೇಶನದ ಮುನ್ನ ಭಾಷಣ ಮಾಡಿದ ರಾಷ್ಟ್ರಪತಿಗಳಿಗೆ ವಂದನಾ ನಿರ್ಣಯ ಕೈಗೊಳ್ಳಲಾಯಿತು. ಲೋಕಸಭೆಯಲ್ಲಿ ಮಂಗಳವಾರ ಅನುಮೋದನೆಗೊಂಡ ಬಜೆಟ್ ಹಣಕಾಸು ಮಸೂದೆಗೆ ಅನುಮೋದನೆ ನೀಡಲಾಯಿತು. ಯಾವುದೇ ಚರ್ಚೆಯಿಲ್ಲದೆ ಮೇಲ್ಮನೆಯಲ್ಲಿ ಮಧ್ಯಂತರ ಬಜೆಟ್ ಕೂಡ ಅನುಮೋದನೆಯಾಯಿತು.
ರಫೇಲ್ ಒಪ್ಪಂದ ಕುರಿತಾದ ಸಿಎಜಿ ವರದಿಯನ್ನು ಮಂಡಿಸಲಾಯಿತು. ಬಳಿಕ ಅಧಿವೇಶನದ ಅಂತ್ಯದಲ್ಲಿ ತಮ್ಮ ಸಾಂಪ್ರದಾಯಿಕ ಭಾಷಣ ಮಾಡಿದ ರಾಜ್ಯಸಭೆ ಅಧ್ಯಕ್ಷ, ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಕಲಾಪವನ್ನು ಮುಂದೂಡಿದರು. ಇದರಿಂದ ಪೌರತ್ವ ತಿದ್ದುಪಡಿ ಮಸೂದೆ ಮತ್ತು ತ್ರಿವಳಿ ತಲಾಖ್ ಮಸೂದೆಗಳು ಚರ್ಚೆಗೆ ಬಾರದೆ ಬಿದ್ದುಹೋದವು.

ರಾಜ್ಯಸಭೆ ಅಂಗೀಕಾರ ಸಿಗುತ್ತಿರಲಿಲ್ಲ
ತ್ರಿವಳಿ ತಲಾಖ್ ಮಸೂದೆ ಮತ್ತು ಪೌರತ್ವ ತಿದ್ದುಪಡಿ ಮಸೂದೆಗಳು ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದವು. ಈಶಾನ್ಯ ರಾಜ್ಯಗಳಲ್ಲಿ ಈ ಬಗ್ಗೆ ಪರ-ವಿರೋಧದ ಕಾವು ಜೋರಾಗಿತ್ತು. ಈ ಎರಡೂ ಮಸೂದೆಗಳನ್ನು ಬಿಜೆಪಿ ಮಹತ್ವದ್ದವೆಂದು ಪ್ರತಿಪಾದಿಸಿತ್ತು. ಎನ್ಡಿಎ ಅಧಿಕ ಬಲವುಳ್ಳ ಲೋಕಸಭೆಯಲ್ಲಿ ಈ ಮಸೂದೆಗಳು ಸುಲಭವಾಗಿ ಪಾಸ್ ಆಗಿದ್ದವು. ಆದರೆ, ರಾಜ್ಯಸಭೆಯಲ್ಲಿ ಬಿಜೆಪಿಗೆ ಅಗತ್ಯ ಸದಸ್ಯ ಬಲ ಇಲ್ಲದ ಕಾರಣ ಇವುಗಳಿಗೆ ಅಂಗೀಕಾರ ದೊರಕುವುದಿಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಅಲ್ಲದೆ, ಬಿಜೆಪಿಯೊಂದಿಗೆ ಬಿಹಾರದಲ್ಲಿ ಸರ್ಕಾರ ರಚನೆಗೆ ಕೈಜೋಡಿಸಿರುವ ಜೆಡಿಯು, ತ್ರಿವಳಿ ತಲಾಖ್ ಮಸೂದೆಗೆ ತನ್ನ ಬೆಂಬಲ ನೀಡುವುದಿಲ್ಲ ಎಂದು ಪ್ರಕಟಿಸಿತ್ತು.

ಎರಡೂ ಪಕ್ಷಗಳಿಗೆ ಬೇಕಿಲ್ಲ
ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಮಸೂದೆಗಳ ಪರವಾಗಿ ಬಿಜೆಪಿ ವಾದ ಮಂಡಿಸುತ್ತಿದ್ದರೂ ಮತ್ತು ಇವುಗಳನ್ನು ಸಾಧನೆಯ ಪಟ್ಟಿಯಲ್ಲಿ ಇರಿಸಿಕೊಂಡಿದ್ದರೂ ಅದು ರಾಜ್ಯಸಭೆಯಲ್ಲಿ ಅಂಗೀಕಾರವಾಗುವುದು ಸ್ವತಃ ಬಿಜೆಪಿಗೂ ಬೇಕಿಲ್ಲ. ಅಲ್ಲದೆ, ಅದರ ಪರ ಅಥವಾ ವಿರೋಧವಾಗಿ ನಿಲ್ಲದೆ ಅದು ಬಿದ್ದುಹೋಗುವಂತೆ ಮಾಡುವುದು ಕಾಂಗ್ರೆಸ್ಸಿಗೂ ಅಗತ್ಯವಾಗಿದೆ. ಏಕೆಂದರೆ ಈ ಎರಡೂ ಮಸೂದೆಗಳು ಚುನಾವಣೆಯ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಮರ್ಥ್ಯ ಹೊಂದಿವೆ.
ಚುನಾವಣೆ ಸಮೀಪಿಸಿದ ಕಾರಣದಿಂದ ಈ ಮಸೂದೆಗಳ ಕುರಿತಾದ ಒಲವು ಕಡಿಮೆಯಾಗಿದೆ. ಕಾಂಗ್ರೆಸ್ ಕೂಡ ಎರಡೂ ಬಗೆಯ ಮತದಾರರನ್ನು ಗಮನದಲ್ಲಿಟ್ಟುಕೊಂಡು ಪರ-ವಿರೋಧದ ಚರ್ಚೆಗಳಿಂದ ಅಂತರ ಕಾಯ್ದುಕೊಳ್ಳಲು ಉದ್ದೇಶಿಸಿದೆ.

ಚರ್ಚೆಗೆ ಬಾರದಿರುವುದೇ ಒಳಿತು
ರಾಜ್ಯಸಭೆಯಲ್ಲಿ ಈ ಮಸೂದೆಗಳ ಬಗ್ಗೆ ಸ್ಥೂಲವಾದ ಚರ್ಚೆ ನಡೆಸುವುದು ಉಭಯ ಪಕ್ಷಗಳಿಗೂ ಬೇಕಿರಲಿಲ್ಲ. ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದರೆ ಬಿಜೆಪಿ ಬೀಗಿದರೂ, ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇತ್ತು. ಇದೇ ಪರಿಸ್ಥಿತಿ ಕಾಂಗ್ರೆಸ್ನದ್ದೂ ಹೌದು. ಚರ್ಚೆಗೆ ಬಂದು ಅದನ್ನು ತಿರಸ್ಕರಿಸಿದರೂ ಕೂಡ ಆ ಫಲಿತಾಂಶ ಜನರ ಮೇಲೆ ಪ್ರಭಾವ ಬೀರುತ್ತಿತ್ತು. ಹೀಗಾಗಿ ಚರ್ಚೆಗೆ ಬಾರದೆಯೇ ಮಸೂದೆ ಬಿದ್ದುಹೋಗುವುದು ಒಳಿತು ಎಂಬ ಅಭಿಪ್ರಾಯ ಇತ್ತು. ಈ ಸಂಬಂಧ ಎರಡೂ ಪಕ್ಷಗಳ ನಾಯಕರು ಕೂಡ ಸಹಮತ ಹೊಂದಿದ್ದರು. ಒಂದು ವೇಳೆ ರಾಜ್ಯಸಭೆಯಲ್ಲಿ ಈ ಮಸೂದೆಗಳು ಚರ್ಚೆಗೆ ಬಂದಿದ್ದರೂ ಅದರ ಬಗ್ಗೆ ಸರಿಯಾದ ಚರ್ಚೆ ನಡೆಯುತ್ತಿರಲಿಲ್ಲ. ಬುಧವಾರ ಸದನ ಮುಂದೂಡಲಾಗಿದ್ದರಿಂದ ಈ ಸಮಸ್ಯೆಯೇ ಎದುರಾಗಲಿಲ್ಲ.

ಬಿಜೆಪಿ-ಕಾಂಗ್ರೆಸ್ ನಿರಾಳ
ರಾಜ್ಯಸಭೆಯಲ್ಲಿ ಈ ಮಸೂದೆಗಳು ಬಿದ್ದುಹೋಗಿರುವುದು ಎರಡೂ ಪಕ್ಷಗಳಿಗೆ ನಿರಾಳತೆ ಮೂಡಿಸಿದೆ. ಹೀಗಾಗಿ ಈ ವಿಚಾರಗಳು ಚುನಾವಣೆಯ ಪ್ರಚಾರದ ಸಂಗತಿಗಳಾಗಿ ಪ್ರಾಮುಖ್ಯ ಪಡೆದುಕೊಳ್ಳುವುದಿಲ್ಲ. ತ್ರಿವಳಿ ತಲಾಖ್ಗೆ ಮುಸ್ಲಿಂ ಸಮುದಾಯದ ವಿರೋಧ ವ್ಯಕ್ತವಾಗಿತ್ತು. ಪೌರತ್ವ ತಿದ್ದುಪಡಿ ಮಸೂದೆಗೂ ಈಶಾನ್ಯ ರಾಜ್ಯಗಳಲ್ಲಿ ವ್ಯಾಪಕ ವಿರೋಧ ಉಂಟಾಗಿತ್ತು. ಈ ಎರಡೂ ಮಸೂದೆಗಳನ್ನು ಬಿಜೆಪಿ ಪ್ರಚಾರದ ಸಂಗತಿಗಳನ್ನಾಗಿ ಬಳಸಿಕೊಳ್ಳಲು ಉದ್ದೇಶಿಸಿದ್ದರೂ, ವಿರೋಧದ ಕಾರಣ ಹಿಂದೆ ಸರಿಯುವುದು ಅನಿವಾರ್ಯವಾಗಿತ್ತು. ಈಗ ಮಸೂದೆಗೆ ಅಂಗೀಕಾರ ದೊರಕದ ಕಾರಣ ಬಿಜೆಪಿ ಈ ಉಭಯ ಸಂಕಟದಿಂದ ಪಾರಾಗಿದೆ.

ಮಸೂದೆ ಪಾಸಾಗಲಿಲ್ಲ, ಮುಂದೇನು?
ಇನ್ನು ಚುನಾವಣೆ ನಡೆದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ಮಸೂದೆಗಳು ಮತ್ತೆ ಲೋಕಸಭೆಯಲ್ಲಿ ಮಂಡನೆಯಾಗಿ ಪುನಃ ಅಂಗೀಕಾರ ಪಡೆದುಕೊಳ್ಳಬೇಕಿದೆ. ಅದಾದ ನಂತರ ರಾಜ್ಯಸಭೆಗೆ ರವಾನೆಯಾಗಿ ಅಲ್ಲಿಯೂ ಅನುಮೋದನೆ ಸಿಗಬೇಕಿದೆ. ಬಿಜೆಪಿ ಸರ್ಕಾರವೇ ಪುನಃ ಅಧಿಕಾರಕ್ಕೆ ಬಂದರೆ ಈ ಮಸೂದೆಗಳು ಮತ್ತೆ ಚಾಲ್ತಿಗೆ ಬರಲಿವೆಯೇ ಎನ್ನುವುದು ಕುತೂಹಲ ಮೂಡಿಸಿದೆ.












Click it and Unblock the Notifications