15 ನಿಮಿಷದಲ್ಲಿ ರೈಲು ದೋಚಿದ ದುಷ್ಕರ್ಮಿಗಳು, ಸನ್ ಗ್ಲಾಸ್ ಕೂಡ ಬಿಡಲಿಲ್ಲ
ಜಮ್ಮು-ದೆಹಲಿ ಮಧ್ಯದ ತುರಂತ್ ಎಕ್ಸ್ ಪ್ರೆಸ್ ನ ಎರಡು ಏಸಿ ಬೋಗಿಗಳ ಮೇಲೆ ದುಷ್ಕರ್ಮಿಗಳು ಗುರುವಾರ ದಾಳಿ ನಡೆಸಿ, ಹತ್ತಾರು ಪ್ರಯಾಣಿಕರಿಂದ ನಗದು, ಆಭರಣ, ಎಟಿಎಂ ಕಾರ್ಡ್ ಗಳು ಹಾಗೂ ಸನ್ ಗ್ಲಾಸ್ ಗಳನ್ನು ದೋಚಿದ್ದಾರೆ. ರೈಲಿನಲ್ಲಿ ಜಮ್ಮುವಿನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಅಶ್ವನಿಕುಮಾರ್ ಈ ಬಗ್ಗೆ ತಿಳಿಸಿದ್ದಾರೆ.
ರೈಲ್ವೆಯ ದೂರು ಪೋರ್ಟಲ್ ನಲ್ಲಿ ದೂರನ್ನು ದಾಖಲಿಸಿದ್ದಾರೆ. ಏಳರಿಂದ ಹತ್ತು ಮಂದಿ ಅಪರಿಚಿತರು ರೈಲಿನ ಬೋಗಿಗಳನ್ನು ಏರಿದರು. ಚೂಪಾದ ಚಾಕುಗಳು ಅವರ ಬಳಿ ಇದ್ದವು. ಪ್ರಯಾಣಿಕರ ಕುತ್ತಿಗೆ ಬಳಿ ಚಾಕುವನ್ನು ಹಿಡಿದು, ಬೆಲೆ ಬಾಳುವ ವಸ್ತುಗಳನ್ನು ನೀಡುವಂತೆ ಹೇಳಿದ್ದಾಗಿ ದೂರುದಾರರು ತಿಳಿಸಿದ್ದಾರೆ.
ಪರ್ಸ್ ಗಳು, ನಗದು, ಚಿನ್ನದ ಸರ, ಮೊಬೈಲ್ ಫೋನ್ ಗಳು ಇನ್ನೂ ಹಲವು ವಸ್ತುಗಳನ್ನು ದುಷ್ಕರ್ಮಿಗಳು ದೋಚಿದ್ದಾರೆ. ವಿಪರ್ಯಾಸ ಏನೆಂದರೆ ರೈಲ್ವೆ ಸಿಬ್ಬಂದಿ ಆಗಲಿ, ಭದ್ರತಾ ಸಿಬ್ಬಂದಿ ಆಗಲಿ ಅಲ್ಲಿ ಪ್ರಯಾಣಿಕರಿಗೆ ಸಿಕ್ಕಿಲ್ಲ. ಟಿಟಿಯನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಸಿಕ್ಕಿಲ್ಲ. ಅಟೆಂಡೆಂಟ್ ಕೂಡ ನಿಗದಿತ ಸ್ಥಳದಲ್ಲಿ ಇಲ್ಲದೆ ಬೇರೆಲ್ಲೋ ಮಲಗಿದ್ದರು ಎಂದು ಆರೋಪಿಸಿದ್ದಾರೆ.

ಸರೈ ರೊಹಿಲಾ ನಿಲ್ದಾಣ ತಲುಪುವ ಮುನ್ನ ಸಿಗ್ನಲ್ ಸಮಸ್ಯೆಯಾಗಿ ರೈಲು ನಿಂತಿತು ಎಂದು ರೈಲೆ ಅಧಿಕಾರಿಗಳು ತಿಳಿಸಿದ್ದಾರೆ. ಸಿಗ್ನಲ್ ಅನ್ನು ಬೇಕೆಂತಲೇ ಹಾಳುಗೆಡವಲಾಗಿದೆ ಎಂದು ರೈಲ್ವೆ ಸುರಕ್ಷಾ ತಂಡ ಹೇಳಿದೆ. ರೈಲಿಗೆ ನಮ್ಮ ತಂಡ ಭದ್ರತೆ ಒದಗಿಸಿರಲಿಲ್ಲ. ಪ್ರಯಾಣಿಕರಿಂದ ಮಾಹಿತಿ ಕಲೆ ಹಾಕುತ್ತಿದ್ದೇವೆ. ಶಂಕಿತರ ಚಿತ್ರವನ್ನು ಬಿಡಿಸುತ್ತಿದ್ದು, ಈ ಕೃತ್ಯದಲ್ಲಿ ಭಾಗಿಯಾಗಿರುವ ತಂಡವನ್ನು ಗುರುತಿಸುವ ಪ್ರಯತ್ನ ನಡೆದಿದೆ ಎಂದು ಆರ್ ಪಿಎಫ್ ತಿಳಿಸಿದೆ.
ಪ್ರಯಾಣಿಕರ ಚಿನ್ನದ ಆಭರಣಗಳು, ನಗದು, ಮೊಬೈಲ್ ಫೋನ್ ಗಳು ಹಾಗೂ ಸನ್ ಗ್ಲಾಸ್ ಗಳನ್ನು ಕೂಡ ದೋಚಲಾಗಿದೆ. ಈ ಪ್ರಕರಣದ ತನಿಖೆಯನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ನಿಂದ ತನಿಖೆ ಆರಂಭವಾಗಿದೆ.












Click it and Unblock the Notifications