ಭಾರತ: ಅಕಾಲಿಕ ಮರಣ ಕಂಡ ಪ್ರಭಾವಿ ರಾಜಕಾರಣಿಗಳು
ನವದೆಹಲಿ, ಜೂನ್ 3: ದೆಹಲಿಯಲ್ಲಿ ಇಂದು ಸಂಭವಿಸಿದ ಅಪಘಾತದಲ್ಲಿ ಮತ್ತೊಬ್ಬ ಪ್ರಭಾವಿ ರಾಜಕೀಯ ಮುಖಂಡರು ಸಾವನ್ನಪ್ಪಿದ್ದಾರೆ. ಇಂದು ಮೃತಪಟ್ಟ ಕೇಂದ್ರದ ನೂತನ ಸಚಿವ ಗೋಪಿನಾಥ್ ಮುಂಡೆ ಅವರಿಂದ ಹಿಡಿದು ಅನೇಕ ಪ್ರಭಾವಿ ನಾಯಕರು ಅಕಾಲಿಕವಾಗಿ ಸಾವಿನ ಮನೆಗೆ ನಡೆದುಹೋಗಿದ್ದಾರೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್ ಮುಂಡೆ (65) ಅವರು ಇಂದು ಬೆಳಗ್ಗೆ 6.30ರ ಸುಮಾರಿನಲ್ಲಿ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಮೋತಿಬಾಗ್ ಪ್ರದೇಶದಲ್ಲಿ ಕಾರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದರು. ಗೋಪಿನಾಥ್ ಮುಂಡೆ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ 7.45ಕ್ಕೆ ಮುಂಡೆ ಅವರು ವಿಧಿವಶರಾಗಿದ್ದಾರೆ.
ಹಾಗೆ
ನೋಡಿದರೆ
ಭಾರತದಲ್ಲಿ
ಆಗಾಗ
ಪ್ರಭಾವಿ
ಮುಖಂಡರು
ತಮ್ಮ
ಜೀವನಘಟ್ಟದಲ್ಲಿ
ಅಕಾಲಿಕ
ಸಾವನ್ನಪ್ಪಿದ್ದಾರೆ.
ಅಕಾಲಿಕ
ಮರಣ
ಕಂಡ
ಕೆಲ
ಪ್ರಭಾವಿ
ನಾಯಕರನ್ನು
ಹೆಸರಿಸುವುದಾದರೆ
...
ವಿದ್ಯಾ ಚರಣ್ ಶುಕ್ಲಾ:
ಸುಮಾರು 1 ವರ್ಷದ ಹಿಂದೆ 2013ರ ಜೂನ್ ತಿಂಗಳಲ್ಲಿ ಹಿರಿಯ ಕಾಂಗ್ರೆಸ್ಸಿಗ, ಮಧ್ಯಪ್ರದೇಶದ ಮೊದಲ ಮುಖ್ಯಮಂತ್ರಿ, ಲೋಕಸಭೆಗೆ 9 ಬಾರಿ ಆಯ್ಕೆಯಾಗಿದ್ದ ಮಾಜಿ ಕೇಂದ್ರ ಸಚಿವ ವಿಸಿ ಶುಕ್ಲಾ (84) ಅವರು ಛತ್ತೀಸ್ ಗಢದಲ್ಲಿ ಮಾವೋ ಉಗ್ರವಾದಿಗಳ ಗುಂಡಿಗೆ ಬಲಿಯಾಗಿದ್ದರು. ಅವರಿಗೆ ಪತ್ನಿ ಮತ್ತು ಮೂವರು ಪುತ್ರಿಯರು ಇದ್ದರು. 2013ರ ಮೇ 25ರಂದು ನಡೆದಿದ್ದ ಮಾವೋ ಉಗ್ರರ ರಕ್ತಸಿಕ್ತ ದಾಳಿಯಲ್ಲಿ ಛತ್ತೀಸ್ ಗಢದ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಕರ್ಮ, ರಾಜ್ಯದ ಮಾಜಿ ಶಾಸಕ ಉದಯ್ ಮೊದಲಿಯಾರ್ ಸೇರಿದಂತೆ 28 ಮಂದಿ ಅಸುನೀಗಿದ್ದರು.
ವಿಲಾಸರಾವ್ ದೇಶಮುಖ್:
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಅವರು ಲಿವರ್ ಮತ್ತು ಕಿಡ್ನಿ ವೈಫಲ್ಯದಿಂದ (ಸೈರೋಸಿಸ್) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಸುಮಾರು ಒಂದು ವರ್ಷ ಕಾಲ ಚಿಕಿತ್ಸೆ ಪಡೆದ ಬಳಿಕ 2013ರ ಆಗಸ್ಟಿನಲ್ಲಿ ಸಾವಿಗೆ ತುತ್ತಾದರು.
ವೈಎಸ್ ರಾಜಶೇಖರ್ ರೆಡ್ಡಿ:
ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈಎಸ್ ರಾಜಶೇಖರ್ ರೆಡ್ಡಿ 2009ರ ಸೆಪ್ಟೆಂಬರಿನಲ್ಲಿ ಹೆಲಿಕಾಪ್ಟರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹವಾಮಾನ ವೈಪರೀತ್ಯದಿಂದ ಅಪಘಾತಕ್ಕೀಡಾಗಿ ನಲ್ಲಮಾಲ ಅರಣ್ಯ ಪ್ರದೇಶದಲ್ಲಿ ಸಾವಿಗೀಡಾಗಿದ್ದರು.
ಪ್ರಮೋದ್ ಮಹಾಜನ್:
ಇಂದು ಮೃತಪಟ್ಟ ಗೋಪಿನಾಥ್ ಮುಂಡೆ ಮತ್ತು ಪ್ರಮೋದ್ ಮಹಾಜನ್ ಅವರು ಕಾಲೇಜು ಗೆಳೆಯರು. ಗೋಪಿನಾಥ್ ಅವರು ಪ್ರಮೋದ್ ಮಹಾಜನ್ ಅವರ ಸೋದರಿಯ ಪತಿ. 2006 ಮೇ 3ರಂದು ಗುಂಡಿನೇಟಿಗೆ ಬಲಿಯಾಗಿದ್ದರು. 13 ದಿನಗಳ ಹಿಂದೆ ಪ್ರಮೋದ್ ಮಹಾಜನ್ ಅವರ ಸೋದರನೇ (ಪ್ರವೀಣ್ ಮಹಾಜನ್) ಆತನಿಗೆ ಗುಂಡಿಟ್ಟಿದ್ದರು.
ಜಿಂಎಂಸಿ ಬಾಲಯೋಗಿ
ವೈಎಸ್ ರಾಜಶೇಖರ್ ರೆಡ್ಡಿ ಅವರ ಮಾದರಿಯಲ್ಲೇ ಲೋಕಸಭೆಯ ಸ್ಪೀಕರ್ ಆಗಿದ್ದ ಬಾಲಯೋಗಿ (50) ಅವರು ಸಹ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವಿಗೀಡಾದರು. ಆಂಧ್ರದ ಕೃಷ್ಣ ಜಿಲ್ಲೆಯಲ್ಲಿ 2002ರ ಮಾರ್ಚ್ 3ರಂದು ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು.
ಮಾಧವರಾವ್ ಸಿಂಧಿಯಾ:
ಕಾಂಗ್ರೆಸ್ ಪಕ್ಷದ ವರ್ಚಸ್ವೀ ನಾಯಕ ಮಾಧವರಾವ್ ಸಿಂಧಿಯಾ ಅವರು 2001ರ ಸೆಪ್ಟೆಂಬರ್ 30ರಂದು ಉತ್ತರಪ್ರದೇಶದ ಮಾಯನಪುರಿ ಜಿಲ್ಲೆಯಲ್ಲಿ ನಡೆದ ವಿಮಾನಾಪಘಾತದಲ್ಲಿ ವಿಧಿವಶರಾಗಿದ್ದರು. ಸಿಂಧಿಯಾರ ಆಪ್ತ ಕಾರ್ಯದರ್ಶಿ, ಮೂವರು ಪತ್ರಕರ್ತರು ಮತ್ತು ಇಬ್ಬರು ಪೈಲಟುಗಳು ಸಾವನ್ನಪ್ಪಿದ್ದರು.
ರಾಜೇಶ್ ಪೈಲಟ್:
ಕಾಂಗ್ರೆಸ್ ನಾಯಕ ರಾಜೇಶ್ ಪೈಲಟ್ ಅವರು ಭಾರತೋಯ ವಾಯುಪಡೆಯಲ್ಲಿ ಪೈಲಟ್ ಕೆಲಸಕ್ಕೆ ರಾಜೀನಾಮೆ ನೀಡಿ, ರಾಜಕೀಯಕ್ಕೆ ಧುಮಕಿದ್ದರು. 2000ರ ಜೂನ್ 11ರಂದು ಜೈಪುರದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಅವರು ಪತ್ನಿ ರಮಾ ಪೈಲಟ್, ಪುತ್ರ ಸಚಿನ್ ಪೈಲಟ್ ಮತ್ತು ಸಾರಿಕಾ ಪೈಲಟ್ ಅವರನ್ನು ಅಗಲಿದರು.
ಸಂಜಯ್ ಗಾಂಧಿ:
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುತ್ರ ಸಂಜಯ್ ಗಾಂಧಿ 1980ರ ಜೂನ್ 30ರಂದು ದಿಲ್ಲಿಯಲ್ಲಿ ನಡೆದ ವಿಮಾನಾಪಘಾತದಲ್ಲಿ ಸಾವನ್ನಪ್ಪಿದ್ದರು. ದಿಲ್ಲಿ ವೈಮಾನಿಕ ನೆಲೆಯಲ್ಲಿ ವಿಮಾನ ಹಾರಾಟ ಅಭ್ಯಾಸದಲ್ಲಿ ನಿರತರಾಗಿದ್ದ ಸಂಜಯ್ ಗಾಂಧಿ ವಿಮಾನದ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿ, ಸ್ಥಳದಲ್ಲೇ ಸಾವು ಕಂಡರು.
ಇಂದಿರಾ ಗಾಂಧಿ:
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಅಂಗರಕ್ಷಕರ ಗುಂಡಿಗೆ (1984 ಅಕ್ಟೋಬರ್ 31ರಂದು ದಿಲ್ಲಿಯಲ್ಲಿ) ಬಲಿಯಾಗಿದ್ದರು.
ರಾಜೀವ್ ಗಾಂಧಿ:
ಮಾಜಿ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಆತ್ಮಾಹುತಿ ದಾಳಿಗೆ ಬಲಿಯಾಗಿದ್ದರು.
ದೋರ್ಜಿ ಖಂಡು
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ದೋರ್ಜಿ ಖಂಡು ಹೆಲಿಕಾಪ್ಟರ್ ದುರಂತದಲ್ಲಿ (2011ರ ಏಪ್ರಿಲ್ 30) ಕೊನೆಯುಸಿರೆಳೆದಿದ್ದರು.
ಸಾಹಿಬ್ ಸಿಂಗ್ ವರ್ಮಾ
ಬಿಜೆಪಿ ನಾಯಕ, ದಿಲ್ಲಿಯ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಸಾಹಿಬ್ ಸಿಂಗ್ ವರ್ಮಾ ಅವರು 2006ರಲ್ಲಿ ರಸ್ತೆ ಅಪಘಾತದಲ್ಲಿ ಸಾವು ಕಂಡರು.