ಗಲ್ಲು ಶಿಕ್ಷೆ ತಪ್ಪಿಸಿಕೊಂಡ ಮಾಜಿ ಕಾಂಗ್ರೆಸ್ ನಾಯಕ
ನವದೆಹಲಿ, ಅ.8: 'ಯುವ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶರ್ಮ 'ತಂದೂರ್ ಕೊಲೆ' ಪ್ರಕರಣದಲ್ಲಿ ಗಲ್ಲು ಶಿಕ್ಷೆಯಿಂದ ಬಚಾವಾಗಿದ್ದಾರೆ. ಸುಪ್ರೀಂಕೋರ್ಟ್ ಮಂಗಳವಾರ ಸುಶೀಲ್ ಕುಮಾರ್ ಗೆ ಶುಭಸುದ್ದಿ ನೀಡಿದೆ.
ಆದರೆ, ಸುಶೀಲ್ ಕುಮಾರ್ ಅವರು ಉಳಿದ ಜೀವಿತಾವಧಿ ಕಾಲವನ್ನು ಜೈಲಿನಲ್ಲೇ ಕಳೆಯಬೇಕಾಗುತ್ತದೆ. ಗಲ್ಲು ಶಿಕ್ಷೆ ಬದಲಿಗೆ ಜೀವಾವಧಿ ಶಿಕ್ಷೆ ಅನುಭವಿಸಲಿ ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿದೆ.
1995ರ ಜುಲೈ 2-3ರ ಮಧ್ಯರಾತ್ರಿಯಲ್ಲಿ ಪತ್ನಿ ನೈನಾ ಸಾಹ್ನಿ ಅವರನ್ನು ಕೊಂದು ತಂದೂರ್ ನಲ್ಲಿಟ್ಟು ಶವವನ್ನು ಸುಶೀಲ್ ಕುಮಾರ್ ಶರ್ಮ ಸುಟ್ಟು ಹಾಕಿದ್ದರು. ಪತ್ನಿ ನೈನಾ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಶಂಕೆ ಸುಶೀಲ್ ಗೆ ಬಂದಿತ್ತು. ಸುಶೀಲ್ ಅವರಿಗೆ ನವೆಂಬರ್ 7, 2003ರಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಆದರೆ, ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಶೀಲ್ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು.
ತಂದೂರ್ ಪ್ರಕರಣ : ಸುಶೀಲ್ ಕುಮಾರ್ ಅವರ ಪತ್ನಿ ನೈನಾ ಕೂಡಾ ಕಾಂಗ್ರೆಸ್ ಕಾರ್ಯಕರ್ತೆಯಾಗಿದ್ದರು. ನೈನಾ ಅವರು ಮತ್ಲೂಬ್ ಕರೀಂ ಅವರ ಜತೆ ಆಪ್ತ ಗೆಳೆತನ ಬೆಳೆಸಿಕೊಂಡಿದ್ದು ಸುಶೀಲ್ ಗೆ ಸಹಿಸಲು ಸಾಧ್ಯವಾಗಲಿಲ್ಲ.

ಕರೀಂ ಹಾಗೂ ನೈನಾ ಇಬ್ಬರು ಸಹಪಾಠಿಗಳಾಗಿದ್ದು ಇಬ್ಬರು ಕಾಂಗ್ರೆಸ್ ನಲ್ಲಿ ಕಾರ್ಯಕರ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ಕಾಲದಲ್ಲಿ ಯುವ ಕಾಂಗ್ರೆಸ್ ಮುಖಂಡರಾಗಿ ಹೆಸರು ಗಳಿಸಿದ್ದ ಸುಶೀಲ್ ಕುಮಾರ್ ಅವರಿಗೆ ಪತ್ನಿ ಮೇಲೆ ಶಂಕೆ ವ್ಯಕ್ತವಾಗಿದೆ. ಇಬ್ಬರ ನಡುವೆ ಅನೈತಿಕ ಸಂಬಂಧ ಇದೇ ಎಂದು ಬಲವಾಗಿ ನಂಬಿಕೆ ಹುಟ್ಟಿದೆ.
ಜುಲೈ 2 1995ರಂದು ಸುಶೀಲ್ ಕುಮಾರ್ ಮನೆಗೆ ಬಂದಾಗ ನೈನಾ ಯಾರೊಂದಿಗೋ ಫೋನ್ ನಲ್ಲಿ ಹರಟುತ್ತಾ ಮದ್ಯ ಸೇವಿಸುತ್ತಿರುವುದನ್ನು ಕಂಡಿದ್ದಾರೆ. ಕೆಲ ಹೊತ್ತಿನ ನಂತರ ನೈನಾ ಫೋನ್ ಕೆಳಗಿಟ್ಟು ತನ್ನ ರೂಮಿಗೆ ಹೋಗಿದ್ದಾರೆ.
ಪತ್ನಿಯ ಜತೆ ಇಷ್ಟು ಹೊತ್ತು ಮಾತನಾಡಿದ್ದು ಯಾರಿರಬಹುದು ಎಂಬ ಕುತೂಹಲದಿಂದ ಸುಶೀಲ್ , ಫೋನ್ ರೀಡಯಲ್ ಮಾಡಿದ್ದಾರೆ. ಅತ್ತ ಕಡೆಯಿಂದ ಕರೀಂ ಹಲೋ ಎಂದು ಹೇಳಿದ್ದಾರೆ ಇದರಿಂದ ಕೆರಳಿದ ಸುಶೀಲ್ ಮರು ಮಾತನಾಡದೆ ಫೋನ್ ಇಟ್ಟು ನೈನಾ ಬಳಿ ಹೋಗಿದ್ದಾರೆ.
ನಂತರ ಪತ್ನಿ ನೈನಾರನ್ನು ಕೊಂದ ಸುಶೀಲ್ ಶವವನ್ನು ಬಗಿಯಾ ಎಂಬ ರೆಸ್ಟೋರೆಂಟ್ ಗೆ ಕೊಂಡೊಯ್ದಿದ್ದಾರೆ. ರೆಸ್ಟೋರೆಂಟ್ ಮ್ಯಾನೇಜರ್ ಕೇಶವ್ ಕುಮಾರ್ ಅವರ ಸಹಾಯ ಪಡೆದು ಶವವನ್ನು ಮರೆಯಾಗಿಸಲು ಯೋಜನೆ ಹಾಕಿದ್ದಾರೆ.
ಮೊದಲಿಗೆ ಶವವನ್ನು ತುಂಡು ತುಂಡಾಗಿ ಕತ್ತರಿಸಿ, ತಂದೂರ್ (ಮಣ್ಣಿನ ಒಲೆ) ನಲ್ಲಿ ಹಾಕಿ ಸುಡಲು ಯತ್ನಿಸಿದ್ದಾರೆ. ಆದರೆ, ತಂದೂರ್ ನಿಂದ ಬಂದ ಕೆಟ್ಟ ಹೊಗೆ ಹೊರಗೆ ತಿರುಗುತ್ತಿದ್ದ ಪೊಲೀಸರ ಮೂಗಿಗೆ ಬಡಿದಿದೆ.
ತಕ್ಷಣವೇ ಅಲ್ಲಿಗೆ ಬಂದ ಪೇದೆಗಳು ಕೇಶವ ಕುಮಾರ್ ಹಾಗೂ ಸುಶೀಲ್ ಮಾಡುತ್ತಿದ್ದ ಕೃತ್ಯ ಕಂಡು ಹೌಹಾರಿದ್ದಾರೆ. ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದ ಪೇದೆಗಳಿಗೆ ಕೇಶವ್ ಮಾತ್ರ ಸಿಕ್ಕಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ನಾಪತ್ತೆಯಾಗಿದ್ದ ಸುಶೀಲ್ ಕೊನೆಗೆ ಜುಲೈ 10, 1995ರಂದು ಶರಣಾಗಿದ್ದಾರೆ.
ಏಮ್ಸ್ ಸಂಸ್ಥೆಯ ಪ್ರೊ ಟಿ.ಡಿ ಡೋಗ್ರಾ ಅವರ ನೇತೃತ್ವದ ತಂಡ ಎರಡನೇ ಬಾರಿಗೆ ನೈನಾ ಶವದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಪ್ರಕಾರ ನೈನಾ ಶವದ ಹಣೆ ಹಾಗೂ ಕುತ್ತಿಗೆ ಭಾಗದಿಂದ ಎರಡು ಬುಲೆಟ್ ಹೊರ ತೆಗೆಯಲಾಗಿದೆ. ಮೊದಲ ವರದಿಯಲ್ಲಿ ಈ ಅಂಶಗಳು ಕಂಡು ಬಂದಿರಲಿಲ್ಲ. 2003ರಲ್ಲಿ ಗಲ್ಲುಶಿಕ್ಷೆ ಪಡೆದಿದ್ದ ಸುಶೀಲ್ ಅವರು ಹೈಕೋರ್ಟ್ ಸುಪ್ರೀಂಕೋರ್ಟ್ ಸುತ್ತಿ ಕೊನೆಗೂ ಜೀವಾವಧಿ ಶಿಕ್ಷೆ ಪಡೆಯುವಲ್ಲಿ ಸಫಲರಾಗಿದ್ದಾರೆ.












Click it and Unblock the Notifications