Breaking:ಸೈಯದ್ ಶಾನವಾಜ್ ಪ್ರಕರಣ: ದೆಹಲಿ ಪೊಲೀಸರಿಗೆ ಹೈಕೋರ್ಟ್ ತರಾಟೆ
ಕೋಲ್ಕತ್ತಾ, ಆಗಸ್ಟ್ 18: ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ನಾಯಕ ಸೈಯದ್ ಶಾನವಾಜ್ ಹುಸೇನ್ ವಿರುದ್ಧ ಎಫ್ಐಆರ್ ದಾಖಲಿಸದ ದೆಹಲಿ ಪೊಲೀಸರ ನಡೆಯನ್ನು ದೆಹಲಿ ಹೈಕೋರ್ಟ್ ಕಟುವಾಗಿ ಟೀಕಿಸಿದೆ.
ದೆಹಲಿ ಪೊಲೀಸರಿಗೆ ಸೈಯದ್ ಶಾನವಾಜ್ ಹುಸೇನ್ ವಿರುದ್ಧ ಎಫ್ಐಆರ್ ದಾಖಲಿಸಲು "ಸಂಪೂರ್ಣ ಹಿಂಜರಿಕೆ" ಎಂದು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ತಕ್ಷಣವೇ ಪ್ರಕರಣ ದಾಖಲಿಸಿ, ಮೂರು ತಿಂಗಳೊಳಗೆ ಅವರ ವಿರುದ್ಧದ ಅತ್ಯಾಚಾರದ ಆರೋಪಗಳ ತನಿಖೆಯನ್ನು ಪೂರ್ಣಗೊಳಿಸಲು ನಿರ್ದೇಶಿಸಿದೆ.
ಆರೋಪಿ ಸೈಯದ್ ಶಾನವಾಜ್ ಹುಸೇನ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ 2018 ರ ಕೆಳ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿ ಆಶಾ ಮೆನನ್ ಎತ್ತಿಹಿಡಿದಿದ್ದಾರೆ.

2018ರಲ್ಲಿ ಸಂತ್ರಸ್ತೆ ಪೊಲೀಸ್ ಕಮಿಷನರ್ಗೆ ಕಳುಹಿಸಿದ ದೂರಿನಲ್ಲಿ ಅತ್ಯಾಚಾರದ ಅಪರಾಧದ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ದೂರನ್ನು ಪೊಲೀಸ್ ಠಾಣೆಗೆ ರವಾನಿಸಿದಾಗ ಅಧಿಕಾರಿಯು ಎಫ್ಐಆರ್ ದಾಖಲಿಸಲು ಕಾನೂನಿನಡಿಯಲ್ಲಿ ಬಾಧ್ಯತೆ ಹೊಂದಿದ್ದರು ಎಂದು ನ್ಯಾಯಮೂರ್ತಿ ಆಶಾ ಮೆನನ್ ಹೇಳಿದ್ದಾರೆ.
''ಆದರೆ, ಪ್ರಸ್ತುತ ಪ್ರಕರಣದಲ್ಲಿ, 21 ಜೂನ್ 2018 ರಂದು ಮ್ಯಾಜಿಸ್ಟ್ರೇಟ್ ಮುಂದೆ ದೂರು ಸಲ್ಲಿಸುವವರೆಗೂ, ಪೊಲೀಸ್ ಠಾಣೆಯ ಉಸ್ತುವಾರಿ ಹೊಂದಿದ್ದ ಅಧಿಕಾರಿ ಏನನ್ನೂ ಮಾಡಲಿಲ್ಲ. ವಾಸ್ತವವಾಗಿ, ನ್ಯಾಯಾಲಯದ ಮುಂದೆ ಸಲ್ಲಿಸಲಾದ ವರದಿಯು ಕಮಿಷನರ್ ಕಚೇರಿಯಿಂದ 2018 ರ ಜೂನ್ 20 ರಂದು ಮೆಹ್ರೌಲಿ ಪೊಲೀಸ್ ಠಾಣೆಯಲ್ಲಿ ಸ್ವೀಕರಿಸಲ್ಪಟ್ಟ ದೂರನ್ನು ಉಲ್ಲೇಖಿಸುತ್ತದೆ. ಹೀಗಾಗಿ ಫಾರ್ವರ್ಡ್ ಮಾಡಿದ ದೂರಿನ ಮೇಲೆ ಎಫ್ಐಆರ್ ದಾಖಲಿಸದಿರುವ ಕುರಿತು ಪೊಲೀಸರು ವಿವರಿಸಬೇಕಾಗಿದೆ" ಎಂದು ಆದೇಶದಲ್ಲಿ ನ್ಯಾಯಮೂರ್ತಿ ಹೇಳಿದ್ದಾರೆ.

ಪೊಲೀಸರು ಸಲ್ಲಿಸಿರುವ ಸ್ಥಿತಿ ವರದಿಯಲ್ಲಿ ನಾಲ್ಕು ಸಂದರ್ಭಗಳಲ್ಲಿ ಸಂತಸ್ತೆಯ ಹೇಳಿಕೆಯನ್ನು ದಾಖಲಿಸಲಾಗಿದೆ. ಆದರೆ, ಎಫ್ಐಆರ್ ಏಕೆ ದಾಖಲಿಸಿಲ್ಲ ಎಂಬುದಕ್ಕೆ ಯಾವುದೇ ವಿವರಣೆಯಿಲ್ಲ ಎಂದು ನ್ಯಾಯಮೂರ್ತಿ ಮೆನನ್ ಹೇಳಿದರು.
''ಎಫ್ಐಆರ್ ಮಾತ್ರ ತನಿಖೆಯನ್ನು ಕಾರ್ಯರೂಪಕ್ಕೆ ತರುತ್ತದೆ. ದೂರು ನೀಡಿದ ಅಪರಾಧದ ತನಿಖೆಗೆ ಇದು ಅಡಿಪಾಯವಾಗಿದೆ. ತನಿಖೆಯ ನಂತರವೇ ಅಪರಾಧ ಎಸಗಿದ್ದಾರೆಯೇ ಅಥವಾ ಇಲ್ಲವೇ ಎಂಬ ತೀರ್ಮಾನಕ್ಕೆ ಪೊಲೀಸರು ಬರಬಹುದು" ಎಂದು ಹೇಳಿದ್ದಾರೆ.
ತನ್ನ ವಿರುದ್ಧ ಎಫ್ಐಆರ್ ದಾಖಲಿಸಲು ಕೆಳ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿದ ಹುಸೇನ್, ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಫ್ಐಆರ್ ದಾಖಲಿಸಲು ನಿರ್ದೇಶಿಸಲು ಕಾರಣಗಳನ್ನು ಬಹಿರಂಗಪಡಿಸಿಲ್ಲ ಎಂದಿದ್ದಾರೆ. ಜೊತೆಗೆ ಪೊಲೀಸರ ತನಿಖೆಯು ಮಹಿಳೆಯ ಪ್ರಕರಣವನ್ನು ಸಂಪೂರ್ಣವಾಗಿ ಸುಳ್ಳು ಎಂದು ತಿಳಿಸಿದೆ ಎಂದು ವಾದಿಸಿದ್ದರು.












Click it and Unblock the Notifications