ಹರಿದ್ವಾರ ದ್ವೇಷ ಭಾಷಣ: ಜಿತೇಂದ್ರ ನಾರಾಯಣ್ ತ್ಯಾಗಿಗೆ ಸುಪ್ರೀಂ ಕೋರ್ಟ್ ಜಾಮೀನು
ನವದೆಹಲಿ, ಸೆ.12: ಹರಿದ್ವಾರ ದ್ವೇಷ ಭಾಷಣ ಪ್ರಕರಣದ ಆರೋಪಿ ಜಿತೇಂದ್ರ ನಾರಾಯಣ್ ತ್ಯಾಗಿ ಅಲಿಯಾಸ್ ವಸೀಂ ರಿಜ್ವಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ.
ಬಾಕಿ ಉಳಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಯಾವುದೇ ಹೇಳಿಕೆ ನೀಡಬಾರದು ಎಂಬ ಷರತ್ತಿನ ಮೇಲೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ನೀಡಿದೆ.
ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ಕೇಸ್: ಯತಿಗೆ ಜಾಮೀನು
"ಈ ಪ್ರಕರಣದಲ್ಲಿ ಆರೋಪಗಳನ್ನು ಈಗಾಗಲೇ ರೂಪಿಸಿರುವಾಗ ಅವರನ್ನು ಕಸ್ಟಡಿಯಲ್ಲಿಡಲು ಯಾವುದೇ ಉದ್ದೇಶ ಉಳಿದಿಲ್ಲ" ಎಂದು ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಬಿವಿ ನಾಗರತ್ನ ಅವರ ಪೀಠ ಹೇಳಿದೆ.
ಧರ್ಮ ಸಂಸದ್ನಲ್ಲಿ ದ್ವಾಷ ಕಾರುವ ಹೇಳಿಕೆಗಳು
ಹರಿದ್ವಾರದಲ್ಲಿ ಡಿಸೆಂಬರ್ 17 ರಿಂದ 19 ರವರೆಗೆ ನಡೆದ ಧರ್ಮ ಸಂಸದ್ನಲ್ಲಿ ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಸಂಘಟಕ ಯತಿ ನರಸಿಂಗಾನಂದ್ ಅವರೊಂದಿಗೆ ಜನವರಿ 13 ರಂದು ತ್ಯಾಗಿಯನ್ನು ಬಂಧಿಸಲಾಯಿತು.
ಸಮಾರಂಭದಲ್ಲಿ ಅವರ ಭಾಷಣದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಇಬ್ಬರೂ ಧರ್ಮಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಮಾರ್ಚ್ನಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿತ್ತು. ವಿಚಾರಣಾ ನ್ಯಾಯಾಲಯವು ಮೇ ತಿಂಗಳಲ್ಲಿ ತ್ಯಾಗಿ ಮತ್ತು ಇತರರ ವಿರುದ್ಧ ಆರೋಪಗಳನ್ನು ಮಾಡಿತ್ತು.
ಸುಪ್ರೀಂ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಕೆ
ಮಾರ್ಚ್ 8 ರಂದು ಉತ್ತರಾಖಂಡ ಹೈಕೋರ್ಟ್ ಅವರಿಗೆ ಜಾಮೀನು ನಿರಾಕರಿಸಿದ ನಂತರ, ಜಿತೇಂದ್ರ ನಾರಾಯಣ್ ತ್ಯಾಗಿ ಅವರ ವೈದ್ಯಕೀಯ ಆರೋಗ್ಯ ಹದಗೆಟ್ಟಿದೆ. ಜೊತೆಗೆ ಇತರ ಸಹ-ಆರೋಪಿ ನರಸಿಂಗಾನಂದರಿಗೆ ಫೆಬ್ರವರಿಯಲ್ಲಿ ಈಗಾಗಲೇ ಜಾಮೀನು ನೀಡಲಾಗಿದೆ ಎಂಬ ಅಂಶವನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದರು.
ಮೇ 17 ರಂದು ತ್ಯಾಗಿಗೆ ಮೂರು ತಿಂಗಳ ವೈದ್ಯಕೀಯ ಜಾಮೀನು ನೀಡಲಾಯಿತು. ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ತ್ಯಾಗಿ ವಿರುದ್ಧ ಮೂರು ವಿಭಿನ್ನ ಅಪರಾಧಗಳು ದಾಖಲಾಗಿವೆ ಎಂದು ಉತ್ತರಾಖಂಡ ಸರ್ಕಾರವು ಜಾಮೀನು ನೀಡುವುದನ್ನು ವಿರೋಧಿಸಿತು.
ತ್ಯಾಗಿ ವಿರುದ್ಧ ಮೂರು ವಿವಿಧ ಪ್ರಕರಣಗಳು ದಾಖಲು
ತಮ್ಮ ವಿರುದ್ಧದ ಎಲ್ಲಾ ಪ್ರಥಮ ಮಾಹಿತಿ ವರದಿಗಳನ್ನು (ಎಫ್ಐಆರ್) ಸೇರಿಸಲು ತ್ಯಾಗಿ ಸಲ್ಲಿಸಿದ ಪ್ರತ್ಯೇಕ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿ ಉತ್ತರಾಖಂಡ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ.
ವಕೀಲ ಪುಲ್ಕಿತ್ ಶ್ರೀವಾಸ್ತವ ಅವರೊಂದಿಗೆ ತ್ಯಾಗಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ಅರ್ಜಿದಾರರ ವಿರುದ್ಧ ಬಾಕಿ ಉಳಿದಿರುವ ಪ್ರಕರಣಗಳ ಪಟ್ಟಿಯನ್ನು ನೀಡಿದರು. ದ್ವೇಷ ಭಾಷಣಕ್ಕೆ ಸಂಬಂಧಿಸಿದ ಎಫ್ಐಆರ್ಗಳನ್ನು ಒಂದು ಕಡೆ ಸೇರಿಸಲು ನಿರ್ದೇಶನ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಒಂದೆಡೆ ಸೇರಿಸಲು ಸಾಧ್ಯವಿಲ್ಲ ಎಂದ ವಕೀಲರು
ಉತ್ತರಾಖಂಡದ ಡೆಪ್ಯುಟಿ ಅಡ್ವೊಕೇಟ್ ಜನರಲ್ ಜತೀಂದರ್ ಕುಮಾರ್ ಸೇಥಿ, ತ್ಯಾಗಿ ವಿರುದ್ಧ ದಾಖಲಾಗಿರುವ ಮೂರು ಅಪರಾಧಗಳು ವಿಭಿನ್ನ ಘಟನೆಗಳಿಗೆ ಸಂಬಂಧಿಸಿವೆ ಮತ್ತು ಬೇರೆ ಬೇರೆ ಅಪರಾಧಗಳ ಅಡಿಯಲ್ಲಿ ಒಟ್ಟಿಗೆ ಸೇರಿಸಲಾಗುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಹರಿದ್ವಾರದ ದ್ವೇಷ ಭಾಷಣದ ಪ್ರಕರಣದಲ್ಲಿ, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 153A (ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೆಕ್ಷನ್ 298 (ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಗುರಿಯನ್ನು ಹೊಂದಿರುವ ಪದಗಳನ್ನು ಉಚ್ಚರಿಸುವುದು) ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಲಾಗಿದೆ.
ಮೂರು ಪ್ರಕರಣಗಳ ಪ್ರತ್ಯೇಕ ವಿಚಾರಣೆಗೆ ಮನವಿ
ಈ ವರ್ಷ ಜನವರಿ 2 ರಂದು ಹರಿದ್ವಾರ ಕೊತ್ವಾಲಿಯಲ್ಲಿರುವ ಜ್ವಾಲಾಪುರ ಹರಿದ್ವಾರ ನಿವಾಸಿ ನದೀಮ್ ಅಲಿ ಎಂಬುವವರ ದೂರಿನ ಮೇರೆಗೆ ತ್ಯಾಗಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಂತರ, ಆಅರೋಪಿ ತ್ಯಾಗಿ ಪ್ರವಾದಿ ಮುಹಮ್ಮದ್ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಕಾರುವ ವಿಡಿಯೋವನ್ನು ಸಹ ಬಿಡುಗಡೆ ಮಾಡಿದ್ದರು.
ದೂರುದಾರರ ಪರ ವಾದ ಮಂಡಿಸಿದ ವಕೀಲ ಮಹಮೂದ್ ಪ್ರಾಚಾ, ತ್ಯಾಗಿ ವಿರುದ್ಧದ ಪ್ರಕರಣಗಳು ವಿಭಿನ್ನವಾಗಿದ್ದು, ಪ್ರತ್ಯೇಕವಾಗಿ ವಿಚಾರಣೆ ನಡೆಸಬೇಕಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ತ್ಯಾಗಿ ನೀಡಿದ ಹೇಳಿಕೆಗಳು ಉತ್ತಮ ಅಭಿರುಚಿಯಿಂದ ಕೂಡಿಲ್ಲ ಎಂದು ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. "ಇದು ಇಡೀ ವಾತಾವರಣವನ್ನು ಹಾಳುಮಾಡುವ ವಿಷಯ" ಎಂದು ನ್ಯಾಯಾಲಯವು ತಿಳಿಸಿತ್ತು.
ಈ ಹಿಂದೆ ಉತ್ತರ ಪ್ರದೇಶ ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷರಾಗಿದ್ದ ವಸೀಂ ರಿಜ್ವಿ ಎಂಬ ಹೆಸರಿನಿಂದ ಕರೆಯಲ್ಪಡುವ ತ್ಯಾಗಿ ಅವರು ಕಳೆದ ವರ್ಷ ಡಿಸೆಂಬರ್ನಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ತಮ್ಮ ಹೆಸರನ್ನು ಜಿತೇಂದ್ರ ನಾರಾಯಣ್ ತ್ಯಾಗಿ ಎಂದು ಬದಲಿಸಿಕೊಂಡಿದ್ದಾರೆ.