ಇತಿಹಾಸದಲ್ಲೇ ಮೊದಲು: ಹೈಕೋರ್ಟ್ ಜಡ್ಜ್ ವಿರುದ್ಧ ತನಿಖೆಗೆ ಸುಪ್ರೀಂ ಅನುಮತಿ
ನವದೆಹಲಿ, ಜುಲೈ 31: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹದ್ದೊಂದು ಘಟನೆ ನಡೆದಿದೆ. ಹೈಕೋರ್ಟ್ ಮುಖ್ಯನ್ಯಾಯಾಧೀಶರ ವಿರುದ್ಧ ತನಿಖೆಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಅನುಮತಿ ನೀಡಿದ್ದಾರೆ.
ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎನ್.ಶುಕ್ಲಾ ವಿರುದ್ಧ ಪ್ರಕರಣ ದಾಖಲಿಸಲು ಸಿಬಿಐಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಒಪ್ಪಿಗೆ ಸೂಚಿಸಿದ್ದಾರೆ.
ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಾಲಿ ಮುಖ್ಯನ್ಯಾಯಾಧೀಶರೊಬ್ಬರನ್ನು ಭ್ರಷ್ಟಾಚಾರದ ಆರೋಪದಲ್ಲಿ ಸಿಬಿಐ ತನಿಖೆಗೆ ಒಳಪಡಿಸುತ್ತಿದೆ. ಹಾಲಿ ನ್ಯಾಯಾಧೀಶರ ವಿರುದ್ಧ ಮುಖ್ಯನ್ಯಾಯಮೂರ್ತಿಗಳ ಒಪ್ಪಿಗೆ ಇಲ್ಲದೆ ಕೇಸು ದಾಖಲಿಸುವಂತಿರಲಿಲ್ಲ, ಈಗ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ನ್ಯಾಯಾಧೀಶರ ಸಮಿತಿಯು 2017ರಲ್ಲಿ ನಡೆಸಿದ್ದ ತನಿಖೆಯಲ್ಲಿ ಅಲಹಾಬಾದ್ ಹೈಕೋರ್ಟ್ ಜಡ್ಜ್ ಎಸ್.ಎನ್.ಶುಕ್ಲಾ ಅವರು ಅಪರಾಧಿ ಎಂದು ಗೊತ್ತಾಗಿತ್ತು. ಖಾಸಗಿ ಮೆಡಿಕಲ್ ಕಾಲೇಜಿಗೆ ಅನುಕೂಲವಾಗುವಂತೆ ವ್ಯವಹಿಸಿದ್ದರು ಎಂಬ ಆರೋಪ ಶುಕ್ಲಾ ಅವರ ಮೇಲಿತ್ತು.

ಮೆಡಿಕಲ್ ಕಾಲೇಜಿಗೆ ಅನುಕೂಲಕರವಾಗುವಂತೆ ತೀರ್ಪು ತಿದಿದ್ದ ಶುಕ್ಲಾ
ಶುಕ್ಲಾ ಅವರು ತಮ್ಮದೇ ಪೀಠದ ಇತರ ನ್ಯಾಯಾಧೀಶರು ನೀಡಿದ್ದ ತೀರ್ಪನ್ನು ತಿದ್ದಿ, ಖಾಸಗಿ ಮೆಡಿಕಲ್ ಕಾಲೇಜೊಂದು ಅವಧಿ ಮುಗಿದ ಮೇಲೂ ವಿದ್ಯಾರ್ಥಿಗಳಿಗೆ ಪ್ರವೇಶ ಒದಗಿಸುವಲ್ಲಿ ಸಹಾಯ ಮಾಡಿದ್ದರು. ಇದು ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆ ಸಹ ಆಗಿದೆ.

ತಮ್ಮದೇ ಪೀಠದ ತೀರ್ಪು ತಿದ್ದಿದ್ದ ಶುಕ್ಲಾ
ಜಿಸಿಆರ್ಜಿ ಮೆಡಿಕಲ್ ಕಾಲೇಜು ಅವಧಿ ಮುಗಿದ ನಂತರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಅನುಮತಿ ಕೋರಿತ್ತು, ಆದರೆ ಇದನ್ನು ಸುಪ್ರೀಂಕೋರ್ಟ್ ನಿರಾಕರಿಸಿತ್ತು, ಅಲಹಾಬಾದ್ ಹೈಕೋರ್ಟ್ ತೀಠವೂ ಇದನ್ನು ನಿರಾಕರಿಸಿತ್ತು, ಆದರೆ ತಮ್ಮದೇ ಪೀಠ ನೀಡಿದ್ದ ತೀರ್ಪನ್ನು ತಿದ್ದಿ ಶುಕ್ಲಾ ಅವರು ಮೆಡಿಕಲ್ ಕಾಲೇಜಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಿದ್ದರು.

ಮುಖ್ಯನ್ಯಾಯಮೂರ್ತಿಗಳ ಸಲಹೆ ತಳ್ಳಿ ಹಾಕಿದ್ದ ಶುಕ್ಲಾ
ಸೇವೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಳ್ಳುವಂತೆ ಎಸ್.ಎನ್.ಶುಕ್ಲಾ ಅವರಿಗೆ ಈ ಹಿಂದಿನ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಸೂಚಿಸಿದ್ದರು. ಆದರೆ ಈ ಸಲಹೆಯನ್ನು ಶುಕ್ಲಾ ಅವರು ತಳ್ಳಿಹಾಕಿದ್ದರು.

ಮೋದಿಗೆ ಪತ್ರ ಬರೆದಿದ್ದ ದೀಪಕ್ ಮಿಶ್ರಾ
ಕಳೆದ ತಿಂಗಳಷ್ಟೆ ಮಿಶ್ರಾ ಅವರು ಮೋದಿ ಅವರಿಗೆ ಪತ್ರ ಬರೆದು, ಲೋಕಸಭೆಯಲ್ಲಿ ಶುಕ್ಲಾ ವಿರುದ್ಧ ನಿರ್ಣಯ ಕೈಗೊಳ್ಳಲು ಮನವಿ ಸಹ ಮಾಡಿದ್ದರು ಆದರೆ ಆ ಈ ವಿಷಯ ಲೋಕಸಭೆಯಲ್ಲಿ ಪ್ರಸ್ತಾಪ ಆಗಲಿಲ್ಲ. ಈಗ ಒಮ್ಮೆಲೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಶುಕ್ಲಾ ವಿರುದ್ಧ ಪ್ರಕರಣ ದಾಖಲಿಸಲು, ವಿಚಾರಣೆಗೆ ಒಳಪಡಿಸಲು ಒಪ್ಪಿಗೆ ನೀಡಿದ್ದಾರೆ.












Click it and Unblock the Notifications