'ಲವ್ ಜಿಹಾದ್' ಕಾನೂನು ವಿವಾದ: ಪರಿಶೀಲನೆಗೆ ಕೋರ್ಟ್ ಒಪ್ಪಿಗೆ, ತಡೆ ನೀಡಲು ನಕಾರ
ನವದೆಹಲಿ, ಜನವರಿ 6: ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಜಾರಿಗೆ ತಂದಿರುವ ಹೊಸ ವಿವಾದಾತ್ಮಕ 'ಲವ್ ಜಿಹಾದ್' ಕಾಯ್ದೆಗಳ ವಿರುದ್ಧದ ಅರ್ಜಿಗಳನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ. ಆದರೆ ಈ ಕಾಯ್ದೆಗಳಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.
ಅಂತರ್ ಧರ್ಮೀಯ ವಿವಾಹಗಳಿಗಾಗಿ ಧಾರ್ಮಿಕ ಮತಾಂತರ ಮಾಡುವುದನ್ನು ತಡೆಯಲು ತಂದಿರುವ ಕಾಯ್ದೆಗಳು ವಿವಾದಕ್ಕೆ ಕಾರಣವಾಗಿವೆ. ಈ ಸಂಬಂಧ ಕಾನೂನುಗಳಿಗೆ ತಡೆಯಾಜ್ಞೆ ನೀಡಲು ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ನಿರಾಕರಿಸಿದರೂ, ಎರಡು ವಿಭಿನ್ನ ಅರ್ಜಿಗಳಿಗೆ ಸಂಬಂಧಿಸಿದಂತೆ ಎರಡೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿಮಾಡಿದೆ.
ವಕೀಲ ವಿಶಾಲ್ ಠಾಕ್ರೆ ಮತ್ತು ಇತರರು ಹಾಗೂ ಸಿಟಿಜನ್ ಫಾರ್ ಜಸ್ಟೀಸ್ ಆಂಡ್ ಪೀಸ್ ಎನ್ಜಿಒ ಅಂತರ್ ಧರ್ಮೀಯ ಮದುವೆಗಳಿಗಾಗಿ ಧಾರ್ಮಿಕ ಮತಾಂತರ ಮಾಡುವುದನ್ನು ತಡೆಯುವ ಉತ್ತರ ಪ್ರದೇಶ ಕಾನೂನು ಬಾಹಿರ ಧಾರ್ಮಿಕ ಮತಾಂತರ ತಡೆ ಸುಗ್ರೀವಾಜ್ಞೆ, 2020 ಮತ್ತು ಉತ್ತರಾಖಂಡ ಧಾರ್ಮಿಕ ಸ್ವಾತಂತ್ರ್ಯದ ಕಾಯ್ದೆ 2018ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ.

ಎನ್ಜಿಒ ಪರ ಹಾಜರಾದ ಹಿರಿಯ ವಕೀಲ ಸಿಯು ಸಿಂಗ್, ನಿವೃತ್ತ ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರು ನೀಡಿದ್ದ ತೀರ್ಪನ್ನು ಉಲ್ಲೇಖಿಸಿದರು. ಇದೇ ರೀತಿಯ ಕಾನೂನುಗಳು ಬೇರೆ ರಾಜ್ಯಗಳಲ್ಲಿಯೂ ಸಿದ್ಧವಾಗುತ್ತಿದೆ ಎಂದು ತಿಳಿಸಿದರು. ಈ ಕಾನೂನುಗಳಲ್ಲಿನ ನಿಯಮಗಳು ದಬ್ಬಾಳಿಕೆ ಮತ್ತು ಭಯಾನಕ ಸ್ವರೂಪದ್ದಾಗಿವೆ. ಜನರು ಮದುವೆಯಾಗಲು ಸರ್ಕಾರದ ಪೂರ್ವಾನುಮತಿ ಪಡೆಯುವಂತಾಗಿದೆ ಎಂದು ಆರೋಪಿಸಿದರು.
ಎರಡೂ ರಾಜ್ಯಗಳಿಗೆ ನೋಟಿಸ್ ನೀಡಲಾಗುವುದು. ನಾಲ್ಕು ವಾರಗಳ ಒಳಗೆ ಅವರಿಂದ ಪ್ರತಿಕ್ರಿಯೆ ಬಯಸಲಾಗಿದೆ ಎಂದು ಕೋರ್ಟ್ ತಿಳಿಸಿತು. ರಾಜ್ಯಗಳ ಅಭಿಪ್ರಾಯವನ್ನು ಆಲಿಸದೆ ಕೆಲವು ನಿಯಮಗಳ ಮೇಲೆ ಹೇಗೆ ತಡೆ ನೀಡಲು ಸಾಧ್ಯ? ಎಂದು ಸಿಂಗ್ ಅವರ ಮನವಿಯನ್ನು ನ್ಯಾಯಪೀಠ ನಿರಾಕರಿಸಿತು.












Click it and Unblock the Notifications