ಸುನಂದಾ ಕೊಲೆ : 4 ತಾಸು ಶಶಿ ತರೂರ್ ವಿಚಾರಣೆ
ನವದೆಹಲಿ, ಜ.20 : ಮಾಜಿ ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ಶಶಿ ತರೂರ್ ಅವರನ್ನು ಸೋಮವಾರ ಸಂಜೆ ವಿಚಾರಣೆ ನಡೆಸಿದೆ. 40 ಪ್ರಶ್ನೆಗಳನ್ನು ತರೂರ್ ಅವರಿಗೆ ವಿಚಾರಣೆ ಸಂದರ್ಭದಲ್ಲಿ ಪೊಲೀಸರು ಕೇಳಿದ್ದಾರೆ.
ದೆಹಲಿಯ ವಸಂತ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಶಶಿ ತರೂರ್ ಅವರನ್ನು ಸುಮಾರು 4 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಎಸ್ಐಟಿ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಶಶಿ ತರೂರ್ ಉತ್ತರ ನೀಡಿದ್ದಾರೆ. ಮೂರು ಸುತ್ತುಗಳಲ್ಲಿ ವಿಚಾರಣೆ ನಡೆದಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲು ಮತ್ತೊಮ್ಮೆ ವಿಚಾರಣೆ ನಡೆಸಲಾಗುತ್ತದೆ ಎಂದು ತನಿಖಾ ತಂಡದ ಮೂಲಗಳು ಒನ್ ಇಂಡಿಯಾಕ್ಕೆ ತಿಳಿಸಿವೆ. [ಸುನಂದಾ ಪುಷ್ಕರ್ ಆತ್ಮಹತ್ಯೆಯಲ್ಲ, ಕೊಲೆ]

ಸುನಂದಾ ಪುಷ್ಕರ್ ಅವರ ಮೇಲೆ ಯಾರಿಗಾದರೂ ದ್ವೇಷವಿತ್ತೆ?, ಸಾವಿಗೂ ಮುನ್ನ ನಿಮ್ಮ ಸಂಬಂಧ ಹೇಗಿತ್ತು? ಮುಂತಾದ ಪ್ರಶ್ನೆಗಳನ್ನು ಎಸ್ಐಟಿ ಅಧಿಕಾರಿಗಳು ಶಶಿ ತರೂರ್ ಅವರಿಗೆ ಕೇಳಿದ್ದಾರೆ. ಆದರೆ, ಸುನಂದಾ ಮೇಲೆ ಯಾರಿಗೆ ದ್ವೇಷವಿತ್ತು? ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ತರೂರ್ ಉತ್ತರ ನೀಡಿದ್ದಾರೆ. [ಸುನಂದಾಗೆ ಇಂಜೆಕ್ಷನ್ ಚುಚ್ಚಿದ್ದು ಪರಿಚಿತರು]
ಸುನಂದಾ ಪುಷ್ಕರ್ ಅವರ ಸಾವಿಗೆ ಐಪಿಎಲ್ ಹಗರಣದ ನಂಟಿದೆಯೇ? ಎಂಬ ಬಗ್ಗೆಯೂ ಪ್ರಶ್ನೆಗಳನ್ನು ಕೇಳಿ ತರೂರ್ ಅವರಿಂದ ಮಾಹಿತಿ ಪಡೆಯಲಾಗಿದೆ. ಸಾವಿಗೂ ಮುನ್ನಾ ಸುನಂದಾ ಅವರ ಮಾನಸಿಕ ಸ್ಥಿತಿ ಹೇಗಿತ್ತು, ಅವರು ಹೇಗೆ ವರ್ತಿಸುತ್ತಿದ್ದರು? ಎಂಬ ಬಗ್ಗೆಯೂ ತರೂರ್ ಅವರಿಗೆ ಪ್ರಶ್ನೆಗಳನ್ನು ಕೇಳಲಾಗಿದೆ. [ತರಾರ್ ಜೊತೆ ದುಬೈನಲ್ಲಿ 3 ರಾತ್ರಿ ಕಳೆದರೇ ತರೂರ್?]
ಶಶಿ ತರೂರ್ ಸುನಂದಾ ಸಾವಿನ ನಂತರದ ವೈದ್ಯಕೀಯ ವರದಿ ನೀಡಿದ ವೈದ್ಯರ ಮೇಲೆ ಪ್ರಭಾವ ಬೀರಿದ್ದರೆ? ಎಂಬ ಬಗ್ಗೆಯೂ ಪ್ರಶ್ನೆಗಳನ್ನು ಕೇಳಾಗಿದೆ, ಇಂತಹ ಆರೋಪವನ್ನು ಶಶಿ ತರೂರ್ ತಳ್ಳಿ ಹಾಕಿದ್ದು, ಯಾವುದೇ ಪ್ರಭಾವ ಬೀರಿಲ್ಲ ಎಂದು ಉತ್ತರ ನೀಡಿದ್ದಾರೆ.
2014ರ ಜನವರಿ 17ರಂದು ರಾತ್ರಿ ಹೋಟೆಲ್ಗೆ ಭೇಟಿ ನೀಡಿದ ನಂತರವೇ ಸುನಂದಾ ಬದುಕಿಲ್ಲ ಎಂಬ ಮಾಹಿತಿ ತಮಗೆ ಲಭ್ಯವಾಯಿತು. ಸಾವಿನ ಪ್ರಕರಣದ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ವಿಚಾರಣೆ ವೇಳೆ ತರೂರ್ ಪೊಲೀಸರಿಗೆ ಭರವಸೆ ನೀಡಿದ್ದಾರೆ.
ಎಸ್ಐಟಿ ವಿಚಾರಣೆಗೆ ಕರೆದಾಗ ತಪ್ಪದೇ ಹಾಜರಾಗುತ್ತೇನೆ ಎಂದು ತರೂರ್ ತಿಳಿಸಿದ್ದಾರೆ. ಮತ್ತೆ ಕೆಲವು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು ತರೂರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ತನಿಖಾ ತಂಡದ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications