ಪ್ರವಾದಿ ವಿರುದ್ಧ ಹೇಳಿಕೆ - ನೂಪುರ್ ಶರ್ಮಾಗೆ ಜೀವ ಬೆದರಿಕೆ: ದೂರು ದಾಖಲು
ಹೊಸದಿಲ್ಲಿ ಜೂನ್ 6: ಪ್ರವಾದಿ ಮುಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ಅಮಾನತುಗೊಂಡಿರುವ ನೂಪುರ್ ಶರ್ಮಾ ತನಗೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಳಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಬಿಜೆಪಿ ಮಾಜಿ ವಕ್ತಾರೆ ಶ್ರೀಮತಿ ಶರ್ಮಾ ಅವರು ಈ ಹಿಂದೆ ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮುಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇವರ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಬಿಜೆಪಿಯಿಂದ ನಿನ್ನೆ ಶರ್ಮಾ ಅವರನ್ನು ಅಮಾನತುಗೊಳಿಸಲಾಗಿದೆ. ಇದರ ನಡುವೆ ಶರ್ಮಾ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ ಎಂದು ದೂರು ನೀಡಿದ್ದಾರೆ. "ಎಫ್ಐಆರ್ ಆಧರಿಸಿ, ನಾವು ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತ ಸರ್ಕಾರಕ್ಕೆ ಕ್ಷಮೆಯಾಚಿಸಲು ಕತಾರ್ ಆಗ್ರಹ
ವಿಳಾಸ ಸಾರ್ವಜನಿಕಗೊಳಿಸದಂತೆ ಶರ್ಮಾ ಮನವಿ
ಶ್ರೀಮತಿ ಶರ್ಮಾ ನಿನ್ನೆ ಟ್ವಿಟರ್ನಲ್ಲಿ ಕ್ಷಮೆಯಾಚಿಸಿದ್ದು, ಯಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ನನ್ನ ಉದ್ದೇಶವಲ್ಲ ಎಂದು ಹೇಳಿದ್ದಾರೆ. ಅವರು ತಮ್ಮ ಕುಟುಂಬದ ಭದ್ರತೆಯ ಬಗ್ಗೆ ಚಿಂತಿತರಾಗಿದ್ದಾರೆ ಮತ್ತು ಅವರ ವಿಳಾಸವನ್ನು ಸಾರ್ವಜನಿಕಗೊಳಿಸದಂತೆ ಜನರನ್ನು ಒತ್ತಾಯಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾದ ಬಿಜೆಪಿಯ ಪತ್ರದಲ್ಲಿ ಅವರ ವಿಳಾಸವಿದೆ ಎಂದು ಅವರು ಹೇಳಿದರು.
ಬಿಜೆಪಿ ನಿನ್ನೆ ಶ್ರೀಮತಿ ಶರ್ಮಾ ಅವರನ್ನು ವಿಚಾರಣೆಗಾಗಿ ಅಮಾನತುಗೊಳಿಸಿದೆ. ಹಲವು ವಿಷಯಗಳಲ್ಲಿ ಅವರು ಪಕ್ಷದ ನಿಲುವಿಗೆ ವಿರುದ್ಧವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಪಕ್ಷ ಹೇಳಿದೆ.
ಶರ್ಮಾ ವಿರುದ್ಧ ಕ್ರಮಕ್ಕೆ ಒತ್ತಾಯ
ಶರ್ಮಾ ಹೇಳಿಕೆಗೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು 1,500 ಕ್ಕೂ ಹೆಚ್ಚು ಜನರ ಮೇಲೆ ಆರೋಪ ಹೊರಿಸಲಾಗಿದೆ. ಶ್ರೀಮತಿ ಶರ್ಮಾ ಮತ್ತು ಹಿರಿಯ ನಾಯಕ ನವೀನ್ ಕುಮಾರ್ ಜಿಂದಾಲ್ ಅವರ ಹೇಳಿಕೆಗಳಿಂದ ಈಗ ಬಿಜೆಪಿಯಿಂದ ಉಚ್ಚಾಟಿಸಲ್ಪಟ್ಟಿದ್ದಾರೆ.
ಬಿಜೆಪಿಯ ಕ್ರಮ ಸ್ವಾಗತಿಸಿದ ಉಭಯ ದೇಶಗಳು
ಗಲ್ಫ್ ಪ್ರದೇಶದ ಸೌದಿ ಅರೇಬಿಯಾ, ಕತಾರ್, ಬಹ್ರೇನ್ ಮತ್ತು ಇರಾನ್ ದೇಶಗಳು ಶರ್ಮಾ ಹೇಳಿಕೆ ಟೀಕೆಗಳನ್ನು ಬಲವಾಗಿ ಖಂಡಿಸಿವೆ. ಕತಾರ್ ಮತ್ತು ಬಹ್ರೇನ್ ಕೂಡ ಭಾರತೀಯ ರಾಯಭಾರಿಯನ್ನು ಕರೆಸಿ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದವು. ಶರ್ಮಾ ವಿರುದ್ಧ ಬಿಜೆಪಿಯ ಕ್ರಮವನ್ನು ಉಭಯ ದೇಶಗಳು ಸ್ವಾಗತಿಸಿವೆ.
ಮಾಯಾವತಿ ಟ್ವೀಟ್
ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನ ಹಿನ್ನೆಲೆ ಇತ್ತೀಚೆಗೆ ಇಬ್ಬರು ಬಿಜೆಪಿ ವಕ್ತಾರರಾದ ನುಪೂರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಉಚ್ಚಾಟನೆ ಕುರಿತು ಪ್ರತಿಕ್ರಿಯಿಸಿರುವ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ, "ಯಾವುದೇ ಧರ್ಮದ ವಿರುದ್ಧ ಆಕ್ಷೇಪಾರ್ಹ ಭಾಷೆಗಳನ್ನು ಬಳಸುವವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಅವರನ್ನು ಜೈಲಿಗೆ ಕಳುಹಿಸಬೇಕು" ಎಂದು ಸೋಮವಾರ ಬಿಜೆಪಿಯನ್ನು ಒತ್ತಾಯಿಸಿದ್ದಾರೆ.