ಅಳಿಯನಿಗೆ ಕ್ಲೀನ್ ಚಿಟ್, ಸೋನಿಯಾ ಖುಷ್
ನವದೆಹಲಿ, ಅ.29: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ವಿರುದ್ಧ ಭೂ ಹಗರಣಕ್ಕೆ ಸಂಬಂಧಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದೆ. ಈ ಹಿಂದೆ ಡಿಎಲ್ಎಫ್ ಭೂ ವ್ಯವಹಾರ ಪ್ರಕರಣದಲ್ಲೂ ರಾಬರ್ಟ್ ವಾದ್ರಾ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದ್ದನ್ನು ಇಲ್ಲಿ ಸ್ಮರಿಸಬಹುದು.
'ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೆಸರಲ್ಲಿ ಯಾವುದೇ ವ್ಯಕ್ತಿಯ ಹೆಸರು ಹಾಳುಗೆಡವಲು ನಾವು ಅವಕಾಶ ನೀಡುವುದಿಲ್ಲ. ವ್ಯಕ್ತಿಯೊಬ್ಬ ರಾಜಕೀಯ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದ್ದಾನೆ ಅನ್ನುವ ಕಾರಣಕ್ಕೆ ಆತನನ್ನು ತಪ್ಪಿತಸ್ಥ ಎಂದು ಹೇಳಲು ಸಾಧ್ಯವಿಲ್ಲ' ಎಂದು ಜಸ್ಟೀಸ್ ಎಚ್ ಎಲ್ ದತ್ತು ಹಾಗೂ ಜಸ್ಟೀಸ್ ರಂಜನ್ ಗೊಗಾಯ್ ಅವರಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದ್ದಲ್ಲದೆ ಅರ್ಜಿದಾರನನ್ನು ತರಾಟೆಗೆ ತೆಗೆದುಕೊಂಡಿದೆ.
2005 ಮತ್ತು 12ರ ನಡುವೆ ಹರ್ಯಾಣದಲ್ಲಿ ವಾದ್ರಾ ಕಂಪನಿ ಮತ್ತು ಇತರೆ ಬಿಲ್ಡರ್ ಗಳಿಗೆ ನೀಡಲಾಗಿದ್ದ ಪರವಾನಗಿಗೆ ಸಂಬಂಧಿಸಿದ ತನಿಖೆಯನ್ನು ರದ್ದುಗೊಳಿಸುವ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ವಕೀಲ ಎಂ.ಎಲ್. ಶರ್ಮಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಹರ್ಯಾಣ ಸರ್ಕಾರ 21 ಸಾವಿರ ಎಕರೆ ಪ್ರದೇಶಕ್ಕೆ ಪರವಾನಗಿ ನೀಡಿತ್ತು ಎಂದು ನಿಮ್ಮ ಅರ್ಜಿಯಲ್ಲಿ ಹೇಳಲಾಗಿದೆ. ಹಾಗಿದ್ದ ಮೇಲೆ ನೀವು ಒಬ್ಬನೇ ವ್ಯಕ್ತಿಯನ್ನು ಯಾಕೆ ಗುರಿ ಮಾಡುತ್ತಿದ್ದೀರಿ ಎಂದು ನ್ಯಾಯಾಲಯ ಈ ವೇಳೆ ಅರ್ಜಿದಾರನನ್ನು ಪ್ರಶ್ನಿಸಿತು. ಕೋರ್ಟಿನಿಂದ ತರಾಟೆಗೊಳಗಾದ ಬಳಿಕ ಶರ್ಮಾ ತಮ್ಮ ಅರ್ಜಿಯನ್ನು ಹಿಂಪಡೆದುಕೊಂಡರು.
ವಾದ್ರಾ ಒಬ್ಬ ವಾಣಿಜ್ಯೋದ್ಯಮಿಯಾಗಿದ್ದು ಯಾವುದೇ ಅಕ್ರಮ ವ್ಯವಹಾರವಾಗಲಿ, ಅಧಿಕಾರ ದುರುಪಯೋಗವಾಗಲೀ ಮಾಡಿಲ್ಲ ಎಂದು ಅನೇಕ ಸಲ ಸೋನಿಯಾ ಗಾಂಧಿ ಅವರು ಹೇಳಿದ್ದರು. 43 ವರ್ಷದ ಉದ್ಯಮಿ ರಾಬರ್ಟ್ ವಾದ್ರಾ ಅವರ ಒಡೆತನದ ಸಂಸ್ಥೆಗೆ ದೆಹಲಿ, ಹರ್ಯಾಣ ಹಾಗೂ ರಾಜಸ್ಥಾನ ಸರ್ಕಾರದಿಂದ ಅಕ್ರಮವಾಗಿ ಭೂಮಿಯನ್ನು ಮಂಜೂರು ಮಾಡಿದೆ ಎಂಬ ಆರೋಪ ಮತ್ತೆ ಮತ್ತೆ ಕೇಳಿ ಬಂದಿತ್ತು.
ಐಎಎಸ್ ಅಧಿಕಾರಿ ಅಶೋಕ ಖೇಮ್ಕಾ ಅವರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ವಾದ್ರಾ-ಡಿಎಲ್ ಎಫ್ ನಡುವಿನ ಭೂ ಒಪ್ಪಂದ ರದ್ದುಗೊಳಿಸಿದ್ದರು ಎಂದು ಹರ್ಯಾಣ ಸರ್ಕಾರ ನೇಮಿಸಿದ್ದ ತ್ರಿಸದಸ್ಯ ಸಮಿತಿ ವರದಿ ಸಲ್ಲಿಸಿತ್ತು. ಈ ಮೂಲಕ ಪರೋಕ್ಷವಾಗಿ ವಾದ್ರಾರನ್ನು ಬಚಾವ್ ಮಾಡಲಾಗಿತ್ತು. ಖೇಮ್ಕಾ ಇಲ್ಲಸಲ್ಲದ ಆರೋಪಗಳನ್ನು ರಾಬರ್ಟ್ ವದ್ರಾ ಅವರ ಮೇಲೆ ಹೊರಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿತ್ತು.












Click it and Unblock the Notifications