ದೆಹಲಿ ವಾಯು ಮಾಲಿನ್ಯದ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಹೇಗಿತ್ತು ವಾದ-ಪ್ರತಿವಾದ?
ನವದೆಹಲಿ, ನವೆಂಬರ್ 17: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯದ ಕುರಿತು ಬುಧವಾರ ಸುಪ್ರೀಂಕೋರ್ಟ್ ನಡೆಸಿದ ವಿಚಾರಣೆಯು ಆರೋಪ, ನಿರಾಕರಣೆ ಮತ್ತು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿ ಆಯಿತು.
ದೆಹಲಿಯಲ್ಲಿ ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸುವುದಕ್ಕೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿತು. ಇದರಿಂದ ವಾಯುಮಾಲಿನ್ಯ ನಿಯಂತ್ರಿಸುವುದರ ಮೇಲೆ ಪರಿಣಾಮ ಬೀರುವುದಿಲ್ಲ, ಈ ಕ್ರಮ ಅಷ್ಟರಮಟ್ಟಿಗೆ ಪ್ರಯೋಜನಕಾರಿಯೂ ಆಗಿರುವುದಿಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿತು.
ದೆಹಲಿ ಎನ್ಸಿಆರ್ನಲ್ಲಿ ಶಾಲೆ-ಕಾಲೇಜು ಬಂದ್, ಶೇ.50ರಷ್ಟು ಸಿಬ್ಬಂದಿಗೆ WFH, ಕಾಮಗಾರಿಗಳಿಗೆ ಫುಲ್ ಸ್ಟಾಪ್!
ಈ ಹಿಂದಿನ ಸೋಮವಾರದ ವಿಚಾರಣೆ ವೇಳೆ ಕೇಂದ್ರ ಮತ್ತು ರಾಜ್ಯದ ಉದ್ಯೋಗಿಗಳಿಗೆ ಕನಿಷ್ಠ ಒಂದು ವಾರದವರೆಗೆ ಮನೆಯಿಂದ ಕೆಲಸ ಮಾಡಲು ಪರಿಗಣಿಸುವಂತೆ ಸುಪ್ರೀಂಕೋರ್ಟ್ ತಿಳಿಸಿತ್ತು. ಕಾರ್ಖಾನೆಗಳಿಂದ ಉಂಟಾಗುವ ಮಾಲಿನ್ಯ, ಸಾರಿಗೆ, ಧೂಳು ಮತ್ತು ಕೆಲವು ಭಾಗಗಳಲ್ಲಿ ಕಸ ಸುಡುವಿಕೆಯು ಪ್ರಮುಖ ಅಂಶಗಳಾಗಿವೆ ಎಂದು ಕೋರ್ಟ್ ಒತ್ತಿಹೇಳಿತ್ತು.
ದೆಹಲಿ ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರೆದಂತೆ ದೆಹಲಿ ಸರ್ಕಾರವೂ ಪ್ರತಿವರ್ಷ ಎದುರಾಗುವ ಈ ಸಮಸ್ಯೆಯನ್ನು ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ತಿಳಿಸಿದರೂ, ನ್ಯಾಯಾಲಯವು ಅದನ್ನು ಒಪ್ಪಿಕೊಳ್ಳಲಿಲ್ಲ. ಬುಧವಾರ ಸುಪ್ರೀಂಕೋರ್ಟ್ನಲ್ಲಿ ನಡೆದ ವಾದ-ಪ್ರತಿವಾದಗಳ ವೈಖರಿ ಹೇಗಿತ್ತು ಎಂಬುದನ್ನು ಇಲ್ಲಿ ಸಂಕ್ಷಿಪ್ತವಾಗಿ ತಿಳಿಸಲಾಗಿದೆ.
ಸುಪ್ರೀಂ ಕೋರ್ಟ್ನಲ್ಲಿ ನಡೆದ ವಾದ-ಪ್ರತಿವಾದ:
ಸಾಲಿಸಿಟರ್ ಜನರಲ್: "ರೈತರ ಬೆಳೆ ಕೊಯ್ಲಿನ ನಂತರ ಕಸವನ್ನು ಸುಡುತ್ತಿರುವ ಬಗ್ಗೆ ನಾನು ಕೋರ್ಟ್ ದಾರಿ ತಪ್ಪಿಸುತ್ತಿದ್ದೇನೆ ಎಂದು ಬಿಂಬಿಸುವ ಅಸಹ್ಯಕರ ಘಟನೆಗಳು ಟಿವಿಯಲ್ಲಿ ನಡೆಯುತ್ತಿವೆ."
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಮಣ: "ಈ ರೀತಿಯ ಟೀಕೆಗಳು ನಡೆಯುತ್ತಲೇ ಇರುತ್ತವೆ. ನಮ್ಮ ಆತ್ಮಸಾಕ್ಷಿಯು ಸ್ಪಷ್ಟವಾಗಿದೆ ಮತ್ತು ನಾವು ಸಮಾಜದ ಸುಧಾರಣೆಗಾಗಿ ಕೆಲಸ ಮಾಡುತ್ತೇವೆ."
ಸಾಲಿಸಿಟರ್ ಜನರಲ್: "2 ತಿಂಗಳುಗಳಲ್ಲಿ ಬೆಳೆ ನಂತರದ ಕಸವನ್ನು ಸುಡುವುದು ಹೆಚ್ಚಾಗುವ ವಿಷಯವು ಸಾಮಾನ್ಯ ಜ್ಞಾನವಾಗಿದೆ. ಸಾಮಾನ್ಯ ಜ್ಞಾನ ಎನ್ನುವುದು ಡಿಯೋಡರೆಂಟ್ ಇದ್ದಂತೆ. ಅದನ್ನು ಬಳಸದವರು ಇತರರನ್ನು ನೋಯಿಸುತ್ತಾರೆ," ಎಂದರು.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಮಣ: "ನಾವು ರೈತರಿಗೆ ದಂಡ ವಿಧಿಸಲು ಬಯಸುವುದಿಲ್ಲ. ಹೊಲಗದ್ದೆಗಳನ್ನು ಸುಡದಂತೆ ರೈತರ ಮನವೊಲಿಸಲು ರಾಜ್ಯಗಳಿಗೆ ಮನವಿ ಮಾಡಿದ್ದೇವೆ. ಯಾಕೆ ಮತ್ತೆ ಮತ್ತೆ ಈವಿಷಯವನ್ನು ಪ್ರಸ್ತಾಪಿಸುತ್ತಿರುವಿರಿ?."
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಮಣ: "ನೀವು ಕೆಲವು ವಿಷಯಗಳನ್ನು ಇಲ್ಲಿ ಬಳಸಿಕೊಳ್ಳಲು ಬಯಸುತ್ತೀರಿ, ಮೊದಲು ನಾವು ಅದನ್ನು ಗಮನಿಸುವಂತೆ ಮಾಡುತ್ತೀರಿ, ನಂತರ ಅದನ್ನು ವಿವಾದಾತ್ಮಕಗೊಳಿಸಲಾಗುತ್ತದೆ. ಅಂತಿಮವಾಗಿ ಅಲ್ಲಿ ಆರೋಪ-ಪ್ರತ್ಯಾರೋಪಗಳಷ್ಟೇ ಉಳಿದುಕೊಳ್ಳುತ್ತವೆ. ಟಿವಿಯಲ್ಲಿನ ಚರ್ಚೆಗಳು ಎಲ್ಲರಿಗಿಂತ ಹೆಚ್ಚು ಮಾಲಿನ್ಯವನ್ನು ಸೃಷ್ಟಿಸುತ್ತಿವೆ. ಪ್ರತಿಯೊಬ್ಬರೂ ತಮ್ಮದೇ ಆದ ಕಾರ್ಯಸೂಚಿಯನ್ನು ಹೊಂದಿರುತ್ತಾರೆ, ಆದರೂ ಅವರಿಗೆ ಏನೂ ಅರ್ಥವಾಗುವುದಿಲ್ಲ."
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್: ದಯವಿಟ್ಟು ರೈತರ ಪರಿಸ್ಥಿತಿಯನ್ನು ನೋಡಿ ಮತ್ತು ಅವರು ಈ ವೈಜ್ಞಾನಿಕ ವಿಧಾನಗಳನ್ನು ಏಕೆ ಅನುಸರಿಸಲು ಸಾಧ್ಯವಿಲ್ಲ. ದೆಹಲಿಯಲ್ಲಿ 5 ಅಥವಾ 7 ಸ್ಟಾರ್ ಹೋಟೆಲ್ಗಳಲ್ಲಿ ಕುಳಿತುಕೊಳ್ಳುವ ಜನರು ಮಾಲಿನ್ಯಕ್ಕೆ ಶೇ. 30 ರಿಂದ 40 ಪ್ರತಿಶತದಷ್ಟು ಕಾರಣ ಎಂದು ಟೀಕಿಸುತ್ತಿದ್ದಾರೆ.
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಎಷ್ಟಿದೆ?:
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ಮಂಗಳವಾರ ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು ತೀವ್ರ ವಲಯದಲ್ಲಿ 403 ಆಗಿದೆ. ಸೋಮವಾರ ಇದೇ ಗಾಳಿಯ ಗುಣಮಟ್ಟ ಸೂಚ್ಯಂಕವು 353 ಆಗಿದೆ. ಮಧ್ಯರಾತ್ರಿ 12.27 ಕ್ಕೆ ದೆಹಲಿಯಲ್ಲಿ ಒಟ್ಟಾರೆ AQI 397 ಆಗಿತ್ತು, ಇದು 'ತೀವ್ರ' ವರ್ಗದ ಗಡಿಯಾಗಿದೆ; 400 ಕ್ಕಿಂತ ಹೆಚ್ಚಿನ ಓದುವಿಕೆಗಳನ್ನು 'ತೀವ್ರ' ಅಥವಾ 'ಅಪಾಯಕಾರಿ' ಎಂದು ಪರಿಗಣಿಸಲಾಗುತ್ತದೆ.
Recommended Video