ಭಾರತ-ಚೀನಾ ಮಿಲಿಟರಿ ಮಾತುಕತೆ ಬಳಿಕ ಲಡಾಖ್ ಬಿಕ್ಕಟ್ಟು ಸುಧಾರಿಸಿದೆ: ಎಂಎಂ ನರವಣೆ
ನವದೆಹಲಿ, ಜನವರಿ 15: ಭಾರತ-ಚೀನಾ ನಡುವೆ ನಡೆದ 14ನೇ ಸುತ್ತಿನ ಮಾತುಕತೆ ಬಳಿಕ ಲಡಾಖ್ ಪರಿಸ್ಥಿತಿ ಸುಧಾರಿಸಿದೆ ಎಂದು ಸೇನಾ ಮುಖ್ಯಸ್ಥ ಎಂ.ಎಂ ನರವಣೆ ಹೇಳಿದ್ದಾರೆ.
ಸುಮಾರು 300-400 ಉಗ್ರರು ಭಾರತದಲ್ಲಿ ನುಸುಳಲು ಕಾಯುತ್ತಿದ್ದಾರೆ. ನಮ್ಮ ಸೈನಿಕರು ಕಾರ್ಯಾಚರಣೆ ನಡೆಸಿ ಒಟ್ಟು 144 ಭಯೋತ್ಪಾದಕರನ್ನು ಹತ್ಯೆಗೈದಿದ್ದಾರೆ ಎಂದರು.
ಭಾರತ ಮತ್ತು ಚೀನಾದೊಂದಿಗಿನ ಗಡಿ ಸಂಬಂಧ ಸುಧಾರಿಸಿದೆ. ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಇತ್ತೀಚೆಗೆ ಎರಡು ದೇಶಗಳ ನಡುವೆ 14ನೇ ಸುತ್ತಿನ ಮಿಲಿಟರಿ ಮಾತುಕತೆ ನಡೆದಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಹೇಳಿದರು.

ಗಡಿ ಭಾಗದಲ್ಲಿ ಕಳೆದ ವರ್ಷಕ್ಕಿಂತ ಪರಿಸ್ಥಿತಿ ಉತ್ತಮವಾಗಿದೆ. ಆದರೆ, ಪಾಕಿಸ್ತಾನ ಇನ್ನೂ ಗಡಿಯ ಭಾಗದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ. ಲಡಾಖ್ ಗಡಿಯಲ್ಲಿ ಚೀನಾದೊಂದಿಗಿನ ಸಂಬಂಧ ಕೊಂಚ ಸುಧಾರಿಸುತ್ತಿದೆ ಎನ್ನುವಾಗಲೇ, ಚೀನಾ ಪಡೆಗಳು ಪೂರ್ವ ಲಡಾಖ್ ಗಡಿ ಭಾಗದಲ್ಲಿ ಮತ್ತೆ ತನ್ನ ಸೇನೆಯನ್ನು ಜಮಾವಣೆ ಮಾಡಿದ್ದವು. ಹೀಗಾಗಿ, ಲಡಾಖ್ ಬಿಕ್ಕಟ್ಟಿನ ಕುರಿತು ಚೀನಾ ಮತ್ತು ಭಾರತ 14ನೇ ಸುತ್ತಿನ ಮಾತುಕತೆ ನಡೆಸಿದೆ. ಇದೀಗ ಪರಿಸ್ಥಿತಿ ಹತೋಟಿಗೆ ತರಲಾಗಿದೆ.
ಭಾರತೀಯ ಸೇನಾ ದಿನದ ಪ್ರಯುಕ್ತ ದೆಹಲಿಯ ಕ್ಯಾಂಟ್ನಲ್ಲಿರುವ ಪರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯೋಧರಿಗೆ ಸೇನಾ ಪದಕವನ್ನು ಪ್ರದಾನ ಮಾಡಿದರು. ನಂತರ ಮಾತನಾಡಿದ ಅವರು, ಚೀನಾದ ಉದ್ವಿಗ್ನತೆಯಿಂದಾಗಿ ಕಳೆದ ವರ್ಷ ಸೇನೆಗೆ ಸವಾಲಾಗಿತ್ತು. ಪರಿಸ್ಥಿತಿ ಹತೋಟಿಯಲ್ಲಿಡಲು ಇತ್ತೀಚೆಗೆ 14ನೇ ಸಭೆ ನಡೆಯಿತು. ಜಂಟಿ ಮಾತುಕತೆ ನಡೆಸಿದ ಬಳಿಕ ಇದೀಗ ಗಡಿ ರೇಖೆ ಬಳಿ ಸಹಜ ಸ್ಥಿತಿ ಇದೆ ಎಂದರು.
14ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ ಎಂದು ಹೇಳಲಾಗಿತ್ತು ಆದರೆ ಸೇನಾ ಮುಖ್ಯಸ್ಥರ ಮಾತಿನಿಂದ ಭರವಸೆ ಮೂಡಿದೆ. ಪ್ರಮುಖವಾಗಿ ಪೂರ್ವ ಲಡಾಖ್ನಲ್ಲಿನಲ್ಲಿರುವ ಪೆಟ್ರೋಲಿಂಗ್ ಪಾಯಿಂಟ್ಗಳಿಂದ ಶೀಘ್ರವಾಗಿ ಪಡೆಗಳನ್ನ ವಾಪಸ್ ಪಡೆಯುವಂತೆ ಭಾರತ ಚೀನಾವನ್ನು ಒತ್ತಾಯಿಸಿದೆ.
ಡೆಪ್ಸಾಂಗ್ ಬಲ್ಜ್ ಮತ್ತು ಡೆಮ್ಚೋಕ್ ಭಾಗದಲ್ಲಿ ಇರುವ ಸಮಸ್ಯೆಗಳ ಪರಿಹಾರ ಸೇರಿದಂತೆ ಉಳಿದಿರುವ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಮಾತುಕತೆ ವೇಳೆ ಒತ್ತು ನೀಡಲಾಯಿತು.
ಜನವರಿ 12ರಂದು ಬೆಳಗ್ಗೆ ಆರಂಭವಾದ ಸಭೆ ರಾತ್ರಿ10:30ಕ್ಕೆ ಕೊನೆಗೊಂಡಿದೆ. ಹಾಟ್ ಸ್ಪ್ರಿಂಗ್ಸ್ (ಪೆಟ್ರೋಲಿಂಗ್ ಪಾಯಿಂಟ್ 15 )ನಿಂದ ಸೇನೆ ವಾಪಸ್ ಪಡೆಯಬೇಕು ಎಂಬ ಬಗ್ಗೆಯೇ ಮಾತುಕತೆ ವೇಳೆ ಪ್ರಸ್ತಾಪಕ್ಕೆ ಬಂದಿದ್ದು, ಮಾತುಕತೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ವರ್ಷ ಮೇನಿಂದ ನಡೆಯುತ್ತಿರುವ ಘರ್ಷಣೆಯ ಭಾಗವಾಗಿ ಪೂರ್ವ ಲಡಾಕ್ನ ಗಲ್ವಾನ್ ಕಣಿವೆಯಲ್ಲಿ ಉಭಯ ಸೇನೆಗಳ 50 ಸಾವಿರ ಪಡೆಗಳು ನಿಯೋಜಿತರಾಗಿದ್ದಾರೆ. ಅದರೊಂದಿಗೆ ಟ್ಯಾಂಕರ್ಗಳು ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ಕೂಡ ಗಡಿಯ ನೆಲೆಗಳಲ್ಲಿ ಸಂಗ್ರಹಿಸಲಾಗಿವೆ.
ಈ ಹಿಂದೆ 13 ಸುತ್ತಿನ ಮಾತುಕತೆಯಲ್ಲಿ ಭಾರತದ ಪರವಾಗಿ 14 ಕೋರ್ ಪಡೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಮತ್ತು ಚೀನಾ ಪರವಾಗಿ ಕ್ಸಿನ್ಜಿಯಾಂಗ್ ಜಿಲ್ಲೆಯ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ ಅವರು ಭಾಗಿಯಾಗಿ ವಿಸ್ತೃತ ಚರ್ಚೆ ನಡೆಸಿದ್ದರು. ಆದರೆ ಮಾತುಕತೆ ವಿಫಲವಾಗಿತ್ತು.












Click it and Unblock the Notifications