ಕೂಲಿ ಕಾರ್ಮಿಕರಿಂದ ಕಾಸು ಕೀಳಲು ಹೊರಟಿತಾ ಕೇಂದ್ರ ಸರ್ಕಾರ?
ನವದೆಹಲಿ, ಮೇ.04: ಭಾರತ ಲಾಕ್ ಡೌನ್ ನಡುವೆಯೂ ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ತೆರಳಲು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಆದರೆ ಕೂಲಿ ಕಾರ್ಮಿಕರಿಂದ ರೈಲ್ವೆ ಟಿಕೆಟ್ ಮೂಲಕ ಹಣ ವಸೂಲಿ ಮಾಡುತ್ತಿರುವುದೇಕೆ ಎಂದು ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.
ನೊವೆಲ್ ಕೊರೊನಾ ವೈರಸ್ ಸೋಂಕು ಅಟ್ಟಹಾಸ ಮೆರೆಯುತ್ತಿದ್ದಂತೆ ವಿದೇಶಗಳಲ್ಲಿದ್ದ ಭಾರತೀಯರನ್ನು ವಿಶೇಷ ವಿಮಾನಗಳಲ್ಲಿ ಉಚಿತವಾಗಿ ಸ್ವದೇಶಕ್ಕೆ ಕರೆ ತರಲಾಗಿತ್ತು. ಆದರೆ ಇಂದೇಕೆ ಬಡ ಕೂಲಿ ಕಾರ್ಮಿಕರು ಸಂಚರಿಸುವ ರೈಲಿಗೆ ಟಿಕೆಟ್ ದರ ನಿಗದಿ ಪಡಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ರೇಲ್ವೆ ಖರ್ಚು ಭರಿಸುತ್ತೇವೆ, ವಲಸೆ ಕಾರ್ಮಿಕರನ್ನು ಕರೆದುಕೊಂಡು ಬನ್ನಿ
ಇದರ ಮಧ್ಯ ಶ್ರಮಿಕ್ ರೈಲು ದರದ ಬಗ್ಗೆ ಭಾರತೀಯ ರೈಲ್ವೆ ಇಲಾಖೆಯು ಸ್ಪಷ್ಟನೆ ನೀಡಿದೆ. ಶ್ರಮಿಕ್ ವಿಶೇಷ ರೈಲುಗಳ ಸಂಚಾರಕ್ಕೆ ನಾವು ನಿಗದಿತ ದರವನ್ನು ವಸೂಲಿ ಮಾಡುತ್ತಿದ್ದೇವೆ. ಒಂದು ರೈಲು ಸಂಚಾರಕ್ಕೆ ತಗಲುವ ವೆಚ್ಚದ ಶೇ 15ರಷ್ಟನ್ನು ಮಾತ್ರ ರಾಜ್ಯ ಸರ್ಕಾರ ನೀಡಬೇಕು ಎಂದು ರೈಲ್ವೆ ಹೇಳಿದೆ.
ಕೇಂದ್ರದ ವಿರುದ್ಧ ಪ್ರಿಯಾಂಕಾ ವಾದ್ರಾ ಗುಡುಗು
ದೇಶವನ್ನು ಕಟ್ಟಲು ಶ್ರಮಿಸುತ್ತಿದ್ದ ಕಾರ್ಮಿಕರು ಇಂದು ಭಾರತ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶ್ರೀಮಂತ ಭಾರತೀಯರನ್ನು ವಿಮಾನಗಳಲ್ಲಿ ಉಚಿತವಾಗಿ ಕರೆಕೊಂಡು ಬರ್ತಾರೆ, ನಮಸ್ತೆ ಟ್ರಂಪ್ ಹೆಸರಿನಲ್ಲಿ 100 ಕೋಟಿ ರೂಪಾಯಿ ವೆಚ್ಚ ಮಾಡ್ತಾರೆ. ಆದರೆ ಬಡವರನ್ನು ತಮ್ಮೂರಿಗೆ ತಲುಪಿಸುವುದಕ್ಕೆ ಏಕೆ ಹಣ ತೆಗೆದುಕೊಳ್ಳಿತ್ತಿದ್ದೀರಾ ಎಂದು ಪ್ರಿಯಾಂಕಾ ವಾದ್ರಾ ಗುಡುಗಿದ್ದಾರೆ.
ಕಾರ್ಮಿಕರನ್ನು ಕೂಡಿಗೆ ಸೇರಿಸಲು ಕಾಂಗ್ರೆಸ್ ನೆರವು
ಕೂಲಿ ಕಾರ್ಮಿಕರಿಗೆ ರೈಲು ಸೇವೆ ಒದಗಿಸಲು ಕೇಂದ್ರ ಸರ್ಕಾರದಿಂದ ಆಗುದಿಲ್ಲವಾದರೆ ಕಾಂಗ್ರೆಸ್ ನೆರವು ನೀಡುತ್ತದೆ. ಕೂಲಿ ಕಾರ್ಮಿಕರಿಗೆ ತಗಲುವ ರೈಲ್ವೆ ಟಿಕೆಟ್ ದರವನ್ನು ರಾಷ್ಟ್ರೀಯ ಕಾಂಗ್ರೆಸ್ ಪಾವತಿಸಲಿದೆ ಎಂದು ಪ್ರಿಯಾಂಕಾ ವಾದ್ರಾ ಕಿಡಿ ಕಾರಿದ್ದಾರೆ.
ಸುರಕ್ಷಿತ ರೈಲ್ವೆ ಹಾಗೂ ಉಚಿತ ಸೇವೆ ಒದಗಿಸಲು ಮನವಿ
ಭಾರತ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೂಲಿ ಕಾರ್ಮಿಕರು ತಮ್ಮೂರಿಗೆ ತಲುಪುವುದಕ್ಕೆ ಕೇಂದ್ರ ಸರ್ಕಾರವು ಉಚಿತ ಹಾಗೂ ಸುರಕ್ಷಿತ ರೈಲ್ವೆ ಸೇವೆಯನ್ನು ನೀಡಬೇಕು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡಾ ಮನವಿ ಮಾಡಿಕೊಂಡಿದ್ದರು.
ಕಾರ್ಮಿಕರಿಗೆ ಟಿಕೆಟ್ ಮಾರಾಟ ಮಾಡುತ್ತಿಲ್ಲ
ಶ್ರಮಿಕ್ ವಿಶೇಷ ರೈಲುಗಳ ಸಂಚಾರಕ್ಕೆ ಯಾವುದೇ ಟಿಕೆಟ್ ಅನ್ನು ರೈಲ್ವೆ ಇಲಾಖೆ ಮಾರಾಟ ಮಾಡುವುದಿಲ್ಲ ಎಂದು ಭಾರತೀಯ ರೈಲ್ವೆ ಇಲಾಖೆಯು ಸ್ಪಷ್ಟಪಡಿಸಿದೆ. ರಾಜ್ಯ ಸರ್ಕಾರಗಳು ನೀಡುವ ಪಟ್ಟಿಯ ಅನ್ವಯ ಕಾರ್ಮಿಕರನ್ನು ಕರೆದುಕೊಂಡು ಹೋಗಲಾಗುತ್ತದೆ ಎಂದು ರೈಲ್ವೆ ಹೇಳಿದೆ.