ಬಿಜೆಪಿ ಜೊತೆ ಮುನಿಸು ದೆಹಲಿ ಚುನಾವಣೆಯಿಂದ ದೂರ!
ಚಂದೀಗಢ, ಜನವರಿ 21: ಭಾರತೀಯ ಜನತಾ ಪಕ್ಷದ ಮಿತ್ರಪಕ್ಷ ಶಿರೋಮಣಿ ಅಕಾಲಿದಳ ಮುನಿಸಿಕೊಂಡಿದೆ. ಬಿಜೆಪಿ ಜೊತೆಗಿನ ಮುನಿಸಿನಿಂದ ದೆಹಲಿ ವಿಧಾನಸಭೆ ಚುನಾವಣೆಯಿಂದ ದೂರಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಬಿಜೆಪಿ-ಅಕಾಲಿದಳ ನಡುವಿನ ಮುನಿಸಿಗೆ ಮುಖ್ಯ ಕಾರಣವಾಗಿದೆ.
ದೆಹಲಿಯಲ್ಲಿ ಸಿಖ್ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಕಲ್ಕಾಜಿ, ತಿಲಕ್ ನಗರ್, ಹರಿ ನಗರ್ ಹಾಗೂ ರಜೌರಿ ಗಾರ್ಡನ್ ನಲ್ಲಿ ಬಿಜೆಪಿ ಇದರಿಂದ ಕೊಂಚ ಹಿನ್ನಡೆಯಾಗಬಹುದು ಎಂದು ಅಂದಾಜಿಸಲಾಗಿದೆ. ಶಿರೋಮಣಿ ಅಕಾಲಿ ದಳ ನಾಯಕ ಮಂಜೀಂದರ್ ಸಿಂಗ್ ಸಿರ್ಸಾ ಅವರು ಚುನಾವಣೆ ಸ್ಪರ್ಧೆ ಬಗ್ಗೆ ಸ್ಪಷ್ಟ ಪಡಿಸಿದರು.
ಸಿಎಎ ಕುರಿತಂತೆ ನಮ್ಮ(SAD) ನಿಲುವು ಸ್ಪಷ್ಟಪಡಿಸುವಂತೆ ಬಿಜೆಪಿ ಸಭೆಯಲ್ಲಿ ಕೇಳಿದ್ದು ನಿಜ, ನಮ್ಮ ನಿಲುವು ಬದ್ಧವಾಗಿದ್ದು, ಸಿಎಎ ಈಗಿನ ಸ್ವರೂಪದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮುಸ್ಲಿಮರನ್ನು ಸಿಎಎಯಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂdu ಸಿರ್ಸಾ ಹೇಳಿದ್ದಾರೆ. 2017ರಲ್ಲಿ ರಜೌರಿ ಗಾರ್ಡನ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ಗೆಲುವು ಸಾಧಿಸಿದ್ದ ಸಿರ್ಸಾ ಅವರು ರಾಷ್ಟ್ರೀಯ ನಾಗರಿಕ ನೋಂದಣಿ(ಎನ್ ಆರ್ ಸಿ)ಯನ್ನು ತಮ್ಮ ಪಕ್ಷ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

"ಅಕಾಲಿ ದಳ ನಮ್ಮ ಹಳೆ ಮಿತ್ರಪಕ್ಷವಾಗಿದ್ದು, ಪೌರತ್ವ ಕಾಯ್ದೆ ವಿಷಯದಲ್ಲಿ ಸಂಸತ್ತಿನಲ್ಲಿ ಬೆಂಬಲ ನೀಡಿದೆ. ಈಗ ಚುನಾವಣೆ ಸ್ಪರ್ಧಿಸಲು ಇಚ್ಛೆ ಇಲ್ಲದಿದ್ದರೆ ಅದು ಅವರ ಆಂತರಿಕ ನಿರ್ಧಾರ'' ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಹಾಗೂ ಶಿರೋಮಣಿ ಅಕಾಲಿದಳ ಮೈತ್ರಿ ಅಭ್ಯರ್ಥಿಗಳು ಶಾದಾರಾ, ಕಲ್ಕಾಜಿ, ರಜೌರಿ ಗಾರ್ಡನ್, ಹರಿನಗರ್ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದರು.
2015ರಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಸ್ಥಾನಗಳನ್ನು ಆಮ್ ಆದ್ಮಿ ಪಕ್ಷ ಗೆದ್ದುಕೊಂಡಿತ್ತು. ಬಿಜೆಪಿ ಮೂರು ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ಆದರೆ 2017ರಲ್ಲಿ ಮುನ್ಸಿಪಾಲ್ ಕಾರ್ಪೊರೇಷನ್ ಚುನಾವಣೆ, 2019ರ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತೆ ಲಯಕ್ಕೆ ಮರಳಿದೆ. ಈ ಬಾರಿ ಬಿಜೆಪಿ ಮಿತ್ರ ಪಕ್ಷ ಜೆಜೆಪಿ ಪಕ್ಷ ಕೂಡಾ ಕಣಕ್ಕಿಳಿಯಲಿದೆ. ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ನಡುವೆ ಮೈತ್ರಿ ಮುರಿದಿರುವುದರಿಂದ ಮತದಾರರನ್ನು ಸೆಳೆಯುವುದು ಬಿಜೆಪಿಗೆ ಸುಲಭವಾಗಲಿದೆ.
ದೆಹಲಿಯಲ್ಲಿ ಫೆಬ್ರವರಿ 08ರಂದು ಮತದಾನ ನಡೆಯಲಿದ್ದು, ಫೆಬ್ರವರಿ 11ರಂದು ಫಲಿತಾಂಶ ಹೊರಬರಲಿದೆ. ಜನವರಿ 14ರಿಂದ ಚುನಾವಣಾ ಆಯೋಗ ಅಧಿಸೂಚನೆ ಜಾರಿಯಾಗಲಿದೆ. ಜನವರಿ 24ರೊಳಗೆ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆಯಬಹುದು. 1998ರಿಂದ ದೆಹಲಿಯಲ್ಲಿ ಅಧಿಕಾರಕ್ಕೇರಲು ಸಾಹಸ ಪಟ್ಟು ಫಲ ಕಾಣದಿರುವ ಬಿಜೆಪಿಗೆ ಈ ಬಾರಿ ಅಧಿಕಾರಿ ಗದ್ದುಗೇರಲು ಭಾರಿ ತಂತ್ರಗಾರಿಕೆ ನಡೆಸಿದೆ.












Click it and Unblock the Notifications