ಕಡಿಮೆ ಕಾನೂನು, ಹೆಚ್ಚಿನ ಪ್ರಭಾವ : ಗೌಡರ ಘೋಷಣೆ
ನವದೆಹಲಿ, ನ.11 :'ದೇಶದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಮೊಕದ್ದಮೆಗಳ ಪ್ರಮಾಣವನ್ನು ಕಡಿಮೆ ಮಾಡಬೇಕು. ಕಡಿಮೆ ಕಾನೂನು ಹೆಚ್ಚಿನ ಪರಿಣಾಮ ಎನ್ನುವುದು ನಮ್ಮ ಇಲಾಖೆಯ ಘೋಷಣೆಯಾಗಲಿದೆ' ಎಂದು ಕಾನೂನು ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಖಾತೆ ಬದಲಾವಣೆಯಾದ ನಂತರ ಸೋಮವಾರ ಕಾನೂನು ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಸದಾನಂದ ಗೌಡರು, 'ರೈಲ್ವೆ ಖಾತೆ ಕೈತಪ್ಪಿರುವುದಕ್ಕೆ ತಮಗೆ ಬೇಸರವಿಲ್ಲ. ಕಾನೂನು ಇಲಾಖೆ ದೊಡ್ಡ ಇಲಾಖೆಯಾಗಿದ್ದು, ಎಲ್ಲ ಇಲಾಖೆಗಳು ಕಾನೂನಿನ ಅಗತ್ಯಬಿದ್ದಾಗ ನಮ್ಮ ಇಲಾಖೆಯನ್ನು ಸಂಪರ್ಕಿಸುತ್ತವೆ' ಎಂದರು.

ಕಾನೂನು ಇಲಾಖೆಯಲ್ಲಿಯೂ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿವೆ. ದೇಶದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಮೊಕದ್ದಮೆಗಳ ಪ್ರಮಾಣ ಕಡಿಮೆ ಮಾಡಬೇಕು. ಇದಕ್ಕಾಗಿ ಶಕ್ತಿಮೀರಿ ದುಡಿಯುತ್ತೇನೆ ಎಂದು ಸದಾನಂದ ಗೌಡರು ತಿಳಿಸಿದರು. [ರೈಲ್ವೆ ಸದಾನಂದ ಗೌಡರ ಕೈ ತಪ್ಪಿದ್ದೇಕೆ?]
ಉತ್ತಮ ಕೆಲಸ ಮಾಡಿದ್ದೇನೆ : ರೈಲ್ವೆ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇನೆ. ಬಜೆಟ್ನಲ್ಲಿ ಶೇ.80ರಷ್ಟು ಘೋಷಣೆಗಳನ್ನು ಜಾರಿಗೆ ತಂದಿದ್ದೇನೆ. ರೈಲ್ವೆ ಖಾತೆ ನೂತನ ಸಚಿವರಾದ ಸುರೇಶ್ ಪ್ರಭು ತಜ್ಞರು, ವೃತ್ತಿಪರರು ಅವರು ಇಲಾಖೆಗೆ ಮತ್ತಷ್ಟು ವೇಗ ನೀಡಲಿದ್ದಾರೆ ಎಂದರು.
ಸದಾನಂದ ಗೌಡರು ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಕಾನೂನು ಖಾತೆ ವಹಿಸಿಕೊಂಡ ಸದಾನಂದಗೌಡರನ್ನು ಅಭಿನಂದಿಸಿದರು.
ಯಾವುದೇ ತಾರತಮ್ಯವಿಲ್ಲ : ಸದಾನಂದ ಗೌಡರಿಗೆ ರೈಲ್ವೆ ಖಾತೆ ಬದಲು ಕಾನೂನು ಖಾತೆ ವಹಿಸಲಾಗಿದೆ. ಇದರಲ್ಲಿ ಯಾವುದೇ ತಾರತಮ್ಯವಾಗಿಲ್ಲ, ಯಾವುದೇ ಅಸಮಧಾನವಿಲ್ಲ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications