ಹಣ ಉಳಿಸಲು ಅಗ್ನಿಪಥ್ ಬೇಕಾ? ಸೆಂಟ್ರಲ್ ವಿಸ್ತಾ ಕೈಬಿಡಬೇಕಿತ್ತು ಎಂದ ಸಚಿನ್ ಪೈಲಟ್
ನವದೆಹಲಿ, ಜೂನ್ 19: ಭಾರತೀಯ ಸೇನೆಗಳಿಗೆ ನವಯುವಕರಿಗೆ ಅಲ್ಪಾವಧಿ ಸೇವೆಗೆ ನೇಮಕ ಮಾಡಿಕೊಳ್ಳಲಾಗುವ ಅಗ್ನಿಪಥ್ ಯೋಜನೆ ವಿರುದ್ಧ ದೇಶಾದ್ಯಂತ ವ್ಯಕ್ತವಾಗುತ್ತಿರುವ ಆಕ್ರೋಶಕ್ಕೆ ಕಾಂಗ್ರೆಸ್ನ ಸಚಿನ್ ಪೈಲಟ್ ದನಿಗೂಡಿಸಿದ್ದಾರೆ. ಜನರ ಭಾವನೆಗಳಿಗೆ ಬೆಲೆ ಕೊಟ್ಟು ಸರಕಾರ ಹಠಮಾರಿತನ ಧೋರಣೆ ತಾಳದೆ ಈ ನೇಮಕಾತಿ ಯೋಜನೆಯನ್ನು ಹಿಂಪಡೆಯಬೇಕೆಂದು ರಾಜಸ್ಥಾನ ಕಾಂಗ್ರೆಸ್ ಮುಖಂಡರಾದ ಅವರು ಒತ್ತಾಯಿಸಿದ್ಧಾರೆ.
ಕೇಂದ್ರ ಸರಕಾರ 17.5ರಿಂದ 21 ವರ್ಷದ ವಯೋಮಾನದ ಯುವಕ ಮತ್ತು ಯುವತಿಯರನ್ನು ಅಗ್ನಿವೀರ್ ಹುದ್ದೆಗೆ ಭಾರತದ ಭದ್ರತಾ ಪಡೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಅಗ್ನಿಪಥ್ ಯೋಜನೆಯನ್ನು ಘೋಷಿಸಿದೆ. ನಾಲ್ಕು ವರ್ಷಗಳ ಅಲ್ಪಾವಧಿಯವರೆಗೆ ಮಾತ್ರ ಅವರ ಸೇವಾವಧಿ ಇರುತ್ತದೆ. ಅವರಲ್ಲಿ ಕೆಲ ಮಂದಿಯನ್ನು ಮಾತ್ರ ಸೇನಾ ಪಡೆಗಳಲ್ಲಿ ನಿಯಮಿತ ರೀತಿಯಲ್ಲಿ ಸೇನಾ ಪಡೆಗಳಲ್ಲಿ ಮುಂದುವರಿಸಲಾಗುತ್ತದೆ.
ಕೇಂದ್ರದ ಅಗ್ನಿಪಥ್ ಯೋಜನೆಯ ವಿರುದ್ಧ 'ಸತ್ಯಾಗ್ರಹ'ದ ಪಥ ಹಿಡಿದ ಕಾಂಗ್ರೆಸ್
ಭಾರತೀಯ ಸೇನಾ ಪಡೆಗಳಲ್ಲಿ ಸದ್ಯ ಸೈನಿಕರ ಸರಾಸರಿ ವಯಸ್ಸು 32 ಇದೆ. ಅಗ್ನಿಪಥ್ ಯೋಜನೆ ಬಂದರೆ ಸರಾಸರಿ ವಯಸ್ಸು 26ಕ್ಕೆ ಇಳಿಯುವ ನಿರೀಕ್ಷೆ ಇದೆ. ಈ ಯುವಕರನ್ನು ಸೇನೆಯ ಫ್ರಂಟ್ಲೈನ್ ವಿಭಾಗಗಳಲ್ಲಿ ನಿಯೋಜಿಸುವ ಉದ್ದೇಶ ಇದೆ. ಹಾಗೆಯೇ, ಈ ಅಗ್ನಿವೀರರಿಗೆ ಪಿಂಚಣಿ ಇತ್ಯಾದಿ ಯಾವ ಸೌಲಭ್ಯವೂ ಇರುವುದಿಲ್ಲ. ಈ ಮೂಲಕ ಭಾರೀ ಮೊತ್ತದ ಪಿಂಚಣಿ ಹಣದ ಉಳಿತಾಯ ಮಾಡುವುದೂ ಈ ಯೋಜನೆಯ ಇನ್ನೊಂದು ಪ್ರಮುಖ ಉದ್ದೇಶ ಎನ್ನಲಾಗಿದೆ.
ಸಿಕಂದರಾಬಾದ್ ಹಿಂಸಾಚಾರದ ಹಿಂದಿನ ಮಾಸ್ಟರ್ಮೈಂಡ್ ಒಬ್ಬ ಮಾಜಿ ಯೋಧ
ಸೆಂಟ್ರಲ್ ವಿಸ್ತಾ ಯೋಜನೆ ಯಾಕೆ ಬೇಕಿತ್ತು?
ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಚಿನ್ ಪೈಲಟ್, ಸರಕಾರದ ಪಿಂಚಣಿ ಹಣ ಉಳಿಸುವ ಇರಾದೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸರಕಾರವು ನಿವೃತ್ತ ಯೋಧರ ಪಿಂಚಣಿ ಹಣ ಉಳಿಸಲು ಅಗ್ನಿಪಥ್ ಯೋಜನೆ ತರುವ ಔಚಿತ್ಯವನ್ನು ಅವರು ಪ್ರಶ್ನಿಸಿದ್ಧಾರೆ. 20 ಸಾವಿರ ಕೋಟಿ ರೂ ಮೊತ್ತದ ಸೆಂಟ್ರಲ್ ವಿಸ್ತಾ ಯೋಜನೆ ಹಾಗು 8400 ಕೋಟಿ ರೂ ಮೌಲ್ಯದ ಎರಡು ವಿಮಾನಗಳನ್ನು ಪ್ರಧಾನಿಗಾಗಿ ಖರೀದಿ ಮಾಡಬಾರದಿತ್ತು ಎಂದು ಕುಟುಕಿದ್ದಾರೆ.
"ಸರಕಾರ ಪಿಂಚಣಿ ಹಣವನ್ನು ಉಳಿಸಬೇಕೆಂದಿದ್ದರೆ ಬೇರೆ ಮಾರ್ಗಗಳು ಇದ್ದವು. ಪ್ರಧಾನಿಗಳಿಗಾಗಿ ಎರಡು ವಿಮಾನಗಳನ್ನು ಖರೀದಿಸುವುದು ಬೇಡವಾಗಿತ್ತು. ಸೆಂಟ್ರಲ್ ವಿಸ್ತಾ ನಿರ್ಮಾಣ ಆರಂಭಿಸಬಾರದಿತ್ತು. ಸರಕಾರ ಕೃಷಿ ಕಾನೂನುಗಳನ್ನು ಹೇಗೆ ವಾಪಸ್ ಪಡೆಯಿತೋ ಅದೇ ರೀತಿ ಅಗ್ನಿಪಥ್ ಯೋಜನೆಯನ್ನೂ ಹಿಂಪಡೆಯಬೇಕು" ಎಂದು ಸಚಿನ್ ಪೈಲಟ್ ಒತ್ತಾಯಿಸಿದ್ಧಾರೆ.
ಏನಿದು ಸೆಂಟ್ರಲ್ ವಿಸ್ತಾ?
ಸೆಂಟ್ರಲ್ ವಿಸ್ತಾ ಎಂಬುದು ದೇಶದ ರಾಜಧಾನಿ ನವದೆಹಲಿಯ ರೈಸಿನಾ ಹಿಲ್ನಲ್ಲಿ ನಿರ್ಮಿಸಲಾಗಿರುವ ಆಡಳಿತಾತ್ಮಕ ಕಚೇರಿಗಳಿರುವ ಪ್ರದೇಶ. ಬ್ರಿಟಿಷರ ಕಾಲದಲ್ಲಿ ಇದನ್ನು ನಿರ್ಮಿಸಲಾಗಿತ್ತು. ಈಗ ಅದರ ಪುನರಾಭಿವೃದ್ಧಿ ಯೋಜನೆಯನ್ನು ನಡೆಸಲಾಗುತ್ತಿದೆ. ಇದರಲ್ಲಿ ಬಹಳ ವಿಸ್ತಾರವಾದ ಹೊಸ ಸಂಸತ್ ಕಟ್ಟಡವೂ ಇರುತ್ತದೆ. ಹಾಗೆಯೇ ಎಲ್ಲಾ ಸಚಿನಾಲಯಗಳು ಒಂದೇ ಪ್ರದೇಶದಲ್ಲಿ ಇರುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಕೆಲ ಹಳೆಯ ಕಟ್ಟಡಗಳನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗುತ್ತಿದೆ. ನರೇಂದ್ರ ಮೋದಿ ನೇತೃತ್ವದ ಸರಕಾರ ಕೈಗೊಂಡಿರುವ ಈ ಯೋಜನೆಯ ಅಂದಾಜು ವೆಚ್ಚ 20 ಸಾವಿರ ಕೋಟಿ ರೂ ಆಗಿದ್ದು 2024ರಲ್ಲಿ ಇದು ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಏನಿದು ಪ್ರಧಾನಿಗಳ ವಿಮಾನ?
ಪ್ರಧಾನಿಗಳ ಸೇವೆಗೆಂದು ಎರಡು ಬೋಯಿಂಗ್ 777 ವಿಮಾನಗಳನ್ನು ಅಮೆರಿಕದಿಂದ ಖರೀದಿಸಲಾಗಿದೆ. ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ವಿದೇಶ ವಿಶೇಷ ಅತಿಥಿಗಳು ಇತ್ಯಾದಿ ವಿವಿಐಪಿಗಳನ್ನು ಸಾಗಿಸಲು ಈ ಬಳಸುವ ಈ ಎರಡು ವಿಮಾನಗಳ ವೆಚ್ಚ ೮,೪೦೦ ಕೋಟಿ ರೂ ಆಗಿದೆ.
ಅಮೆರಿಕದ ಅಧ್ಯಕ್ಷರು ಬಳಸುವ ಏರ್ ಫೋರ್ಸ್ ಒನ್ ವಿಶೇಷತೆಗಳ ಬಗ್ಗೆ ನೀವು ಕೇಳಿರಬಹುದು. ಬಹುತೇಕ ಅಂಥವೇ ವಿಶೇಷ ಫೀಚರ್ಗಳು ಭಾರತಕ್ಕೆ ನೀಡಲಾಗಿರುವ ಬಿ777 ಬೋಯಿಂಗ್ ವಿಮಾನಗಳಲ್ಲಿ ಇವೆ ಎನ್ನಲಾಗಿದೆ. ಈ ಹಿಂದೆ ಬಳಕೆಯಾಗುತ್ತಿದ್ದ ಏರ್ ಇಂಡಿಯಾದ ಬೋಯಿಂಗ್ 747 ವಿಮಾನದಲ್ಲಿ ಆಧುನಿಕ ಭದ್ರತಾ ಸೌಲಭ್ಯಗಳು ಇರಲಿಲ್ಲವಾದ್ದರಿಂದ ಈ ಹೊಸ ವಿಮಾನಗಳನ್ನು ತರಿಸಲಾಗಿದೆ.
ಅನಗತ್ಯ ವೆಚ್ಚ ಎಂಬುದು ವಿಪಕ್ಷಗಳ ಕೂಗು
ರಾಫೆಲ್ ಯುದ್ಧವಿಮಾನ ಖರೀದಿ, ಸೆಂಟ್ರಲ್ ವಿಸ್ತಾ ಯೋಜನೆ ಮತ್ತು ಬೋಯಿಂಗ್ ವಿಮಾನಗಳ ಖರೀದಿ ಕ್ರಮವನ್ನು ಕಾಂಗ್ರೆಸ್ ಮುಖಂಡರು ಮೊದಲಿಂದಲೂ ಪ್ರಶ್ಹಿಸುತ್ತಾ ಬಂದಿದ್ದು, ಸರಕಾರ ಅನಗತ್ಯ ದುಂದುವೆಚ್ಚ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಅನಗತ್ಯವಾಗಿ ದುಂದುವೆಚ್ಚ ಮಾಡುವ ಸರಕಾರ ಈಗ ನಿವೃತ್ತ ಯೋಧರಿಗೆ ಪಿಂಚಣಿ ಹಣ ಕೊಡುವುದನ್ನು ತಪ್ಪಿಸಲು ಅಗ್ನಿಪಥ್ ಯೋಜನೆ ಕೈಗೊಂಡಿರುವುದು ವಿಪಕ್ಷಗಳ ಟೀಕೆಗೆ ಆಹಾರವಾಗಿದೆ. ಅಗ್ನಿಪಥ್ ಯೋಜನೆ ವಿರುದ್ಧ ಸೇನಾ ಉದ್ಯೋಗಾಕಾಂಕ್ಷಿಗಳು ದೇಶದೆಲ್ಲೆಡೆ ನಡೆಸುತ್ತಿರುವ ಪ್ರತಿಭಟನೆಗಳಿಗೆ ಕಾಂಗ್ರೆಸ್ ಕೂಡ ಬೆಂಬಲ ವ್ಯಕ್ತಪಡಿಸಿದೆ. ದೇಶದ ಹಲವೆಡೆ ಯುವಕರಿಗೆ ಬೆಂಬಲವಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕಾಂಗ್ರೆಸ್ ಸತ್ಯಾಗ್ರಹ ನಡೆಸಿದೆ.
ಕಳೆದ ಐದಾರು ದಿನಗಳಿಂದಲೂ ನಡೆಯುತ್ತಿರುವ ಯುವಕರ ಪ್ರತಿಭಟನೆ ಹಲವೆಡೆ ಹಿಂಸಾಚಾರಗಳಿಗೆ ತಿರುಗಿದ್ದೂ ಉಂಟು. ಹಲವಾರು ರೈಲುಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಹಾನಿ ಮಾಡಿದ್ಧಾರೆ. ಹಲವು ರೈಲು ನಿಲ್ದಾಣಗಳ ಮೇಲೆ ದಾಳಿ ಮಾಡಿದ್ದಾರೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬಿಹಾರದಲ್ಲಿ ಡಿಸಿಎಂ ಮನೆಗೇ ನುಗ್ಗಿ ಬೆಂಕಿ ಹಚ್ಚಿದ್ದಾರೆ. ಯುವಕ ಪ್ರತಿಭಟನೆ ಮತ್ತು ಹಿಂಸಾಚಾರಗಳಿಂದ ರೈಲ್ವೆ ಇಲಾಖೆಗೆ ಕೋಟ್ಯಂತ ರೂ ನಷ್ಟವಾಗಿರುವ ಸಾಧ್ಯತೆ ಇದೆ.
(ಒನ್ಇಂಡಿಯಾ ಸುದ್ದಿ)