ಬಿಜೆಪಿ ಸಂಸದ ಅರೆಸ್ಟ್: ಮೋದಿಗೆ ಸಿಬಿಐ ಆಘಾತ
ನವದೆಹಲಿ, ನ.6: ಮುಂದೆ ಪ್ರಧಾನಿಯಾಗುವ ಧಾವಂತದಲ್ಲಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಸಿಬಿಐ ಮತ್ತೊಂದು ಆಘಾತ ನೀಡಿದೆ. ಆರ್ ಟಿಐ (ಮಾಹಿತಿ ಹಕ್ಕು) ಕಾರ್ಯಕರ್ತ ಅಮಿತ್ ಜೆಥ್ವಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜುನಾಗಢ ಕ್ಷೇತ್ರದ ಬಿಜೆಪಿ ಸಂಸದ ದೀನೂ ಬೋಘಾ ಸೋಲಂಕಿಯನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ಸಂಸದ ದೀನೂ ಬಂಧನದಿಂದ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ತೀವ್ರ ಹಿನ್ನಡೆ ಉಂಟುಮಾಡಿದ್ದು, ವಿಪಕ್ಷ ಕಾಂಗ್ರೆಸ್ ಇದನ್ನೇ ಬಿಜೆಪಿ ಹಾಗೂ ನರೇಂದ್ರ ಮೋದಿ ವಿರುದ್ಧದ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಸಿದ್ಧತೆ ನಡೆಸಿದೆ.

ಈ ಹಿಂದೆ ವಿಚಾರಣೆ ವೇಳೆ ಸೋಲಂಕಿ ನಿರ್ದೋಷಿ ಎಂದು ಅಹಮದಾಬಾದ್ ಪೊಲೀಸರು ಘೋಷಿಸಿದ್ದರು. ಆದರೆ ರಾಜ್ಯ ಹೈಕೋರ್ಟ್ ಪ್ರಕರಣವನ್ನು ಮರುವಿಚಾರಣೆ ನಡೆಸುವಂತೆ ಆದೇಶಿಸಿದ್ದರಿಂದ ಸೋಲಂಕಿಯನ್ನು ವಿಚಾರಣೆಗೆ ಕರೆಯಿಸಿಕೊಂಡ ಸಿಬಿಐ, ಸಂಜೆ ವೇಳೆಗೆ ಅವರನ್ನು ಬಂಧಿಸಿದೆ.
ಅಹಮದಾಬಾದಿನಲ್ಲಿರುವ ಗುಜರಾತ್ ಹೈಕೋರ್ಟ್ ಬಳಿ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ 32 ವರ್ಷದ ಆರ್ ಟಿಐ ಕಾರ್ಯಕರ್ತ ಜೆಥ್ವಾ ಅವರನ್ನು 2010ರಲ್ಲಿ ಹತ್ಯೆ ಮಾಡಿದ್ದರು. ಜೆಥ್ವಾ ಅವರು ರಸ್ತೆಯಲ್ಲಿದ್ದ ನ್ಯಾಯವಾದಿಯೊಬ್ಬರ ನಿವಾಸದ ಎದುರೇ ಮೋಟಾರ್ ಬೈಕ್ ಮೇಲೆ ಇಬ್ಬರು ಅಪರಿಚಿತರು ಅವರನ್ನು ಗುಂಡಿಟ್ಟು ಸಾಯಿಸಿದ್ದರು.
ಗುಜರಾತ್ನ ಗೀರ್ ಅರಣ್ಯ ಪ್ರದೇಶದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಲಂಕಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದು, ಪ್ರಕೃತಿ ಸಂಪತ್ತನ್ನು ಅಕ್ರಮವಾಗಿ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಅಮಿತ್ ಜೆಥ್ವಾ ಅವರು ಸೋಲಂಕಿ ವಿರುದ್ಧ ಆರೋಪ ಮಾಡಿದ್ದರು. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ದಾಖಲೆಗಳನ್ನೂ ಬಿಡುಗಡೆ ಮಾಡಿದ್ದರು.
ಗುಜರಾತಿನ ಸೌರಾಷ್ಟ್ರ ಭಾಗದಲ್ಲಿ ಅತ್ಯಂತ ಬಲಿಷ್ಠರಾಗಿರುವ ಅಕ್ರಮ ಗಣಿಗಾರಿಕೆ ಮಾಫಿಯಾ ವಿರುದ್ಧ ಹೋರಾಟ ಮಾಡಿದ್ದೇ ಜೆಥ್ವಾಗೆ ಮುಳುವಾಯಿತು ಎಂದು ಅವರ ಕುಟುಂಬಸ್ಥರು ಹೋರಾಟಕ್ಕೆ ಇಳಿದಿದ್ದರು. ಜೆಥ್ವಾ ಅವರ ಅಪ್ಪ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications