ಬಟ್ಟೆ ಕೊಳ್ಳುವ ಹಣದಲ್ಲಿ ಬಂದೂಕು ಖರೀದಿಸಿದ್ದ ರಾಮಭಕ್ತ ಗೋಪಾಲ
ನವದೆಹಲಿ, ಫೆಬ್ರವರಿ 01: ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಜಾಮಿಯಾ ವಿವಿ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ ರಾಮಭಕ್ತ ಗೋಪಾಲ ಬಟ್ಟೆ ಕೊಳ್ಳಲೆಂದು ಕೊಟ್ಟ ಹಣದಲ್ಲಿ ಬಂದೂಕು ಖರೀದಿಸಿದ್ದನಂತೆ.
ಸಂಬಂಧಿಕರ ಮದುವೆಗೆಂದು ಬಟ್ಟೆ ಕೊಳ್ಳಲಿ ಎಂದು ಪೋಷಕರು ರಾಮಭಕ್ತ ಗೋಪಾಲನಿಗೆ ಹತ್ತು ಸಾವಿರ ಹಣ ಕೊಟ್ಟಿದ್ದರಂತೆ ಅದೇ ಹಣದಲ್ಲಿ ಆತ ಬಂದೂಕು ಕೊಂಡಿದ್ದಾನೆ.
ದೆಹಲಿಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ವೇಳೆ ಫೈರಿಂಗ್: ವಿದ್ಯಾರ್ಥಿಗೆ ಗಾಯ
ಅದೇ ಬಂದೂಕಿನಿಂದ ಎರಡು ದಿನದ ಹಿಂದೆ ಸಿಎಎ-ಎನ್ಆರ್ಸಿ ವಿರುದ್ದ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ್ದ.
ಘಟನೆ ನಡೆದ ಕೂಡಲೇ ಪೊಲೀಸರು ಆತನನ್ನು ಬಂಧಿಸಿದ್ದು, ವಿಚಾರಣೆ ಚಾಲ್ತಿಯಲ್ಲಿದೆ. ಗೋಪಾಲ ಹೇಳಿರುವ ಪ್ರಕಾರ, ಕೇವಲ ಹತ್ತು ಸಾವಿರ ಕೊಟ್ಟು ದೆಹಲಿಯ ಗೌತಮ ಬುದ್ಧ ನಗರ ಬಳಿ ಒಬ್ಬರಿಂದ ಬಂದೂಕು ಖರೀದಿಸಿದನಂತೆ.
ಆತ ಕಳೆದ ಎಂಟು ತಿಂಗಳಿನಿಂದಲೂ ಫೇಸ್ಬುಕ್ನಲ್ಲಿ ಕೆಲವರೊಂದಿಗೆ ಗೆಳೆತನ ಮಾಡಿಕೊಂಡಿದ್ದು, 'ಹಿಂದೂ ಧರ್ಮ ಅಪಾಯದಲ್ಲಿದೆ' ಎಂದು ಅವರು ಹೇಳಿದ್ದರಂತೆ. ಕೆಲವರ ಫೇಸ್ಬುಕ್ ಪೋಸ್ಟ್ಗಳನ್ನು ನೋಡುತ್ತಿದ್ದ ಆತ ಸಹ ಅದನ್ನು ನಂಬಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ರಾಮಭಕ್ತ ಗೋಪಾಲನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು 14 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ.
ರಾಮಭಕ್ತ ಗೋಪಾಲ ಗುಂಡು ಹಾರಿಸಿದ್ದು ದೇಶದಾದ್ಯಂತ ಭಾರಿ ಸುದ್ದಿಯಾಗಿತ್ತು. ಆತ ಬಂದೂಕು ಹಿಡಿದು ಮಾತನಾಡುತ್ತಿದ್ದಾಗ ಪೊಲೀಸರು ಏನೂ ಆಗದಂತೆ ಸುಮ್ಮನಿದ್ದದ್ದು ಸಹ ಭಾರಿ ವಿವಾದ ಹುಟ್ಟುಹಾಕಿದೆ.