ರಾಜ್ಯಸಭೆಗೆ ಅಗೌರವ ತೋರುವುದು ಪ್ರಜಾಪ್ರಭುತ್ವವೇ?: ವೆಂಕಯ್ಯ ನಾಯ್ಡು ಪ್ರಶ್ನೆ
ನವದೆಹಲಿ, ಡಿಸೆಂಬರ್ 2: ಸಂಸತ್ತಿನಲ್ಲಿ ಪ್ರತಿಪಕ್ಷ ಸದಸ್ಯರು ತೋರಿದ ಅಗೌರವದ ವರ್ತನೆಯನ್ನು ಪ್ರಜಾಪ್ರಭುತ್ವ ಎನ್ನುವಂತೆ ಸಮರ್ಥಿಸಿಕೊಳ್ಳಲು ಅಪಪ್ರಚಾರ ನಡೆಸಲಾಗುತ್ತಿದೆ ಎಂದು ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ದೂಷಿಸಿದ್ದಾರೆ.
ರಾಜ್ಯಸಭೆ ವಿರೋಧಪಕ್ಷದ 12 ಸಂಸದರನ್ನು ಅಮಾನತುಗೊಳಿಸಿದ ಆದೇಶಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 2ರ ಗುರುವಾರ ಅವರು ಮೇಲ್ಮನೆಯಲ್ಲಿ ಮಾತನಾಡಿದರು. "ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅಪಚಾರ ಮಾಡಲಾಗುತ್ತಿದೆ ಎಂಬ ಸಂದೇಶವನ್ನು ರವಾನಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ವರ್ತನೆಯಿಂದ ಸದನದ ಪ್ರಜಾಸತ್ತಾತ್ಮಕತೆಗೆ ಅಪಚಾರವಾಗಲಿಲ್ಲವೇ. ದೇಶದ ಪ್ರಜೆಗಳು ಪ್ರಜಾಪ್ರಭುತ್ವದ ಈ ಹೊಸ ಮಾನದಂಡಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ವಿಶ್ವಾಸ ನನಗಿದೆ," ಎಂದು ಹೇಳಿದರು.
ರಾಜ್ಯಸಭೆಯ 12 ಸಂಸದರ ಅಮಾನತು ಆದೇಶ ಹಿಂಪಡೆಯುವುದಿಲ್ಲ: ಸಭಾಪತಿ
ಈ ಹಿಂದಿನ ಸಂಸತ್ ಮುಂಗಾರು ಅಧಿವೇಶನದಲ್ಲಿ ಅಶಿಸ್ತಿನ ವರ್ತನೆ ತೋರಿದ ಕಾರಣಕ್ಕಾಗಿ ಮೇಲ್ಮನೆ ಪ್ರತಿಪಕ್ಷದ 12 ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ರಾಜ್ಯಸಭೆಯಿಂದ ಅಮಾನತುಗೊಳಿಸಿ ನವೆಂಬರ್ 29ರಂದು ಆದೇಶಿಸಲಾಗಿತ್ತು. ಈ ಬಾರಿಯ ಸಂಸತ್ ಅಧಿವೇಶನವು ಡಿಸೆಂಬರ್ 23ರವರೆಗೂ ನಡೆಯಲಿದೆ.
ತಪ್ಪು ಮಾಡುವುದಲ್ಲ, ತಿದ್ದಿಕೊಳ್ಳುವುದು ಮುಖ್ಯ:
"ರಾಜ್ಯಸಭೆಯಿಂದ ಅಮಾನತಗೊಂಡ ಸಂಸದರ ಕ್ಷಮೆಯಾಚಿಸುವ ವಿಷಯಗಳ ಬಗ್ಗೆ ತರಾಟೆ ತೆಗೆದುಕೊಂಡರು. ತಪ್ಪು ಮಾಡುವುದು ಮನುಷ್ಯನ ಸಹಜ ಗುಣ, ಆದರೆ ಅದನ್ನು ತಿದ್ದುಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಒಂದು ಬಾರಿ ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ನಿರಾಕರಿಸುವಂತಿಲ್ಲ ಹಾಗೂ ಆ ತಪ್ಪುಗಳನ್ನು ಮುಚ್ಚಿಹಾಕುವಂತೆ ಒತ್ತಾಯಿಸಲು ಸಾಧ್ಯವಿಲ್ಲ," ಎಂದು ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಹೇಳಿದರು.
"ನೀವು ನಿಮ್ಮ ವರ್ತನೆಯ ಬಗ್ಗೆ ಕ್ಷಮಾಪಣೆ ಕೇಳುವುದಕ್ಕೆ ಬಯಸುವುದಿಲ್ಲ. ಅದರ ಬದಲಿಗೆ ಸದನದ ನಿಯಮಗಳ ಅಡಿಯಲ್ಲಿ ನಿಗದಿತ ಪ್ರಕ್ರಿಯೆಯ ಪ್ರಕಾರ ಈ ಸದನದ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದೀರಿ. ಇದು ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿಹಿಡಿಯುತ್ತದೆಯೇ," ಎಂದು ಅವರು ಪ್ರಶ್ನಿಸಿದರು.
ರಾಜ್ಯಸಭೆ ಅಧ್ಯಕ್ಷರ ಕ್ಷಮೆಯಾಚಿಸಿದರೆ ಅಮಾನತು ವಾಪಸ್:
ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರ ಕ್ಷಮೆಯಾಚಿಸಿದರೆ 12 ಸಂಸದರ ಅಮಾನತು ಅನ್ನು ರದ್ದುಗೊಳಿಸಲು ಸರ್ಕಾರ ಮುಕ್ತವಾಗಿದೆ ಎಂದು ಕಳೆದ ನವೆಂಬರ್ 30ರಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದರು.
"ಪ್ರಜಾಪ್ರಭುತ್ವ ವಿರೋಧಿ" ಎಂಬ ಉಲ್ಲೇಖ ಸರಿಯೇ?:
ರಾಜ್ಯಸಭೆಯಲ್ಲಿ ಕೆಲವು ಗೌರವಾನ್ವಿತ ನಾಯಕರು ತಮ್ಮ ಹನ್ನೆರೆಡು ಸಂಸದರ ಅಮಾನತು ಪ್ರಕ್ರಿಯೆ ಪ್ರಜಾಪ್ರಭುತ್ವ ವಿರೋಧಿ ಎಂದು ವಾಖ್ಯಾನಿಸುತ್ತಿದ್ದಾರೆ. ಅವರ ಹೇಳಿಕೆಯು ನ್ಯಾಯವಾಗಿದೆ ಎಂಬುದನ್ನು ತಿಳಿಯಲು ನಾನೂ ಸಹ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು, ಆದರೂ ನನಗೆ ಅರ್ಥ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಈ ರೀತಿಯ ಸಂಸದರು ಅಮಾನತು ಪ್ರಕ್ರಿಯೆ ಇದೇ ಮೊದಲೇನೂ ಅಲ್ಲ. 1962ರಲ್ಲಿ ಸಂಸದರ ಅಮಾನತು ಪ್ರಕ್ರಿಯೆ ಶುರುವಾಗಿದ್ದು, 2010ರವರೆಗೂ 11 ಬಾರಿ ಸಂಸದರ ಅಮಾನತುಗೊಳಿಸಲಾಗಿದೆ. ಅವೆಲ್ಲವೂ ಪ್ರಜಾಸತ್ಮಾತ್ಮಕ ವ್ಯವಸ್ಥೆಗೆ ವಿರುದ್ಧವಾಗಿದ್ದವೇ, ಹಾಗಿದ್ದರೆ ಇಷ್ಟು ವರ್ಷ ನಾವೇಕೆ ಅವುಗಳನ್ನು ಆಶ್ರಯಿಸಿದ್ದೆವು," ಎಂದು ವೆಂಕಯ್ಯ ನಾಯ್ಡು ಪ್ರಶ್ನಿಸಿದರು.
ಅಮಾನತುಗಳನ್ನು 'ಪ್ರಜಾಪ್ರಭುತ್ವ ವಿರೋಧಿ' ಎಂದು ಕರೆದಿರುವ ವಿರೋಧ ಪಕ್ಷದ ನಾಯಕರು ಈ ಕ್ರಮವನ್ನು ವಿರೋಧಿಸಲು ಕಾರಣಗಳನ್ನು ತಿಳಿಸುತ್ತಿಲ್ಲ. ಕಳೆದ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಸಂಸದರು ತೋರಿದ ನಡುವಳಿಕೆಯು ಅಸಮಾಧಾನಕರವಾಗಿತ್ತು ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಸಂಸದರ ಅಮಾನತು ವಿರೋಧಿಸಿ ಪ್ರತಿಪಕ್ಷಗಳ ಪ್ರತಿಭಟನೆ:
ನವದೆಹಲಿಯ ಸಂಸತ್ ಎದುರಿನ ಗಾಂಧಿ ಪ್ರತಿಮೆ ಬಳಿ ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸಂಸದರು ಸಹ ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯಸಭೆಯ 12 ಸಂಸದರ ಅಮಾನತು ಆದೇಶವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
Recommended Video