ಸುಪ್ರಿಂಕೋರ್ಟ್ ತೀರ್ಪಿನ ಬಳಿಕವೂ ರಫೇಲ್ ಬಿಡಲೊಲ್ಲದ ರಾಹುಲ್ ಗಾಂಧಿ
ನವದೆಹಲಿ, ಡಿಸೆಂಬರ್ 14: ರಫೇಲ್ ಹಗರಣದ ಬಗ್ಗೆ ಸುಪ್ರಿಂ ಕೋರ್ಟ್ ತೀರ್ಪು ನೀಡಿದಾಗ್ಯೂ ರಾಹುಲ್ ಗಾಂಧಿಗೆ ಸಮಾಧಾನವಾಗಿಲ್ಲ. ರಫೇಲ್ ಒಪ್ಪಂದದಲ್ಲಿ ಹಗರಣ ನಡೆದಿಲ್ಲ ಎಂದು ನಾನು ಒಪ್ಪುವುದಿಲ್ಲವೆಂದು ರಾಹುಲ್ ಗಾಂಧಿ ಪಟ್ಟುಹಿಡಿದಿದ್ದಾರೆ.
ಇಂದು ದೆಹಲಿಯ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸುಪ್ರಿಂಕೋರ್ಟ್ ತೀರ್ಪಿನ ಕೆಲವು ಮಾಹಿತಿಯ ಬಗ್ಗೆ ತೀವ್ರ ಅನುಮಾನ ವ್ಯಕ್ತಪಡಿಸಿದರು. ಜೊತೆಗೆ ರಫೇಲ್ ನಲ್ಲಿ ಹಗರಣ ನಡೆದಿರುವುದು ನೂರಕ್ಕೆ ನೂರು ಸತ್ಯ ಎಂದು ಅವರು ಮೇಜು ಗುದ್ದಿ ಹೇಳಿದರು.
ರಫೇಲ್ ವಿಮಾನದ ಬೆಲೆಯ ಮಾಹಿತಿ ಸಿಎಜೆಯ ವರದಿಯಲ್ಲಿದ್ದು ಅದು ಪಬ್ಲಿಕ್ ಅಕೌಂಟ್ಸ್ ಕಮಿಟಿ ಎದುರು ಚರ್ಚೆಯಾಗಿದೆ ಎಂದು ಸುಪ್ರಿಂ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ ಆದರೆ ರಫೇಲ್ ಬೆಲೆಯ ಮಾಹಿತಿ ಪಬ್ಲಿಕ್ ಅಕೌಂಟ್ಸ್ ಕಮಿಟಿಗೆ ಬಂದೇ ಇಲ್ಲ ಎಂದು ರಾಹುಲ್ ಹೇಳಿದರು.

ಪಬ್ಲಿಕ್ ಅಕೌಂಟ್ಸ್ ಕಮಿಟಿಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಖರ್ಗೆ ಮಾತನಾಡಿ, ರಫೇಲ್ ವಿಮಾನದ ಬೆಲೆಯ ಯಾವುದೇ ವರದಿ ಪಬ್ಲಿಕ್ ಅಕೌಂಟ್ಸ್ ಕಮಿಟಿಗೆ ಬಂದೇ ಇಲ್ಲ. ಸಮಿತಿಗೆ ಅದು ಬಂದಿದ್ದರೆ ನಾವು ಅದನ್ನು ಸದನದಲ್ಲಿ ಇಡುತ್ತಿದ್ದೆವು ಎಂದು ಅವರು ಹೇಳಿದರು.
ನಂತರ ಮತ್ತೆ ಮಾತನಾಡಿದ ರಾಹುಲ್ ಗಾಂಧಿ, ಎಂದು ರಫೇಲ್ ಹಗರಣದ ಬಗ್ಗೆ ಸದನ ಸಮಿತಿ ತನಿಖೆ ನಡೆಯುತ್ತದೆಯೋ ಅಂದು ಮೋದಿ ಮತ್ತು ಅನಿಲ್ ಅಂಬಾನಿ ಇಬ್ಬರೂ ಕಳ್ಳರೆಂದು ಗೊತ್ತಾಗುತ್ತದೆ ಎಂದು ಹೇಳಿದರು.
ನಾವು ಕೇಳಿದ ಪ್ರಶ್ನೆಗಳೆಂದರೆ ಒಂದೂ ವಿಮಾನ ತಯಾರಿಸದ ಅನಿಲ್ ಅಂಬಾನಿಗೆ ಒಪ್ಪಂದ ನೀಡಿದ್ದೇಕೆ. ಒಪ್ಪಂದವನ್ನು ಎಚ್ಎಎಲ್ನಿಂದ ಕಿತ್ತುಕೊಂಡು ಫ್ರಾನ್ಸ್ಗೆ ಕೊಟ್ಟಿದ್ದೇಕೆ, ರಫೇಲ್ ವಿಮಾನದ ದರದ ಬಗ್ಗೆ ರಕ್ಷಣಾ ಸಚಿವೆ ಗೊಂದಲದ ಹೇಳಿಕೆಗಳನ್ನು ಕೊಟ್ಟಿದ್ದೇಕೆ. ಮೋದಿ ಅವರು ರಫೇಲ್ ಒಪ್ಪಂದದ ಬಗ್ಗೆ ಫ್ರಾನ್ಸ್ ಅಧ್ಯಕ್ಷರ ಬಳಿ ಚರ್ಚಿಸಿದ್ದೇಕೆ? ಈ ಪ್ರಶ್ನೆಗಳಿಗೆ ನಮಗೆ ಉತ್ತರ ಬೇಕಾಗಿದೆ ಎಂದು ರಾಹುಲ್ ಹೇಳಿದರು.












Click it and Unblock the Notifications