ರಾಹುಲ್ ಗಾಂಧಿ ಒಬ್ಬ 'ಬಾಲಕ', ಕೇಜ್ರಿವಾಲ್ ವ್ಯಂಗ್ಯ!
ನವದೆಹಲಿ, ಡಿಸೆಂಬರ್ 14 : "ರಾಹುಲ್ ಗಾಂಧಿ ಒಬ್ಬ 'ಬಾಲಕ'. ಭಾರತೀಯ ರೈಲ್ವೆ ಕೇಂದ್ರ ಸರಕಾರದ ಅಧೀನದಲ್ಲಿ ಬರುತ್ತದೆ ಎಂಬು ಕಾಂಗ್ರೆಸ್ ಪಕ್ಷ ಅವರಿಗೆ ಹೇಳಿಲ್ಲ, ಪಾಪ!"
ದೆಹಲಿಯಲ್ಲಿನ ಕೊಳೆಗೇರಿಯನ್ನು ರೈಲ್ವೆ ಇಲಾಖೆ ಧ್ವಂಸಗೊಳಿಸುತ್ತಿರುವುದರ ವಿರುದ್ಧ ಆಮ್ ಆದ್ಮಿ ಪಕ್ಷ ಪ್ರತಿಭಟನೆ ನಡೆಸುತ್ತಿರುವುದನ್ನು ರಾಹುಲ್ ಗಾಂಧಿ ಪ್ರಶ್ನಿಸಿದ್ದಕ್ಕೆ ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಮೇಲಿನಂತೆ ವ್ಯಂಗ್ಯವಾಡಿದ್ದಾರೆ.
ಆಮ್ ಆದ್ಮಿ ಪಕ್ಷ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಪ್ರತಿಯಾಗಿ, "ಯಾಕೆ ಆಪ್ ಧರಣಿ ನಡೆಸುತ್ತಿದೆ? ದೆಹಲಿಯಲ್ಲಿ ಅವರು ಅಧಿಕಾರ ಹಿಡಿದಿದ್ದಾರೆ" ಎಂದು ರಾಹುಲ್ ಗಾಂಧಿ ಟೀಕಿಸಿದ್ದರು. ಕೊಳೆಗೇರಿಯನ್ನು ರೈಲ್ವೆ ಇಲಾಖೆ ತೆರವುಗೊಳಿಸುತ್ತಿರುವುದನ್ನು ವಿರೋಧಿಸಿ ಆಪ್ ನಡೆಸುತ್ತಿರುವ ಪ್ರತಿಭಟನೆಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದರು ಕೂಡ ಭಾಗಿಯಾಗಿದ್ದಾರೆ. [ಮೋದಿಗೆ ಹ್ಯಾಂಡ್ ಶೇಕ್ ನೀಡಲು ರಾಹುಲ್ ನಿರಾಕರಿಸಿದ್ರೆ!?]

ಕೊಳೆಗೇರಿ ತೆರವುಗೊಳಿಸುವ ಸಂದರ್ಭದಲ್ಲಿ ಕಾರ್ಮಿಕರೊಬ್ಬರ 6 ತಿಂಗಳ ಮಗುವೊಂದು ಸಾವನ್ನಪ್ಪಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ತೆರವುಗೊಳಿಸಿದ ನಂತರ ಕೊಳೆಗೇರಿ ನಿವಾಸಿಗಳಿಗೆ ವಾಸಿಸಲು ಪ್ರತ್ಯೇಕ ವ್ಯವಸ್ಥೆಯನ್ನೂ ರೈಲ್ವೆ ಇಲಾಖೆ ಮಾಡಿಲ್ಲ. ಇದರ ವಿರುದ್ಧ ಕೇಜ್ರಿವಾಲ್ ತಿರುಗಿನಿಂತಿದ್ದಾರೆ.
ಆ ಕೊಳೆಗೇರಿಯಲ್ಲಿ 1992ರಿಂದಲೂ ಜನರು ವಾಸಿಸುತ್ತಿದ್ದಾರೆ. ಆದರೆ, ಕೆಲವೇ ನಿಮಿಷಗಳಲ್ಲಿ ರೈಲ್ವೆ ಇಲಾಖೆ ಕೊಳೆಗೇರಿಯನ್ನು ಧ್ವಂಸ ಮಾಡಿಹಾಕಿದೆ ಎಂದು ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆರವುಗೊಳಿಸುವ ಕಾರ್ಯ ಆರಂಭವಾಗುವ ಎರಡು ಗಂಟೆ ಮೊದಲೇ ಮಗು ಸಾವನ್ನಪ್ಪಿದೆ ಎಂದು ಇಲಾಖೆ ನೀಡಿರುವ ಹೇಳಿಕೆ ಕೇಜ್ರಿವಾಲ್ ಅವರನ್ನು ಮತ್ತಷ್ಟು ಕೆರಳಿಸಿದೆ. [ರಾಹುಲ್ ಗಾಂಧಿ ಗೇಲಿ ಮಾಡಿದ ಚೇತನ್ ಭಗತ್]
"ಕೊಳೆಗೇರಿ ತೆರವು ಮಾಡಿಸುವ ಕಾರ್ಯ ಮಾಡಿದವರು ಮನುಷ್ಯರಲ್ಲ, ಅವರು ಮೃಗಗಳು" ಎಂದು ಅರವಿಂದ್ ಕೇಜ್ರಿವಾಲ್ ತೀವ್ರವಾಗಿ ಟೀಕಿಸಿದ್ದಾರೆ. ಪಶ್ಚಿಮ ದೆಹಲಿಯ ಶಕುರ್ ಬಸ್ತಿಯಲ್ಲಿದ್ದ 1200 ಗುಡಿಸಲುಗಳನ್ನು ರೈಲ್ವೆ ಇಲಾಖೆ ತೆರವುಗೊಳಿಸಿದೆ. ಮೂರು ಬಾರಿ ನೋಟೀಸ್ ನೀಡಿದ ನಂತರವೇ ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿದೆ ಎಂದು ಸಮಜಾಯಿಷಿ ನೀಡಿದೆ.












Click it and Unblock the Notifications