5 ಲಕ್ಷ ರೂ.ಸಾಲ ಪಡೆದು ವಾಪಸ್ ಕೊಡಲು ನಿರಾಕರಿಸಿದ ಸ್ನೇಹಿತ : ವಕೀಲೆಯಾಗಿದ್ದರೂ ಕೇಸ್ ಹಾಕದೆ ಈ ತಂತ್ರ ಅನುಸರಿಸಿದ ಮಹಿಳೆ
ಸ್ನೇಹಿತರಿಗೆ ಹಣದ ಸಹಾಯ ಮಾಡುವುದು ಸಾಮಾನ್ಯ. ಸ್ನೇಹಿತರಿಗೆ ಸಾಲ ನೀಡುವಾಗ ಇವತ್ತಲ್ಲ ನಾಳೆ ಆ ಹಣ ವಾಪಸ್ ಬಂದೇ ಬರುತ್ತದೆ ಎನ್ನುವ ನಂಬಿಕೆ ಇರುತ್ತದೆ. ಈಗ ಸ್ನೇಹಿತನಿಗೆ ಕಷ್ಟವಿದೆ, ಎಲ್ಲಾ ಸರಿ ಹೋದ ಮೇಲೆ ಹಣ ವಾಪಸ್ ನೀಡುತ್ತಾರೆ ಎನ್ನುವ ನಂಬಿಕೆಯ ಮೇಲೆಯೇ ವಹಿವಾಟು ನಡೆದಿರುತ್ತದೆ. ಆದರೆ, ನಮಗೆ ಅಗತ್ಯವಿರುವಾಗ ಆ ಹಣ ವಾಪಸ್ ಬಾರದೇ ಹೋದಾಗ ಮತ್ತು ಸಂಬಂಧಪಟ್ಟ ವ್ಯಕ್ತಿ ಹಣ ನೀಡಲು ನಿರಾಕರಿಸಿದಾಗ ಆಗುವ ಸಂಕಟವನ್ನು ವಿವರಿಸಿ ಹೇಳುವುದಕ್ಕೂ ಸಾಧ್ಯವಾಗುವುದಿಲ್ಲ.
ಇಂಥದ್ದೇ ಒಂದು ಸವಾಲಿನ ಸನ್ನಿವೇಶವನ್ನು ಬೆಂಗಳೂರಿನ ವಕೀಲೆಯೊಬ್ಬರು ಎದುರಿಸಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಸ್ನೇಹಿತನ ಕಷ್ಟಕ್ಕೆ ಸಹಾಯವಾದ ತನಗೆ ಈಗ ಯಾವ ಸ್ಥಿತಿ ಎದುರಾಗಿದೆ ಎನ್ನುವುದನ್ನು ವಿವರಿಸಿದ್ದಾರೆ.

ವಕೀಲೆ ಜೋಷಿಬಾ ದೇವ್ ಅವರಿಂದ ಸ್ನೇಹಿತರೊಬ್ಬರು 5 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಅವರಿಗೆ ಹಣದ ಅವಶ್ಯಕತೆಯಿದ್ದಾಗ ಜೋಷಿಬಾ ಸಹಾಯ ಮಾಡಿದ್ದಾರೆ. ಆದರೆ ಈಗ ತನ್ನ ಹಣವನ್ನು ವಾಪಸ್ ನೀಡುವಂತೆ ಕೇಳಿದರೆ ಆ ವ್ಯಕ್ತಿ ತೀರಾ ಅಸಭ್ಯವಾಗಿ ವರ್ತಿಸಿ, ಬೇಕಿದ್ದರೆ ಕೋರ್ಟ್ಗೆ ಹೋಗಿ ದೂರು ಕೊಡಿ, ನಾನು ಹಣ ಕೊಡುವುದಿಲ್ಲ ಎಂದು ಸವಾಲು ಹಾಕಿದ್ದಾನೆ. ಆದರೆ ಕಾನೂನು ಹೋರಾಟದ ಬದಲು ಆ ವಿಚಾರವನ್ನು ಅಲ್ಲಿಗೇ ಬಿಟ್ಟುಬಿಡುವ ನಿರ್ಧಾರವನ್ನು ಜೋಷಿಬಾ ತೆಗೆದುಕೊಂಡಿದ್ದಾರೆ. ಇವರ ಈ ನಿರ್ಧಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.
ಕೋರ್ಟ್ಗೆ ಹೋಗದಿರಲು ವಕೀಲೆ ನೀಡುವ ಕಾರಣ:
ತಾವೇ ವಕೀಲರಾಗಿದ್ದರೂ ಈ ಪ್ರಕರಣದಲ್ಲಿ ಕಾನೂನು ಕ್ರಮ ಜರುಗಿಸದಿರಲು ಜೋಷಿಬಾ ಪ್ರಮುಖ ಕಾರಣಗಳನ್ನು ನೀಡಿದ್ದಾರೆ:
ಸುದೀರ್ಘ ಕಾಲಾವಧಿ: ನ್ಯಾಯಾಲಯದ ಪ್ರಕ್ರಿಯೆಗಳು ವರ್ಷಗಟ್ಟಲೆ ನಡೆಯುತ್ತವೆ. ಮೂರು ವರ್ಷಗಳ ನಂತರ ತೀರ್ಪು ತಮ್ಮ ಪರವಾಗಿ ಬಂದರೂ, ಅಷ್ಟರಲ್ಲಿ ಆ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ ಸುಧಾರಿಸದಿದ್ದರೆ ಅಥವಾ ಆತ ದಿವಾಳಿಯಾದರೆ ಆಗ ತಾನು ಏನು ಮಾಡುವುದು ಎಂಬ ಪ್ರಶ್ನೆ ಅವರ ಮುಂದಿತ್ತು.
ಹಣ ವಸೂಲಾತಿ ಕಷ್ಟ: ಕೋರ್ಟ್ ಆದೇಶ ನೀಡಿದರೂ ಎದುರಾಳಿ ಬಳಿ ಹಣವೇ ಇಲ್ಲದಿದ್ದರೆ ಬಲವಂತವಾಗಿ ಹಣ ವಸೂಲಿ ಮಾಡುವುದು ಕೂಡಾ ಅಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಾಕ್ಷ್ಯಾಧಾರಗಳ ಕೊರತೆ: ಆ ವ್ಯಕ್ತಿಯ ಆಸ್ತಿಪಾಸ್ತಿಗಳ ಮಾಹಿತಿ ಕಲೆ ಹಾಕುವುದು ಮತ್ತು ಆತ ಹಣ ಮರಳಿಸುವ ಶಕ್ತಿ ಹೊಂದಿದ್ದಾನೆ ಎಂಬುದನ್ನು ಸಾಬೀತುಪಡಿಸುವುದು ತೀರಾ ಕಷ್ಟಕರ ಕೆಲಸ ಎನ್ನುವುದನ್ನು ಜೋಷಿಬಾ ಅರಿತುಕೊಂಡಿದ್ದಾರೆ.
ವೆಚ್ಚ ಮತ್ತು ಸಮಯ: 5 ಲಕ್ಷ ರೂ. ವಸೂಲಿಗಾಗಿ ಕಾನೂನು ಹೋರಾಟದ ಹೆಸರಿನಲ್ಲಿ ಮತ್ತೆ ಸಾಕಷ್ಟು ಹಣ ಮತ್ತು ಸಮಯ ವ್ಯಯ ಮಾಡುವುದಕ್ಕಿಂತ, ಈ ಘಟನೆಯನ್ನು ಒಂದು ಪಾಠವೆಂದು ಪರಿಗಣಿಸಿ ಮುಂದೆ ಎಚ್ಚರಿಕೆಯಿಂದ ಇರುವುದೇ ಲೇಸು ಎಂದು ಅವರು ನಿರ್ಧರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ :
ತಮ್ಮ ಈ ನಿರ್ಧಾರವನ್ನು ಇನ್ಸ್ಟಾಗ್ರಾಮ್ ವಿಡಿಯೋ ಮೂಲಕ ಹಂಚಿಕೊಂಡಿರುವ ಜೋಷಿಬಾ, "ದೇಶದಲ್ಲಿ ಸುಮಾರು 49 ಮಿಲಿಯನ್ ಪ್ರಕರಣಗಳು ಕೋರ್ಟ್ನಲ್ಲಿ ಬಾಕಿ ಇವೆ. ಇಂತಹ ಸನ್ನಿವೇಶದಲ್ಲಿ ಈ ಮೊತ್ತಕ್ಕಾಗಿ ಹೋರಾಡುವುದು ಸೂಕ್ತವಲ್ಲ" ಎಂದು ಹೇಳಿದ್ದಾರೆ. ಅಲ್ಲದೆ ೧೦ ಲಕ್ಷವಾಗಿದ್ದರೆ ಕೇಸ್ ಹಾಕಿದಾಗ ೫ ಲಕ್ಷವದರೂ ಸಿಗುತ್ತಿತ್ತು. ಈಗ ಬರೀ ೨.೫ ಲಕ್ಷ ವಾಪಸ್ ಬರಬಹುದು. ಕರ್ಮ ಹೇಗೆ ಕೆಲಸ ಮಾಡುತ್ತದೆಯೋ ಗೊತ್ತಿಲ್ಲ, ಆದರೆ ನಾನು ಎಲ್ಲವನ್ನೂ ಅದರ ಮೇಲೆ ಬಿಡುತ್ತೇನೆ ಎಂದು ಹೇಳಿದ್ದಾರೆ.
ಈ ವಿಡಿಯೋಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಜೋಷಿಬಾ ಅವರ ತಾಳ್ಮೆಯನ್ನು ಮೆಚ್ಚಿದರೆ, ಇನ್ನು ಕೆಲವರು ಹಣ ವಂಚಿಸಿದವರನ್ನು ಸುಮ್ಮನೆ ಬಿಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಾವು ಕಳೆದುಕೊಳ್ಳಲು ಸಿದ್ಧವಿರುವಷ್ಟು ಹಣವನ್ನು ಮಾತ್ರ ಸಾಲವಾಗಿ ನೀಡಬೇಕು" ಎಂಬ ಕಿವಿಮಾತನ್ನು ಹಲವರು ಹಂಚಿಕೊಂಡಿದ್ದಾರೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications