ಬಿಜೆಪಿ ಸೋಲಿಸಲು ನಾವೆಲ್ಲ ಒಂದಾಗಿದ್ದೇವೆ: ರಾಹುಲ್ ಗಾಂಧಿ
ನವದೆಹಲಿ, ಸೆಪ್ಟೆಂಬರ್ 10: "ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಲು ನಾವೆಲ್ಲ ಒಂದಾಗಿದ್ದೇವೆ" ಎಂದು ಮಹಾಮೈತ್ರಿಯ ಸೂಚನೆಯನ್ನು ಮತ್ತೊಮ್ಮೆ ನೀಡಿದ್ದಾರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ.
ಭಾರತ್ ಬಂದ್ ಪ್ರತಿಭಟನೆಯ ವೇಳೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ತೈಲ ಬೆಲೆ ಏರಿಕೆ ಖಂಡಿಸಿ ಮಾತ್ರವಲ್ಲದೆ, ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಪತನ ಕಾಣುತ್ತಿರುವುದು ಮತ್ತು ರಫೆಲ್ ಡೀಲ್ ಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ(ಜೆಪಿಸಿ) ರಚಿಸಲು ಒತ್ತಾಯಿಸಿ ಬಂದ್ ಆಚರಿಸಲಾಗುತ್ತಿದೆ.
ಇಂದು ರಾಹುಲ್ ಗಾಂಧಿ ಮಾಡಿದ ಭಾಷಣದ ಮುಖ್ಯಾಂಶಗಳು ಇಲ್ಲಿವೆ.
| Array |
ನಿಮ್ಮ ದುಃಖ ಮೋದೀಜಿಗೆ ಗೊತ್ತಿಲ್ಲ!
'ಈ ದೇಶದ ಜನತೆಯ ಮನಸ್ಸಿನಲ್ಲಿರುವ ದುಃಖ ನಮ್ಮ ಹೃದಯದಲ್ಲೂ ಇದೆ. ಆದರೆ ಆ ದುಃಖ ಈ ದೇಶದ ಪ್ರಧಾನಿ ಮೋದಿಯವರಿಗೆ ಮತ್ತು ಬಿಜೆಪಿಯವರಿಗೆ ಗೊತ್ತಿಲ್ಲ. ಭಾರತದ ಯುವಕರಿಗೆ ಗೊತ್ತಿರಲಿ, ಮೋದಿ ತಮ್ಮ ಸ್ನೇಹಿತನಿಗೆ ನೀಡಿದ 45,000 ಕೋಟಿ ರೂ.ಹಣ ಅವರದಲ್ಲ. ಈ ದೇಶದ ಯುವಕರು ಮತ್ತು ರೈತರದು'- ರಾಹುಲ್ ಗಾಂಧಿ

ಉದ್ಯಮಿಗಳಿಗೆ ಉಡುಗೊರೆ ನೀಡೋಕೆ ಹಣವಿದೆ: ರಾಹುಲ್
"ಈ ದೇಶದಲ್ಲಿ ರೈತರ ಸಾಲಮನ್ನಾ ಸಾಧ್ಯವಿಲ್ಲ. ಆದರೆ ಉದ್ಯಮಿಗಳಿಗೆ 45,000 ಕೋಟಿ ರೂ. ಉಡುಗೊರೆ ನೀಡುವುದಕ್ಕೆ ಸರ್ಕಾರದ ಬಳಿ ಹಣವಿದೆ! ನರೇಂದ್ರ ಮೋದಿಯವರು ಇಡೀ ದೇಶದ ಸುತ್ತ ಸುತ್ತುತ್ತಾರೆ. ಆದರೆ ಒಂದು ಕಡೆಯೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬಗ್ಗೆ ಮಾತನಾಡುತ್ತಿಲ್ಲ"- ರಾಹುಲ್ ಗಾಂಧಿ

ಮೋದಿ ನೀಡಿದ್ದೆಲ್ಲ ಸುಳ್ಳು ಭರವಸೆಗಳು
ಪ್ರಧಾನಿ ಮೋದಿಯವರು, '70 ವರ್ಷಗಳ ಕಾಲ ಈ ದೇಶದಲ್ಲಿ ಆಗದೆ ಇದ್ದಿದ್ದನ್ನು ನಾವು ನಾಲ್ಕು ವರ್ಷಗಳಲ್ಲಿ ಮಾಡಿದ್ದೇವೆ ಎನ್ನುತ್ತಾರೆ. ಆದರೆ ನಾಲ್ಕು ವರ್ಷಗಳಲ್ಲಿ ಏನಾಗಿದೆ ಎಂಬುದು ಜನರಿಗೆ ಗೊತ್ತಿದೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಭಾರತೀಯ ರೂಪಾಯಿ ಡಾಲರ್ ಎದುರು ಸಾರ್ವಕಾಲಿಕ ಪತನ ಕಂಡಿದೆ.'- ರಾಹುಲ್ ಗಾಂಧಿ

ಮಹಾಮೈತ್ರಿ ಸೂಚನೆ?
'ನಾವೆಲ್ಲರೂ ಒಂದಾಗಿದ್ದೇವೆ. ಎಲ್ಲಾ ವಿಪಕ್ಷಗಳೂ ಒಂದಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುತ್ತೇವೆ. ಈ ದೇಶದ ಜನರ ಹೃದಯದಲ್ಲೇನಿದೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ.ಇಂದು ಬಂದ್ ಗೆ ನಮ್ಮೊಂದಿಗೆ ಬೆಂಬಲ ನೀಡುತ್ತಿರುವ ಎಲ್ಲಾ ಪಕ್ಷಗಳೂ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಒಗ್ಗಟ್ಟಿನಿಂದ ಹೋರಾಡುತ್ತೇವೆ'- ರಾಹುಲ್ ಗಾಂಧಿ












Click it and Unblock the Notifications