KEA: ಮೇ 25ರಿಂದ 30ರವರೆಗೆ ಕಾಲೇಜುಗಳಲ್ಲಿ CET ಸೀಟು ಹಂಚಿಕೆ ತರಬೇತಿ ಕಾರ್ಯಾಗಾರ
ಬೆಂಗಳೂರು: ರಾಜ್ಯದಲ್ಲಿ ವೃತ್ತಿಪರ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆ ಸಂಬಂಧ ಜಾಗೃತಿ ಮೂಡಿಸುವ 2026ನೇ ಸಾಲಿನ 'ಸಿಇಟಿ ಸೀಟು ಹಂಚಿಕೆ ಮಂಥನ' ತರಬೇತಿ ಕಾರ್ಯಾಗಾರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಚೇರಿಯಲ್ಲಿ ನಡೆಯಿತು. ಇದೆ ಕಾರ್ಯಾಗಾರವನ್ನು ಮೇ 25 ರಿಂದ 30ರವವರೆಗೆ ವಿವಿಧ ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ.
ಮಂಗಳವಾರ ನಡೆದ ಸರ್ಕಾರಿ ಮತ್ತು ಅನುದಾನಿತ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜು ಪ್ರತಿನಿಧಿಗಳಿಗೆ ಆಯೋಜಿಸಿದ್ದ 'ಸೀಟು ಹಂಚಿಕೆ ಮಂಥನ ತರಬೇತಿ' ಕಾರ್ಯಾಗಾರವನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಮೊಹಮ್ಮದ್ ಅವರು, ಮಂಥನಕ್ಕೆ ಬರುವ ವಿದ್ಯಾರ್ಥಿಗಳು/ಪೋಷಕರಿಗೆ ಕಾಲೇಜುಗಳಲ್ಲಿನ ಶೈಕ್ಷಣಿಕ ವಾತಾವರಣ ತೋರಿಸುವ ಕೆಲಸವೂ ಆಗಬೇಕು. ಕಾಲೇಜುಗಳಲ್ಲಿನ ಪ್ರಯೋಗಾಲಯ, ಗ್ರಂಥಾಲಯ, ಹಾಸ್ಟೆಲ್, ಕ್ಯಾಂಟೀನ್ ಮುಂತಾದವುಗಳನ್ನು 'ಓಪನ್ ಡೇ' ಘೋಷಿಸುವ ಮೂಲಕ ತೋರಿಸಬೇಕು. ಇದರಿಂದ ಪ್ರವೇಶ ಪಡೆದ ನಂತರ ಅದಿಲ್ಲ-ಇದಿಲ್ಲ ಎಂದು ದೂರುವುದು ತಪ್ಪುತ್ತದೆ. ಹಾಗೆಯೇ ಕಾಲೇಜುಗಳು ಇದೊಂದು ಅವಕಾಶವೆಂದು ತಿಳಿದು ಅದರ ಲಾಭ ಪಡೆಯಬೇಕು ಎಂದೂ ಅವರು ಸಲಹೆ ನೀಡಿದರು.
5 ದಿನ ಈ ಕಾಲೇಜುಗಳಲ್ಲಿ ಕಾರ್ಯಾಗಾರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಮಾತನಾಡಿ, ಸೀಟು ಹಂಚಿಕೆ ಮಂಥನ ಕಾರ್ಯಕ್ರಮವನ್ನು ಮೇ 25ರಿಂದ 30ರವರೆಗೆ ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ನಡೆಸಲಾಗುವುದು ಎಂದು ಘೋಷಿಸಿದರು.
ಪ್ರತಿ ಕಾಲೇಜಿಗೆ 3-4 ಉಪನ್ಯಾಸಕರಿಗೆ ತರಬೇತಿ
ಕೆಇಎ ಕಚೇರಿಯಲ್ಲಿ ನಡೆದ ಇಂದಿನ ಕಾರ್ಯಾಗಾರದಲ್ಲಿ ಪ್ರತಿ ಕಾಲೇಜಿನಿಂದಲೂ ಮೂರು- ನಾಲ್ಕು ಮಂದಿ ಉಪನ್ಯಾಸಕರನ್ನು ಆಹ್ವಾನಿಸಲಾಗಿತ್ತು. ಸೀಟು ಹಂಚಿಕೆ ಬಗ್ಗೆ ಇಡೀ ದಿನ ತರಬೇತಿ ನೀಡಲಾಯಿತು. 170ಕ್ಕೂ ಹೆಚ್ಚು ಉಪನ್ಯಾಸಕರು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ತರಬೇತಿ ಪಡೆದ ಈ ಉಪನ್ಯಾಸಕರು, ತಮ್ಮ ಕಾಲೇಜುಗಳಲ್ಲಿ ನಡೆಯುವ ಸೀಟು ಹಂಚಿಕೆ ಮಂಥನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು/ಪೋಷಕರಿಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಿದ್ದಾರೆ. ಕಳೆದ ಬಾರಿ ಕೇವಲ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ನಡೆದ ಈ ಮಂಥನ ಕಾರ್ಯಾಗಾರ ಈ ವರ್ಷ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿಯೂ ನಡೆಯಲಿದೆ ಎಂದು ಪ್ರಸನ್ನ ವಿವರಿಸಿದರು.
ಜಾಗೃತಿ ಕಾರ್ಯಕ್ರಮದ ಉದ್ದೇಶವೇನು?
ಮುಂಗಡವಾಗಿ ದಿನಾಂಕ ಮತ್ತು ಸಮಯ ಕಾಯ್ದಿರಿಸಿಕೊಂಡು ಬರುವ ಹಾಗೆ ಕೆಇಎ ವತಿಯಿಂದಲೇ ಆ್ಯಪ್ ಬಿಡುಗಡೆ ಮಾಡಲಾಗುವುದು. ಕೊನೆ ಕ್ಷಣದ ಗೊಂದಲಗಳಿಗೆ ತೆರೆ ಬೀಳಲಿದೆ. ಸ್ಲಾಟ್ ಬುಕ್ ಮಾಡಿಕೊಂಡು ಬಂದವರಿಗೆ ಕಾಲೇಜುಗಳಲ್ಲಿ ತರಬೇತಿ ನೀಡಲಾಗುವುದು. ಆಪ್ಷನ್ಸ್ ದಾಖಲು, ಸೀಟು ಹಂಚಿಕೆ, ಚಾಯ್ಸ್ ದಾಖಲು, ಶುಲ್ಕ ಪಾವತಿ ಹಾಗೂ ಪ್ರವೇಶದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈ ಹಂತಗಳ ಮಾಹಿತಿ ಇಲ್ಲದೆ ಅನೇಕರು ತೊಂದರೆಗೆ ಒಳಗಾಗುತ್ತಿದ್ದು, ಅದನ್ನು ತಪ್ಪಿಸುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಕಾರ್ಯಕ್ರಮದ ರೂಪುರೇಷೆ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳು/ಪೋಷಕರಿಗೆ ಮನದಟ್ಟಾಗುವ ಹಾಗೆ ವಿವರಿಸುವ ದೊಡ್ಡ ಜವಾಬ್ದಾರಿ ಇದೆ ಎಂದು ಉಪನ್ಯಾಸಕರನ್ನು ಉದ್ದೇಶಿಸಿ ಹೇಳಿದರು.
ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಗೋಷ್ಠಿಗಳ ಮೂಲಕ ಆಹ್ವಾನಿತರಿಗೆ ತರಬೇತಿ ನೀಡಲಾಯಿತು.
ಕಲಬುರಗಿ ಇಎಸ್ಐ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜು, ಶಿವಮೊಗ್ಗ ಮತ್ತು ಗದಗ ಸರ್ಕಾರಿ ಮೆಡಿಕಲ್ ಕಾಲೇಜು, ಕಲಬುರಗಿ ವಿಟಿಯು ಎಂಜಿನಿಯರಿಂಗ್ ಕಾಲೇಜು ಹೊರತುಪಡಿಸಿ ಎಲ್ಲ ಕಾಲೇಜುಗಳ ಸಿಬ್ಬಂದಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.














Click it and Unblock the Notifications