ಸುನಂದಾಗೆ ಇಂಜೆಕ್ಷನ್ ಚುಚ್ಚಿದ್ದು ಪರಿಚಿತರು : ಪೊಲೀಸ್
ಸುನಂದಾ ಪುಷ್ಕರ್ ಹತ್ಯೆ ಪ್ರಕರಣ ಕುರಿತು ಪೊಲೀಸರಿಗೆ ಇನ್ನೂ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ, ಒಂದಂತೂ ಸ್ಪಷ್ಟ. ಯಾರೋ ಪರಿಚಿತರೇ ಸುನಂದಾಗೆ ವಿಷ ಭರಿತ ಇಂಜೆಕ್ಷನ್ ಚುಚ್ಚಿದ್ದಾರೆ ಎಂದು ನವದೆಹಲಿ ಪೊಲೀಸ್ ಅಧಿಕಾರಿಯೋರ್ವರು ಅಭಿಪ್ರಾಯಪಟ್ಟಿದ್ದಾರೆ.
"ಇದೊಂದು ಕೊಲೆ ಎಂಬುದು ಸ್ಪಷ್ಟ. ಆದರೆ, ಇದರ ಹಿಂದಿನ ಉದ್ದೇಶವೇನು ಎಂಬುದು ಮಾತ್ರ ಗೊತ್ತಾಗುತ್ತಿಲ್ಲ" ಎಂದು ಹೇಳಿದ್ದಾರೆ.
ಸುನಂದಾ ದೇಹದಲ್ಲಿ ಸಿಕ್ಕಿದ್ದು ಎಂತಹ ವಿಷ ಎಂಬುದನ್ನು ಅರಿಯಲು ಫೋರೆನ್ಸಿಕ್ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ವಿದೇಶಕ್ಕೆ ಕಳುಹಿಸಲಾಗಿದೆ. ಈ ವರದಿ ಬರಲು ಹಲವು ದಿನಗಳೇ ಹಿಡಿಯಬಹುದು ಎಂದು ಹೇಳಿದರು.
ಸುನಂದಾ ಅವರು ಹಲವು ದಿನಗಳಿಂದ ಬೇಸರದಿಂದಿದ್ದರು ಎಂಬುದಷ್ಟೇ ನಮಗೆ ಇಲ್ಲಿಯವರೆಗಿನ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. [ತರೂರ್ ಮತ್ತು ತರಾರ್ ದುಬೈನಲ್ಲಿ 3 ರಾತ್ರಿ ಕಳೆದರೇ?]

ಇಂಜೆಕ್ಷನ್ ಚುಚ್ಚಿದ್ದು ಯಾರು? : ಸುನಂದಾ ಅವರ ದೇಹದ ಮೇಲೆ 15 ಗಾಯದ ಗುರುತುಗಳು ಕಂಡುಬಂದಿವೆ. ಅವುಗಳಲ್ಲಿ ಕೆಲವು ಹೋರಾಟದಿಂದ ಉಂಟಾಗಿರುವಂತಹುದು. ಅವು ತಾವೇ ಮಾಡಿಕೊಂಡಿದ್ದೋ ಅಥವಾ ಬೇರೆಯವರು ಮಾಡಿದ್ದೋ ಎಂಬುದನ್ನು ಅರಿಯಬೇಕಾಗಿದೆ. [ದಾಂಪತ್ಯದಲ್ಲಿ ಕಲಹ ತಂದ ಕೇಟಿ ಯಾರು?]
ಏನೇ ಆದರೂ ಅವರಿಗೆ ಇಂಜೆಕ್ಷನ್ ಚುಚ್ಚಿದ್ದು ಪರಿಚಿತರು. ಇಂಜೆಕ್ಷನ್ ನೀಡಿದ ರೀತಿಯನ್ನು ಗಮನಿಸಿದರೆ ಆ ವ್ಯಕ್ತಿ ಪರಿಚಿತನೇ ಎಂಬುದು ತಿಳಿಯುತ್ತದೆ. ಇಂಜೆಕ್ಷನ್ ಚುಚ್ಚುವಾಗ ಸುನಂದಾ ಪ್ರತಿರೋಧ ತೋರಿರಲಿಲ್ಲ. ಇದನ್ನು ಗಾಯ ಸಂಖ್ಯೆ 10 ಎಂದು ಗುರುತಿಸಲಾಗಿದೆ.
ನಾವು ಸಿಸಿಟಿವಿ ವಿವರ ಪರಿಶೀಲಿಸುತ್ತಿದ್ದೇವೆ. ಅವರ ಕೋಣೆಗೆ ಭೇಟಿ ನೀಡಿದ ಪ್ರತಿಯೊಬ್ಬರನ್ನೂ ವಿಚಾರಣೆಗೆ ಗುರಿಪಡಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. [ಸುನಂದಾ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ ತರೂರ್ ಪತ್ರ]
ಶೀಘ್ರ ಶಶಿ ತರೂರ್ ವಿಚಾರಣೆ : ಶಶಿ ತರೂರ್ ಅವರನ್ನು ವಿಚಾರಣೆಗೊಳಪಡಿಸಲು ನಿಧಾನಿಸುತ್ತಿಲ್ಲ. ಅವರನ್ನು ಪ್ರಶ್ನೆಗೊಳಪಡಿಸುವ ಮೊದಲು ಎಲ್ಲ ವಿವರಗಳೂ ಕೈಯಲ್ಲಿರಬೇಕು ಎಂದು ತಿಳಿಸಿದರು.
ದಂಪತಿ ನಡುವಿನ ಸಂಬಂಧ ಹಾಗೂ ಮೆಹರ್ ತರಾರ್ ಜೊತೆಗಿನ ವಿವಾದವನ್ನೂ ಪ್ರಶ್ನಿಸುತ್ತೇವೆ. ಮೆಹರ್ ಮತ್ತು ತರೂರ್ ಮದುವೆಯಾಗುವ ಯೋಚನೆ ಹೊಂದಿದ್ದರು ಎನ್ನಲಾಗಿದೆ. ಇದನ್ನೂ ನಾವು ಸ್ಪಷ್ಟಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. [ಸುನಂದಾ ಕೊಲೆಯಾಗಿದೆ : ದೆಹಲಿ ಪೊಲೀಸ್]
ತರೂರ್ ಅವರು ವೈದ್ಯಕೀಯ ವರದಿ ತಿರುಚಲು ಯತ್ನಿಸಿದ್ದರೇ ಹಾಗೂ ಐಪಿಎಲ್ ಪಾತ್ರವಿದೆಯೇ ಎಂದೂ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications