ರೈತರ ಕೂಗು ಕೇಳಿಸುತ್ತಿಲ್ಲ, ಬಿಜೆಪಿಯು ಪ್ರತಿಭಟನೆ ಹತ್ತಿಕ್ಕಲು ಜಲ ಫಿರಂಗಿ ಬಳಸುತ್ತಿದೆ: ಪ್ರಿಯಾಂಕಾ
ನವದೆಹಲಿ,ನವೆಂಬರ್ 26: ಬಿಜೆಪಿಗೆ ರೈತರ ಕೂಗು ಆಲಿಸುವಷ್ಟು ತಾಳ್ಮೆ ಇಲ್ಲ, ಬದಲಾಗಿ ಪ್ರತಿಭಟನೆಯನ್ನು ಹತ್ತಿಕ್ಕಲು ಜಲ ಫಿರಂಗಿಯನ್ನು ಬಳಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂತನ ಮಸೂದೆ ವಿರುದ್ಧ ಪ್ರತಿಭಟನೆಗೆ ಇಳಿದಿರುವ ರೈತರ ಧ್ವನಿ ಕೇಳುವ ಬದಲು ಬಿಜೆಪಿ ಸರ್ಕಾರ ಅವರ ವಿರುದ್ಧ ಜಲಫಿರಂಗಿ ಬಳಕೆ ಮಾಡುತ್ತಿದ್ದಾರೆ. ಬಂಡವಾಳಶಾಹಿಗಳಿಗೆ ಬ್ಯಾಂಕುಗಳು, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳು ಮತ್ತು ಸಾಲ ಮನ್ನಾ ಮಾಡಲಾಗುತ್ತಿದ್ದು, ರೈತರಿನಿಂದ ಎಲ್ಲವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿ ಚಲೋ ಚಳವಳಿ ಭಾಗವಾಗಿ ಪಂಜಾಬ್ ರೈತರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ವೇಳೆ ಪೊಲೀಸ್ ಬ್ಯಾರಿಕೇಡ್ ಮುರಿದು ಹರ್ಯಾಣ ರಾಜ್ಯ ಪ್ರವೇಶಿಸಲು ಮುಂದಾದ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಹಾಗೂ ಜಲ ಫಿರಂಗಿಗಳನ್ನು ಬಳಕೆ ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರವಿರುವ ಪಂಜಾಬ್ನಿಂದ ಸಾವಿರಾರು ರೈತರು ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿದ್ದು, ಅವರನ್ನು ಬಿಜೆಪಿ ಆಡಳಿತವಿರುವ ಹರಿಯಾಣದ ಗಡಿ ಒಳಗೆ ಪ್ರವೇಶಿಸದಂತೆ ತಡೆಯಲಾಗುತ್ತಿದೆ. ತಾವು ರಾಜಧಾನಿ ದೆಹಲಿಗೆ ಹೋಗುವುದನ್ನು ತಡೆಯಲಾಗದು ಎಂದಿರುವ ರೈತರು, ಹರಿಯಾಣ ಪ್ರವೇಶಿಸುವುದರಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ.
ರೈತರನ್ನು ತಡೆಯಲು ಹರಿಯಾಣ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿದರು. ಇದರಿಂದ ರೈತರನ್ನು ಕೊಂಚ ಮಟ್ಟಿಗೆ ತಡೆಯಲು ಸಾಧ್ಯವಾಯಿತಾದರೂ, ಮತ್ತಷ್ಟು ಸಂಖ್ಯೆಯಲ್ಲಿ ಮುನ್ನುಗ್ಗಿದ ರೈತರು, ಹರಿಯಾಣದ ಹೊರಭಾಗದಲ್ಲಿನ ಸೇತುವೆ ಬಳಿ ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿದರು. ಪೊಲೀಸರ ಅಶ್ರುವಾಯು ಪ್ರಯೋಗಕ್ಕೆ ಪ್ರತಿಯಾಗಿ, ಕಲ್ಲು ಮತ್ತು ಇಟ್ಟಿಗೆಗಳನ್ನು ತೂರಿದರು.












Click it and Unblock the Notifications