ಉನ್ನಾವೋ ಪ್ರಕರಣ: ಬಿಜೆಪಿಯೆಡೆಗೆ ಪ್ರಿಯಾಂಕಾ ವ್ಯಂಗ್ಯದ ಬಾಣ
ನವದೆಹಲಿ, ಆಗಸ್ಟ್ 01: ಉತ್ತರ ಪ್ರದೇಶದ ಉನ್ನಾವೋ ಪ್ರಕರಣವನ್ನು ಸುಪ್ರೀಂ ಕೋರ್ಟ್ ದೆಹಲಿ ಹೈಕೋರ್ಟ್ ಗೆ ವರ್ಗಾಯಿಸಿರುವುದನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ವಾಗತಿಸಿದ್ದಾರೆ.
ದೇಶದೆಲ್ಲೆಡೆ ಕುತೂಹಲ ಕೆರಳಿಸಿದ್ದ ಉನ್ನಾವೋ ಪ್ರಕರಣ ಕುರಿತಂತೆ ಇಂದು ಮಹತ್ವದ ಆದೇಶ ನೀಡಿದ ಸುಪ್ರೀಂ ಕೋರ್ಟ್, ಸಂತ್ರಸ್ತೆಗೆ 25 ಲಕ್ಷ ರೂ. ಪರಿಹಾರ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಮಾತ್ರವಲ್ಲ, ಸಂತ್ರಸ್ತೆಗೆ ಮತ್ತು ಆಕೆಯ ಕುಟುಂಬಸ್ತರಿಗೆ ರಕ್ಷಣೆ ನೀಡುವಂತೆಯೂ ಅದು ತನ್ನ ಆದೇಶದಲ್ಲಿ ತಿಳಿಸಿದೆ.
ಅಷ್ಟೇ ಅಲ್ಲದೆ, ಈ ಪ್ರಕರಣದ ವಿಚಾರಣೆಯನ್ನು ಉತ್ತರ ಪ್ರದೇಶದ ಹೊರಗೆ ನಡೆಸಬೇಕು ಎಂದಿರುವ ಪರಮೋಚ್ಚ ನ್ಯಾಯಾಲಯ, ಪ್ರಕರಣವನ್ನು ದೆಹಲಿ ಹೈಕೋರ್ಟ್ ವರ್ಗಾಯಿಸಿ, ಅದರ ವಿಚಾರಣೆಯನ್ನು 45 ದಿನಗಳೊಳಗೆ ಪೂರ್ಣಗೊಳಿಸುವಂತೆ ಹೇಳಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಪ್ರಿಯಾಂಕಾ ಗಾಂಧಿ, "ನ್ಯಾಯಾಲಯದ ಆದೇಶ ಸಮಾಧಾನ ತಂದಿದೆ. ಉತ್ತರ ಪ್ರದೇಶದ ಜಂಗಲ್ ರಾಜ್ ಆಡಳಿತಕ್ಕೆ ನ್ಯಾಯಾಲಯದ ಆದೇಶದಿಂದ ಕಡಿವಾಣ ಬಿದ್ದಿದೆ" ಎಂದರು.
"ಬಿಜೆಪಿಗೆ ತಾನು ಒಬ್ಬ ಅತ್ಯಾಚಾರ ಆರೋಪಿಯನ್ನು ಸಾಕಿಟ್ತುಕೊಂಡದಿದ್ದೇನೆ ಎಂಬುದು ಕೊನೆಗೂ ಅರ್ಥವಾಗಿ, ಆತನನ್ನು ಉಚ್ಛಾಟನೆ ಮಾಡುವ ಕೆಲಸಕ್ಕೆ ಕಗಅಯಹಾಕಿದೆ. ಅದಕ್ಕೆ ತನ್ನ ತಪ್ಪು ಕೊನೆಗೂ ಅರಿವಾಯಿತಲ್ಲ, ಅದೇ ಸಂತೋಷ" ಎಂದು ಪ್ರಿಯಾಂಕಾ ಗಾಂಧಿಬಿಜೆಪಿಯೆಡೆಗೆ ವ್ಯಂಗ್ಯದ ಬಾಣ ಎಸೆದರು.
2017 ರ ಜೂನ್ 4 ರಂದು ಉತ್ತರ ಪ್ರದೇಶದ ಉನ್ನಾವೋ ದಲ್ಲಿ ಇಲ್ಲಿನ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆನ್ಗಾರ್, ತನ್ನ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯ ಮಗಳ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಸ್ವತಃ ಸಂತ್ರಸ್ಥೆ ಆರೋಪಿಸಿದ್ದರು. ಈ ಘಟನೆಯಾಗಿ ಒಂದು ವಾರದ ನಂತರ ಮತ್ತೆ ಮೂವರು ಸೇನ್ಗಾರ್ ಸಹಚರರು ಆಕೆಯನ್ನು ಅಪಹರಿಸಿ, ಸುಮಾರು ಒಂಬತ್ತು ದಿನಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದರು. ಆದರೆ ಮಗಳು ಕಾಣೆಯಾಗಿದ್ದಾಳೆಂದು ಸಂತ್ರಸ್ತೆಯ ತಾಯಿ ದೂರು ನೀಡಿದ್ದರಿಂದ ಆಕೆಯನ್ನು ಮನೆಯ ಬಳಿ ಬಿಟ್ಟು ಹೋಗಿದ್ದರು. ನಂತರ ಸಂತ್ರಸ್ತೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು.ಕುಲದೀಪ್ ಸೇನ್ಗಾರ್ ನನ್ನು ಬಂಧಿಸಲಾಗಿತ್ತು.
ಇತ್ತೀಚೆಗೆ ಸಂತ್ರಸ್ತೆ ಮತ್ತು ಆಕೆಯ ಬಂಧುಗಳು ಅಪಘಾತಕ್ಕೊಳಗಾಗಿದ್ದ ಘಟನೆ ನಡೆದ ನಂತರ ಮತ್ತೊಮ್ಮೆ ಈ ಪ್ರಕರಣ ಬೆಳಕಿಗೆ ಬಂದಿದ್ದು, ಸಂತ್ರಸ್ಥೆಯನ್ನು ಕೊಲ್ಲಲು ಪ್ರಯತ್ನಿಸಲಾಗಿತ್ತು ಎಂದು ದೂರಲಾಗಿತ್ತು. ಜೈಲಿನಲ್ಲಿದ್ದುಕೊಂಡೇ ಸೇನ್ಗಾರ್ ಪ್ರಭಾವ ಬಳಸಿ ಈ ಕೆಲಸ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಿಜೆಪಿ ಅವರನ್ನು ಉಚ್ಛಾಟನೆ ಮಾಡಿದೆ.












Click it and Unblock the Notifications