ಜಮ್ಮು-ಕಾಶ್ಮೀರದಲ್ಲಿ 6 ತಿಂಗಳು ರಾಷ್ಟ್ರಪತಿ ಅಳ್ವಿಕೆ ವಿಸ್ತರಣೆಗೆ ರಾಜ್ಯಸಭೆ ಒಪ್ಪಿಗೆ
ನವದೆಹಲಿ, ಜುಲೈ 1: ಜಮ್ಮು ಮತ್ತು ಕಾಶ್ಮೀರದಲ್ಲಿ ಇನ್ನೂ ಆರು ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆಯನ್ನು ಮುಂದುವರಿಸುವುದಕ್ಕೆ ಸೋಮವಾರ ರಾಜ್ಯಸಭೆಯಲ್ಲಿ ಸೋಮವಾರ ಒಪ್ಪಿಗೆ ಸಿಕ್ಕಿದೆ. ಜುಲೈ ಮೂರನೇ ತಾರೀಕಿನಿಂದಲೇ ಇದು ಅನ್ವಯ ಆಗುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಸಂಬಂಧ ಮಸೂದೆಯನ್ನು ಮಂಡಿಸಿದರು.
ಮೆಹಬೂಬಾ ಮುಫ್ತಿ ಅವರ ಪೀಪಲ್ ಡೆಮಾಕ್ರಟಿಕ್ ಪಾರ್ಟಿಯ ಜತೆಗೆ ಬಿಜೆಪಿ ಮೈತ್ರಿ ಕಡಿದುಕೊಂಡ ಮೇಲೆ, ಕಳೆದ ವರ್ಷ ಜೂನ್ ನಿಂದ ಜಮ್ಮು- ಕಾಶ್ಮೀರದಲ್ಲಿ ಕೇಂದ್ರದ ಆಡಳಿತ ಇದೆ. ರಾಷ್ಟ್ರಪತಿ ಆಡಳಿತವನ್ನು ಮುಂದುವರಿಸಲು ಲೋಕಸಭೆಯಲ್ಲಿ ಶುಕ್ರವಾರ ಒಪ್ಪಿಗೆ ಸಿಕ್ಕಿತ್ತು.
ಕಳೆದ ವರ್ಷದ ಡಿಸೆಂಬರ್ ನಲ್ಲಿ ಜಮ್ಮು-ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಕೊನೆಯಾಗಿತ್ತು. ಸ್ಥಿರ ಸರಕಾರ ರಚನೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ವಿಧಾನಸಭೆ ವಿಸರ್ಜನೆ ಮಾಡಲಾಗಿತ್ತು. ಅಮಿತ್ ಶಾ ಮಾತನಾಡಿ, ಜಮ್ಮು-ಕಾಶ್ಮೀರದಲ್ಲಿ ಎಲ್ಲ ಸ್ಪರ್ಧಿಗಳಿಗೂ ಭದ್ರತೆ ಒದಗಿಸುವುದು ಸವಾಲಿನ ವಿಚಾರವಾಗಿದ್ದರಿಂದ ಲೋಕಸಭೆ ಚುನಾವಣೆ ಜತೆಗೆ ಅಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ ಎಂದರು.

ರಾಷ್ಟ್ರಪತಿ ಆಡಳಿತದ ಮೂಲಕ ಜಮ್ಮು-ಕಾಶ್ಮೀರದಲ್ಲಿ ಆಳ್ವಿಕೆ ನಡೆಸುವ ಉದ್ದೇಶ ಕೇಂದ್ರಕ್ಕೆ ಇಲ್ಲ. ಆದರೆ ಆ ರಾಜ್ಯದ ಸ್ಥಿತಿ ಹಾಗಿದೆ ಎಂದು ಹೇಳಿದರು. ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ತೃಣಮೂಲ್ ಕಾಂಗ್ರೆಸ್, ಸಮಾಜವಾದಿ ಪಕ್ಷವು ಜಮ್ಮು- ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಮುಂದುವರಿಸುವುದನ್ನು ಬೆಂಬಲಿಸಲು ನಿರ್ಧರಿಸಿದವು.
ಗೃಹ ಸಚಿವ ಅಮಿತ್ ಶಾ ಅವರ ಮೇಲೆ ನಮಗೆ ನಂಬಿಕೆ ಇದೆ ಎಂದು ಪಿಡಿಪಿಯ ರಾಜ್ಯ ಸಭಾ ಸದಸ್ಯ ನಜೀರ್ ಅಹ್ಮದ್ ಲಾವೆ ಹೇಳಿದ್ದಾರೆ. ಜುಲೈ ಒಂದರಿಂದ ಆರಂಭವಾಗುವ ಅಮರನಾಥ ಯಾತ್ರೆ ಮುಗಿದ ನಂತರ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಸುವ ಬಗ್ಗೆ ಈಚೆಗೆ ಚುನಾವಣೆ ಆಯೋಗ ಹೇಳಿಕೆ ನೀಡಿದೆ. ಆದ್ದರಿಂದ ಕೇಂದ್ರದಿಂದ ರಾಷ್ಟ್ರಪತಿ ಆಳ್ವಿಕೆ ಹೇರುವುದು ಇದು ಕೊನೆ ಅವಧಿಗೆ ಎನ್ನಲಾಗುತ್ತಿದೆ.
ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ 2019ಕ್ಕೆ ಕೂಡ ಇದೇ ವೇಳೆ ರಾಜ್ಯಸಭೆಯಲ್ಲಿ ಒಪ್ಪಿಗೆ ಸಿಕ್ಕಿತು. ಈ ಮಸೂದೆ ಅನ್ವಯ ಗಡಿ ನಿಯಂತ್ರಣ ರೇಖೆ (ಎಲ್ ಒಸಿ) ಹಾಗೂ ಅಂತರರಾಷ್ಟ್ರೀಯ ಗಡಿಯ ಬಳಿ ವಾಸ ಇರುವವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ 3% ವಿಸ್ತರಿಸಲು ಒಪ್ಪಲಾಗಿದೆ.












Click it and Unblock the Notifications