56 ಮಂದಿ ಗಣ್ಯರಿಗೆ ರಾಷ್ಟ್ರಪತಿ ಕೋವಿಂದ್ ಅವರಿಂದ ಪದ್ಮ ಪ್ರಶಸ್ತಿ ಪ್ರದಾನ
ನವದೆಹಲಿ, ಮಾರ್ಚ್ 11: ಕೇಂದ್ರ ಸರ್ಕಾರ ಕೊಡಮಾಡುವ ಪದ್ಮ ಪ್ರಶಸ್ತಿಗೆ 56 ಮಂದಿ ಭಾಜನರಾಗಿದ್ದಾರೆ. ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ 56 ಮಂದಿಗೆ ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಖ್ಯಾತ ಕೊರಿಯೊಗ್ರಫರ್, ಚಿತ್ರನಟ ಪ್ರಭುದೇವ, ಖ್ಯಾತ ಸಂಗೀತಗಾರ ಶಂಕರ್ ಮಹದೇವನ್, ಅಕಾಲಿ ದಳ ನಾಯಕ ಸುಖದೇವ್ ಸಿಂಗ್ ದಿನ್ಡ್ಸಾ, ಕುಸ್ತಿಪಟು ಬಜ್ ರಂಗ್ ಪುನಿಯಾ, ಭಾಗೀರತಿ ದೇವಿ, ಸಿಸ್ಕೊ ಸಿಸ್ಟಮ್ಸ್ ನ ಮಾಜಿ ಸಿಇಒ ಜಾನ್ ಚೇಂಬರ್ಸ್ ಮೊದಲಾದವರಿಗೆ ರಾಷ್ಟ್ರಪತಿಗಳು ಪದ್ಮ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಗಣರಾಜ್ಯೋತ್ಸವ ಸಮಾರಂಭದ ದಿನ ಪ್ರಶಸ್ತಿಗಳು ಘೋಷಣೆಯಾಗಿದ್ದವು, ಘೋಷಣೆಯಾದ 112 ಮಂದಿಯಲ್ಲಿ 56 ಗಣ್ಯರಿಗೆ ಇಂದು ಪ್ರಶಸ್ತಿ ನೀಡಲಾಗಿದ್ದು ಉಳಿದ 56 ಮಂದಿಗೆ ಇದೇ ತಿಂಗಳ 16ರಂದು ನಡೆಯಲಿರುವ ಸಮಾರಂಭದಲ್ಲಿ ವಿತರಿಸಲಾಗುತ್ತದೆ.

ಖ್ಯಾತ ಪತ್ರಿಕೋದ್ಯಮಿ ಕುಲದೀಪ್ ನಾಯರ್ ಅವರಿಗೆ ಮರಣೋತ್ತರ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.112 ಮಂದಿ ಪದ್ಮ ಪ್ರಶಸ್ತಿ ಗಣ್ಯರಲ್ಲಿ 94 ಗಣ್ಯರಿಗೆ ಪದ್ಮಶ್ರೀ, 14 ಮಂದಿಗೆ ಪದ್ಮಭೂಷಣ ಮತ್ತು ನಾಲ್ವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ. ಅವರಲ್ಲಿ 21 ಮಹಿಳೆಯರು, 11 ಮಂದಿ ವಿದೇಶಿಯರು/ಅನಿವಾಸಿ ಭಾರತೀಯರು/ ಪಿಐಒ/ಒಸಿಐಗಳು ಸೇರಿದ್ದಾರೆ.
ಮೂವರಿಗೆ ಮರಣೋತ್ತರ ಮತ್ತು ಒಬ್ಬ ತೃತೀಯ ಲಿಂಗಿ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರರಾಗಿದ್ದಾರೆ.












Click it and Unblock the Notifications