ದೇವೇಗೌಡರ ಸೋಲಿಸಿದವರ ಜೊತೆ ಪ್ರಜ್ವಲ್ ರೇವಣ್ಣ ಸಹ ಭೋಜನ
ನವದೆಹಲಿ, ಜುಲೈ 03: ದೇವೇಗೌಡ ಅವರನ್ನು ತುಮಕೂರಿನಲ್ಲಿ ಸೋಲಿಸಿದ ಬಿಜೆಪಿ ಸಂಸದ ಬಸವರಾಜು ಅವರ ಜೊತೆ ದೇವೇಗೌಡ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಸಹ ಭೋಜನ ಮಾಡುತ್ತಿರುವ ಚಿತ್ರ ವೈರಲ್ ಆಗಿದೆ.
ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಪ್ರಜ್ವಲ್ ರೇವಣ್ಣ ಅವರ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.
ನವದೆಹಲಿಯಲ್ಲಿ ಮುಂಗಾರು ಅಧಿವೇಶನದಲ್ಲಿ ಪಾಲ್ಗೊಂಡಿರುವ ಪ್ರಜ್ವಲ್ ರೇವಣ್ಣ ಅವರು ಅಲ್ಲಿಯೇ ತುಮಕೂರು ಸಂಸದ ಬಸವರಾಜು ಅವರೊಂದಿಗೆ ಮುದ್ದೆ ಊಟ ಸೇವಿಸುತ್ತಿರುವ ಚಿತ್ರವನ್ನು ಪ್ರಜ್ವಲ್ ರೇವಣ್ಣ ಅವರ ಅಭಿಮಾನಿ ಬಳಗದ ಫೇಸ್ಬುಕ್ ಪೇಜ್ನಲ್ಲಿ ಹಾಕಲಾಗಿದೆ.

ರಾಗಿ ಮುದ್ದೆ ತಿನ್ನುತ್ತಿರುವ ಚಿತ್ರ ವೈರಲ್
ಚಿತ್ರಕ್ಕೆ, 'ಡೆಲ್ಲಿಯಲ್ಲಿ ಅಮೆರಿಕಕ್ಕೆ ಹೋದರು ರಾಗಿ ಮುದ್ದೆಯೇ ಇರಬೇಕು ನಮಗೆ' ಎಂಬ ಅಡಿಬರಹದೊಂದಿಗೆ ಪೋಸ್ಟ್ ಮಾಡಲಾಗಿದೆ. ಆದರೆ ಈ ಚಿತ್ರ ದೇವೇಗೌಡ ಅವರ ಅಭಿಮಾನಿಗಳ ಕಣ್ಣು ಕೆಂಪಗೆ ಮಾಡಿದೆ.

ತಾತನನ್ನು ಸೋಲಿಸಿದ ವ್ಯಕ್ತಿಯ ಜೊತೆ ಪ್ರಜ್ವಲ್
ತಾತನನ್ನು ಸೋಲಿಸಿದ ವ್ಯಕ್ತಿಯ ಜೊತೆ ಪ್ರಜ್ವಲ್ ರೇವಣ್ಣ ಕೂತು ಊಟ ಮಾಡಿರುವುದನ್ನು ವಿರೋಧಿಸಿರುವ ಕೆಲವು ಜೆಡಿಎಸ್ ಕಾರ್ಯಕರ್ತರು ಮತ್ತು ದೇವೇಗೌಡ ಅವರ ಅಭಿಮಾನಿಗಳು ಪ್ರಜ್ವಲ್ ರೇವಣ್ಣ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುವವರೆಗೂ ಅತಿರೇಕ ಪ್ರದರ್ಶಿಸಿದ್ದಾರೆ.

ಕೆಲವರು ಪರವಾಗಿಯೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಆದರೆ ಇನ್ನು ಕೆಲವರು, ಪ್ರಜ್ವಲ್ ರೇವಣ್ಣ ಅವರು ದೆಹಲಿಗೆ ಹೋಗಿದ್ದರೂ ಅಲ್ಲಿ ರಾಗಿ ಮುದ್ದೆ ಊಟ ಮಾಡುತ್ತಿರುವುದಕ್ಕೆ ಹಾಗೂ ಅಲ್ಲಿ, ಪಕ್ಷಭೇದ ಮರೆತು ಜೊತೆಯಾಗಿ ಬೆರೆತು ಆಹಾರ ಸೇವಿಸುತ್ತಿರುವುದಕ್ಕೆ ಸಂತೋಶ ವ್ಯಕ್ತಪಡಿಸಿದ್ದಾರೆ.

ದೇವೇಗೌಡರ ಸೋಲಿಸಿದ ಜಿ.ಎಸ್.ಬಸವರಾಜು
ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದ ದೇವೇಗೌಡ ಅವರನ್ನು 12,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು. ದೇವೇಗೌಡ ಅವರು ಸ್ಪರ್ಧಿಸಿದ್ದ ಕಾರಣದಿಂದ ಈ ಕ್ಷೇತ್ರ ದೇಶದ ಗಮನ ಸೆಳೆದಿತ್ತು.












Click it and Unblock the Notifications