ಕೊವಿಡ್-19 ಕಂಟಕ: ಕುತೂಹಲ ಕೆರಳಿಸಿದ ಪ್ರಧಾನಿ ವಿಡಿಯೋ ಸಂವಾದ
ನವದೆಹಲಿ, ಜೂನ್.15: ದೇಶದಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ 21 ರಾಜ್ಯಗಳ ಮುಖ್ಯಮಂತ್ರಿಗಳ ಎರಡು ದಿನಗಳ ಕಾಲ ಮಹತ್ವದ ಸಭೆ ಕರೆಯಲಾಗಿದೆ.
ಜೂನ್.16 ಮತ್ತು ಜೂನ್.17ರಂದು ಎರಡು ದಿನ ಸಿಎಂಗಳ ಜೊತೆಗೆ ಮಧ್ಯಾಹ್ನ 3 ಗಂಟೆಗೆ ವಿಡಿಯೋ ಸಂವಾದ ನಡೆಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯ ಏರಿಕೆಗೆ ಕಾರಣಗಳೇನು ಎನ್ನುವುದರ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.
21 ರಾಜ್ಯಗಳ ಮುಖ್ಯಮಂತ್ರಿ ಜೊತೆಗೆ ಪ್ರಧಾನಿ ವಿಡಿಯೋ ಸಂವಾದ
ಭಾರತ ಲಾಕ್ ಡೌನ್ ಬಳಿಕ ಆರನೇ ಬಾರಿ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಸಂವಾದ ನಡೆಸುತ್ತಿದ್ದಾರೆ. ಮುಂದಿನ ವಾರ ನಡೆಯಲಿರುವ ವಿಡಿಯೋ ಕಾನ್ಫರೆನ್ಸ್ ನಲ್ಲಿ 21 ರಾಜ್ಯಗಳ ಸಿಎಂ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ಜೊತೆ ಚರ್ಚಿಸಿ ಕೊರೊನಾ ವೈರಸ್ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ.
ಮಂಗಳವಾರ ಯಾವ ಸಿಎಂಗಳ ಜೊತೆ ಪ್ರಧಾನಿ ಮಾತುಕತೆ
ಮೊದಲ ಹಂತದಲ್ಲಿ ಜೂನ್.16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಜಾಬ್, ಜಾರ್ಖಂಡ್, ಛತ್ತೀಸ್ ಗಢ್, ತ್ರಿಪುರಾ, ಹಿಮಾಚಲ ಪ್ರದೇಶ, ಚಂಡೀಗರ್, ಗೋವಾ, ಅಸ್ಸಾಂ, ಕೇರಳ, ಉತ್ತರಾಖಂಡ್, ಮಣಿಪುರ, ಲಡಾಖ್, ಪುದುಚೇರಿ, ಅರುಣಾಚಲ ಪ್ರದೇಶ, ಮೇಘಾಲಯ, ಮೀಜೋರಾಂ, ದಾದರ್ ನಗರ್, ಹವೇಲಿ ದಿಯು ಮತ್ತು ದಮನ್, ಸಿಕ್ಕಿಂ, ಲಕ್ಷದ್ವೀಪ ರಾಜ್ಯಗಳ ಸಿಎಂ ಹಾಗೂ ಲೆಫ್ಟಿನೆಂಟ್ ಗವರ್ನರ್ ಜೊತೆಗೆ ಚರ್ಚೆ ನಡೆಸಲಿದ್ದಾರೆ.
ಜೂನ್.17ರ ಪ್ರಧಾನಮಂತ್ರಿ ವಿಡಿಯೋ ಸಂವಾದ
ಜೂನ್.17ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡನೇ ಹಂತದಲ್ಲಿ ಹಲವು ರಾಜ್ಯಗಳ ಸಿಎಂ ಜೊತೆಗೆ ಚರ್ಚೆ ನಡೆಸಲಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಬಿಹಾರ, ಆಂಧ್ರ ಪ್ರದೇಶ ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ದೆಹಲಿ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ ಹಾಗೂ ಒಡಿಶಾ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ಸಂವಾದ ನಡೆಸಲಿದ್ದಾರೆ.
ನರೇಂದ್ರ ಮೋದಿ ವಿಡಿಯೋ ಸಂವಾದದ ಮಹತ್ವ
ಭಾರತ ಲಾಕ್ ಡೌನ್ ಸಡಿಲಿಕೆಗೊಳಿಸಿದ ನಂತರದಲ್ಲಿ ದೇಶದಲ್ಲಿನ ಚಟುವಟಿಕೆಗಳು ಸರಳವಾಗಿ ನಡೆಯುತ್ತಿವೆ. ವಾಹನ ಸಂಚಾರ, ಮಾರುಕಟ್ಟೆಗಳಲ್ಲಿನ ಜನದಟ್ಟಣೆ, ಬಸ್, ಕಾರು, ರೈಲುಗಳಲ್ಲಿನ ಪ್ರಯಾಣಿಕರ ಸಂಚಾರ ಮೊದಲಿನಂತೆ ನಡೆಯುತ್ತಿದ್ದು, ಆತಂಕವನ್ನು ಹೆಚ್ಚಿಸಿದೆ. ನಿತ್ಯ ಸಾವಿರಾರು ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದು, ಮತ್ತೊಮ್ಮೆ ಲಾಕ್ ಡೌನ್ ಹೇರಿಕೆ ಬಗ್ಗೆ ಗಾಳಿಸುದ್ದಿಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಮಂತ್ರಿ ನಡೆಸುತ್ತಿರುವ ಈ ವಿಡಿಯೋ ಸಂವಾದ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಸೋಮವಾರ ಅಮಿತ್ ಶಾ ನೇತೃತ್ವದಲ್ಲಿ ಸಭೆ
ನವದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ದೇಶದಲ್ಲಿ ಮೂರನೇ ದಿನವೂ 11,000ಕ್ಕೂ ಅಧಿಕ ಮಂದಿಗೆ ಸೋಂಕು ತಗಲಿದ್ದು, ಸೋಂಕಿತರ ಸಂಖ್ಯೆ 3.34 ಲಕ್ಷದ ಗಡಿ ದಾಟಿದೆ. ಇನ್ನೊಂದಡೆ 9,520ಕ್ಕೂ ಅಧಿಕ ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸೋಮವಾರ ಮಹತ್ವದ ಸಭೆ ನಡೆಸಲಾಯಿತು. ಈ ವೇಳೆ ದೇಶದಲ್ಲಿ ಕೊರೊನಾ ವೈರಸ್ ತಪಾಸಣೆ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡುವುದಾಗಿ ಕೇಂದ್ರ ಸರ್ಕಾರವು ಘೋಷಿಸಿತ್ತು.