ಮಹಿಳಾ ಮೀಸಲಾತಿ ತಡೆದ ವಿಪಕ್ಷಗಳ ಕೃತ್ಯ 'ಭ್ರೂಣಹತ್ಯೆ'ಗೆ ಸಮಾನ: ಕಾಂಗ್ರೆಸ್, ಟಿಎಂಸಿ, ಡಿಎಂಕೆ ವಿರುದ್ಧ ಮೋದಿ ಗುಡುಗು
ನವದೆಹಲಿ: ಮಹಿಳಾ ಮೀಸಲಾತಿ ಮಸೂದೆ ವಿರುದ್ಧ ಪ್ರತಿಪಕ್ಷಗಳು ಕೈಗೊಂಡಿರುವ ನಿಲುವನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ವಿರೋಧ ಪಕ್ಷಗಳ ಈ ನಡೆಯನ್ನು 'ಹೆಣ್ಣು ಭ್ರೂಣಹತ್ಯೆ'ಗೆ ಹೋಲಿಸಿರುವ ಅವರು, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ (TMC), ಮತ್ತು ಡಿಎಂಕೆ ಪಕ್ಷಗಳೇ ಇದಕ್ಕೆ ನೇರ ಹೊಣೆ ಹಾಗೂ ಅಪರಾಧಿಗಳು ಎಂದು ಗುಡುಗಿದ್ದಾರೆ. "ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ನಾರಿ ಶಕ್ತಿಯ ಕನಸುಗಳನ್ನು ಹೊಸಕಿ ಹಾಕಲಾಗಿದೆ" ಎಂದು ಬೇಸರ ವ್ಯಕ್ತಪಡಿಸಿರುವ ಅವರು, ಈ ಹಿನ್ನಡೆಗಾಗಿ ದೇಶದ ಮಹಿಳೆಯರ ಬಳಿ ಕ್ಷಮೆ ಯಾಚಿಸಿದ್ದಾರೆ.
ನಿನ್ನೆ ನಡೆದ ವಿಶೇಷ ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಒಳಗೊಂಡ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಸಂಸತ್ ಅಧಿವೇಶನದಲ್ಲಿ ಬಹುಮತ ಲಭ್ಯವಾಗಲಿರಲಿಲ್ಲ. ಇದರಿಂದಾಗಿ ಎನ್ಡಿಎ ಸರ್ಕಾರದ ಬಹು ನಿರೀಕ್ಷಿತ ಮಸೂದೆ ಅಂಗೀಕಾರವಾಗಲಿಲ್ಲ. ಈ ವಿಷಯದ ಕುರಿತೂ ದೇಶವನ್ನು ಉದ್ದೇಶಿಸಿ ಇಂದಿನ ಭಾಷಣದಲ್ಲಿ ಪ್ರಧಾನಿ ಮೋದಿ ಮಾತನಾಡಿದರು.

ತಮ್ಮ ಭಾಷಣದ ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಬದ್ಧವಾಗಿದೆ. ಆದರೆ, ಕೆಲವು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಮಹಿಳಾ ಮೀಸಲಾತಿ ಮಸೂದೆಗೆ ಉದ್ದೇಶಪೂರ್ವಕವಾಗಿ ಅಡ್ಡಗಾಲು ಹಾಕುತ್ತಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದರು. ಕೊಯಮತ್ತೂರಿನಲ್ಲಿ ನಡೆದ ರ್ಯಾಲಿ ಯಲ್ಲೂ ಇದೇ ವಿಚಾರ ಪ್ರಸ್ತಾಪಿಸಿದ ಅವರು, ಸಾಮಾನ್ಯ ಮಹಿಳೆಯರು ರಾಜಕೀಯದಲ್ಲಿ ಉನ್ನತ ಮಟ್ಟಕ್ಕೆ ಏರುವುದನ್ನು ನೋಡಲು ಕಾಂಗ್ರೆಸ್ ಹಾಗೂ ಡಿಎಂಕೆ ಪಕ್ಷಗಳಿಗೆ ಇಷ್ಟವಿಲ್ಲ. ಅವರಿಗೆ ಮಹಿಳೆಯರ ಏಳಿಗೆಯನ್ನು ಸಹಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದರು.
ಸಚಿವ ಸಂಪುಟ ಸಭೆಯಲ್ಲಿಯೂ ಈ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಮಸೂದೆಗೆ ಬೆಂಬಲ ನೀಡದಿರುವ ಮೂಲಕ ವಿರೋಧ ಪಕ್ಷಗಳು ಐತಿಹಾಸಿಕ ತಪ್ಪು ಮಾಡಿವೆ. ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡಿರುವ ಈ ವಿರೋಧ ಪಕ್ಷಗಳು ಭವಿಷ್ಯದಲ್ಲಿ ಇದರ ರಾಜಕೀಯ ಬೆಲೆಯನ್ನು ಖಂಡಿತವಾಗಿಯೂ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು. ಮಸೂದೆಯನ್ನು ವಿರೋಧಿಸುವವರು ಮಹಿಳಾ ವಿರೋಧಿ ಮನಸ್ಥಿತಿಯನ್ನು ಹೊಂದಿದ್ದಾರೆ, ಈ ಸಂದೇಶವನ್ನು ದೇಶದ ಮೂಲೆ ಮೂಲೆಗೂ ಹಾಗೂ ಪ್ರತಿಯೊಂದು ಹಳ್ಳಿಗೂ ತಲುಪಿಸುವಂತೆ ತಮ್ಮ ಸಚಿವರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
"ಮಹಿಳೆಯರಿಗೆ 33% ಮೀಸಲಾತಿ ನೀಡುವುದು ಅವರ ಹಕ್ಕೇ ಹೊರತು, ನಾವೇನು ಅವರಿಗೆ ಮಾಡುತ್ತಿರುವ ಉಪಕಾರವಲ್ಲ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಮಸೂದೆಯನ್ನು ನಾವು ಜಾರಿಗೆ ತರಲು ಶತಪ್ರಯತ್ನ ಪಟ್ಟೆವು. ಆದರೆ ವಿರೋಧ ಪಕ್ಷಗಳು ಕೇವಲ ರಾಜಕೀಯ ಕಾರಣಗಳಿಗಾಗಿ ಹಾಗೂ ತಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇದನ್ನು ವಿಫಲಗೊಳಿಸಿವೆ. ಈ ಕೃತ್ಯವು ಒಂದು ರೀತಿಯಲ್ಲಿ ಭ್ರೂಣದಲ್ಲೇ ಹೆಣ್ಣನ್ನು ಕೊಂದಂತೆ, ಅಂದರೆ 'ರಾಜಕೀಯ ಭ್ರೂಣಹತ್ಯೆ'ಗೆ ಸಮಾನವಾಗಿದೆ" ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ವಿಚಾರದಲ್ಲಿ ಮಹಿಳೆಯರನ್ನು ದಾರಿ ತಪ್ಪಿಸಲು ಪ್ರತಿಪಕ್ಷಗಳು ಯತ್ನಿಸುತ್ತಿವೆ ಎಂದು ಆರೋಪಿಸಿದ ಪ್ರಧಾನಿ, ವಿಪಕ್ಷಗಳು ಕೇವಲ ನೆಪಗಳನ್ನು ಹೇಳಿಕೊಂಡು ನಾರಿ ಶಕ್ತಿಯ ಸಬಲೀಕರಣವನ್ನು ತಡೆಯುತ್ತಿವೆ ಎಂದರು. ಆದರೆ, ದೇಶದ ಜಾಗೃತ ಮಹಿಳೆಯರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ಈ ಅಪರಾಧಿಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ, ಮಹಿಳಾ ಮೀಸಲಾತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಮುಂಬರುವ ದಿನಗಳಲ್ಲಿ ಇದು ಇನ್ನಷ್ಟು ರಾಜಕೀಯ ಸಂಚಲನ ಮೂಡಿಸುವ ಸಾಧ್ಯತೆಯಿದೆ. ದೇಶಾದ್ಯಂತ ಮಹಿಳಾ ಮೀಸಲಾತಿ ಜಾರಿಗೆ ಬರುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಪುನರುಚ್ಚರಿಸಿದರು.














Click it and Unblock the Notifications