Heatwave Alert: ಚಾಮರಾಜನಗರ ಜಿಲ್ಲೆಯಲ್ಲಿ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಯೂನಿಫಾರ್ಮ್ ಸಡಿಲಿಕೆ ಕುರಿತು ಮಹತ್ವದ ಆದೇಶ
ಚಾಮರಾಜನಗರ, ಏಪ್ರಿಲ್ 18: ಚಾಮರಾಜನಗರ ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿರುವ ಕಾರಣ, ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಮಹತ್ವದ ಆದೇಶವೊಂದನ್ನು ಹೊರಡಿಸಿದ್ದಾರೆ. ಜಿಲ್ಲೆಯ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಮತ್ತು ಅನುದಾನರಹಿತ ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತೀವ್ರ ಬಿಸಿಲಿರುವ ಅವಧಿಯಲ್ಲಿ ಭಾರವಾದ ಯೂನಿಫಾರ್ಮ್, ಟೈ, ಬೆಲ್ಟ್ ಮತ್ತು ಶೂಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಬಿಸಿಲಿನ ತಾಪಕ್ಕೆ ಅನುಗುಣವಾಗಿ ಹಗುರವಾದ ಮತ್ತು ಆರಾಮದಾಯಕವಾದ ಹತ್ತಿ ಉಡುಪುಗಳನ್ನು ಧರಿಸಲು ಶಿಕ್ಷಣ ಸಂಸ್ಥೆಗಳು ಅನುಮತಿ ನೀಡಬೇಕು. ಬೇಸಿಗೆ ರಜೆಯ ಅವಧಿಯಲ್ಲಿ ವಿಶೇಷ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳಿಗೂ ಈ ನಿಯಮ ಅನ್ವಯವಾಗಲಿದ್ದು, ಅಲ್ಲಿಯೂ ಸಮವಸ್ತ್ರ ಕಡ್ಡಾಯ ಮಾಡುವಂತಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಡಿಡಿಪಿಐ) ಸೂಚಿಸಿದ್ದಾರೆ.

ಶಾಲಾ ಆಡಳಿತ ಮಂಡಳಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳು
* ಎಲ್ಲಾ ಕೊಠಡಿಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಮಾಡಬೇಕು.
* ಮಧ್ಯಾಹ್ನದ ತೀವ್ರ ಬಿಸಿಲಿನ ಸಮಯದಲ್ಲಿ ಯಾವುದೇ ರೀತಿಯ ಹೊರಾಂಗಣ ಚಟುವಟಿಕೆಗಳನ್ನು ನಡೆಸಬಾರದು.
* ಬಿಸಿಗಾಳಿಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು.
ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಬಿಸಿಗಾಳಿ ಪರಿಸ್ಥಿತಿ ಶಮನವಾಗುವವರೆಗೆ ಅಥವಾ ಮುಂದಿನ ಸೂಚನೆ ಬರುವವರೆಗೆ ಜಾರಿಯಲ್ಲಿರುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಈ ಅವಧಿಯಲ್ಲಿ ಹೆಚ್ಚು ನೀರು ಕುಡಿಸಲು ಮತ್ತು ಬಿಸಿಲಿನಿಂದ ರಕ್ಷಿಸಲು ಜಿಲ್ಲಾಡಳಿತ ಮನವಿ ಮಾಡಿದೆ.
ಜಿಲ್ಲಾಧಿಕಾರಿಗೆ ಮೆಚ್ಚುಗೆಗಳ ಸುರಿಮಳೆ
ಬನಶಂಕರ್ ಆರಾಧ್ಯ ಎಂಬುವವರು ತಮ್ಮ ಪೇಸ್ಬುಕ್ ಖಾತೆಯಲ್ಲಿ, ಚಾಮರಾಜನಗರ ಜಿಲ್ಲಾಧಿಕಾರಿಗಳ ಈ ಮಹತ್ವದ ನಿರ್ಧಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಈ ಬೆಂಕಿಯಂಥ ಬಿಸಿಲು, ಸೆಕೆ ಇರುವ ಸಮಯದಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕೋಟು ಬ್ಲೇಝರ್, ಟೈ ಧರಿಸಿಕೊಂಡೇ ಹೋಗುತ್ತಿರುವುದನ್ನು ಗಮನಿಸಿದ್ದೆ. ನಿನ್ನೆ ಒಂದು ಫೋಟೋವನ್ನೂ ತೆಗೆದೆ. ಅಲ್ಲೇ ನಿಂತು ಚಾಮರಾಜನಗರ ಜಿಲ್ಲಾಧಿಕಾರಿ ರೂಪಾ ಅವರಿಗೆ ದೂರವಾಣಿ ಕರೆ ಮಾಡಿ ಈ ಬಗ್ಗೆ ಮಾತನಾಡಿದೆ," ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ, "ಮೇಡಂ ಈ ಉರಿ ಬಿಸಿಲಿನಲ್ಲೂ ಶಾಲಾ-ಕಾಲೇಜುಗಳು ಮಕ್ಕಳಿಗೆ ಬ್ಲೇಝರ್, ಕೋಟು ಧರಿಸಿ ಬರುವುದನ್ನು ಕಡ್ಡಾಯ ಮಾಡಿರುವುದು ಮಕ್ಕಳ ಹಿತದೃಷ್ಟಿಯಿಂದ ಸರಿಯಲ್ಲ. ಬೇಸಿಗೆ ಮುಗಿಯುವವರೆಗೆ ಈ ಕಡ್ಡಾಯ ಸಡಿಲಿಸುವಂತೆ ಶಾಲಾ- ಕಾಲೇಜುಗಳನ್ನುದ್ದೇಶಿಸಿ ಒಂದು ಸೂಚನೆ ಕೊಡಬೇಕು," ಎಂದು ಮನವಿ ಮಾಡಿದೆ.
"ಈ ಬಗ್ಗೆ ಸೂಚನೆ ನೀಡುತ್ತೇನೆ ಎಂದು ಜಿಲ್ಲಾಧಿಕಾರಿಯವರು ಭರವಸೆ ನೀಡಿದರು. ಅದನ್ನು ಕೇವಲ ಒಂದೇ ದಿನದಲ್ಲಿ ಜಿಲ್ಲಾಧಿಕಾರಿಯವರು ಕಾರ್ಯರೂಪಕ್ಕೆ ತರುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಇಂದು ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿಯೇ ಬಿಟ್ಟಿದ್ದಾರೆ. ಇಂಥ ಸಾರ್ವಜನಿಕ ಕಾಳಜಿ ಹೊಂದಿರುವ ಜಿಲ್ಲಾಧಿಕಾರಿ ರೂಪಾ ಅವರಿಗೆ ಧನ್ಯವಾದಗಳು," ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೇಸಿಗೆಯಲ್ಲಿ ಪಾಲಿಸಬೇಕಾದ ಕ್ರಮಗಳು
* ಮಕ್ಕಳು ಬಾಯಾರಿಕೆ ಆಗದಿದ್ದರೂ ಆಗಾಗ ನೀರು ಕುಡಿಯುವಂತೆ ಪ್ರೇರೇಪಿಸಬೇಕು.
* ಎಳನೀರು, ಮಜ್ಜಿಗೆ, ನಿಂಬೆ ಹಣ್ಣಿನ ಜ್ಯೂಸ್ ಅಥವಾ ಮನೆಯಲ್ಲೇ ತಯಾರಿಸಿದ ಹಣ್ಣಿನ ರಸಗಳನ್ನು ನೀಡುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ.
* ಅತಿಯಾದ ಸಕ್ಕರೆ ಇರುವ ಸೋಡಾ ಅಥವಾ ತಂಪು ಪಾನೀಯಗಳು ತಪ್ಪಿಸುವುದು ಒಳಿತು.
* ಸುಲಭವಾಗಿ ಜೀರ್ಣವಾಗುವಂತಹ ತಾಜಾ ಆಹಾರವನ್ನು ಮಕ್ಕಳಿಗೆ ನೀಡಿ.
* ನೀರಿನಂಶ ಹೆಚ್ಚಿರುವ ಸೌತೆಕಾಯಿ, ಕಲ್ಲಂಗಡಿ, ಕಿತ್ತಳೆ ಮತ್ತು ಸೊಪ್ಪು-ತರಕಾರಿಗಳನ್ನು ಮಕ್ಕಳ ಊಟದಲ್ಲಿ ಸೇರಿಸಿ.
* ಬೇಸಿಗೆಯಲ್ಲಿ ಆಹಾರ ಬೇಗನೆ ಹಾಳಾಗುವುದರಿಂದ ಹೊರಗಿನ ತೆರೆದಿಟ್ಟ ಆಹಾರಗಳನ್ನು ತಿನ್ನಲು ಕೊಡಬೇಡಿ.
* ದೇಹಕ್ಕೆ ಗಾಳಿಯಾಡುವಂತಹ ತೆಳ್ಳನೆಯ ಹತ್ತಿ ಬಟ್ಟೆಗಳನ್ನು ಧರಿಸಿ. ಸಾಧ್ಯವಾದರೆ ಸಿಂಥೆಟಿಕ್ ಬಟ್ಟೆಗಳನ್ನು ತಪ್ಪಿಸಿ.
* ಬಿಸಿಲಿನಲ್ಲಿ ಹೋಗುವಾಗ ಟೋಪಿ, ಛತ್ರಿ ಅಥವಾ ಸ್ಕಾರ್ಫ್ ಬಳಸುವುದನ್ನು ರೂಢಿ ಮಾಡಿ.
* ಬಿಸಿಲಿನ ವೇಳೆ ಕ್ರೀಡಾ ಚಟುವಟಿಕೆ ಅಥವಾ ಪ್ರಾರ್ಥನಾ ಸಭೆಗಳನ್ನು ಮುಗಿಸುವುದು ಸೂಕ್ತ.
* ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ಸೂರ್ಯನ ಕಿರಣಗಳು ನೇರವಾಗಿ ಇರುವುದರಿಂದ ಮಕ್ಕಳನ್ನು ಹೊರಾಂಗಣ ಆಟಗಳಿಗೆ ಬಿಡಬೇಡಿ. ಒಳಾಂಗಣ ಆಟಗಳಿಗೆ ಆದ್ಯತೆ ನೀಡಿ.
* ತರಗತಿ ಕೊಠಡಿಗಳಲ್ಲಿ ಫ್ಯಾನ್ ಮತ್ತು ಸರಿಯಾದ ಗಾಳಿಯ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳಿ.
* ಮಗುವಿಗೆ ತಲೆನೋವು, ಅತಿಯಾದ ಸುಸ್ತು, ವಾಂತಿ ಅಥವಾ ತಲೆತಿರುಗುವಿಕೆ ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ.
* ಬಿಸಿಲಿನ ತಾಪಕ್ಕೆ ಮಗು ಸೊರಗಿದ್ದರೆ ತಂಪಾದ ನೀರಿನಿಂದ ಮೈ ಒರೆಸುವುದು ಅಥವಾ ಗಾಳಿ ಇರುವ ಜಾಗದಲ್ಲಿ ಮಲಗಿಸುವುದು ಅವಶ್ಯಕ.












Click it and Unblock the Notifications