21 ರಾಜ್ಯಗಳ ಮುಖ್ಯಮಂತ್ರಿ ಜೊತೆಗೆ ಪ್ರಧಾನಿ ವಿಡಿಯೋ ಸಂವಾದ
ನವದೆಹಲಿ, ಜೂನ್.12: ಭಾರತದಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 3 ಲಕ್ಷದ ಗಡಿ ದಾಟಿದೆ. ಲಾಕ್ ಡೌನ್ ಆಗಿದ್ದ ದೇಶವು ಯಥಾಸ್ಥಿತಿಯತ್ತ ಸಾಗುತ್ತಿದ್ದು, 21 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಸಂವಾದ ನಡೆಸಲಿದ್ದಾರೆ.
Recommended Video
ಜೂನ್.16 ಮತ್ತು ಜೂನ್.17ರಂದು ಎರಡು ದಿನ ಸಿಎಂಗಳ ಜೊತೆಗೆ ಮಧ್ಯಾಹ್ನ 3 ಗಂಟೆಗೆ ವಿಡಿಯೋ ಸಂವಾದ ನಡೆಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿನ ಗಣನೀಯ ಏರಿಕೆಗೆ ಕಾರಣಗಳೇನು ಎನ್ನುವುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಉದ್ಯಮಿಗಳನ್ನುದ್ದೇಶಿಸಿ ಮೋದಿ ಭಾಷಣ: ಪ್ರಮುಖ ಅಂಶಗಳು
ಭಾರತ ಲಾಕ್ ಡೌನ್ ಬಳಿಕ ಆರನೇ ಬಾರಿ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಸಂವಾದ ನಡೆಸುತ್ತಿದ್ದಾರೆ. ಮುಂದಿನ ವಾರ ನಡೆಯಲಿರುವ ವಿಡಿಯೋ ಕಾನ್ಫರೆನ್ಸ್ ನಲ್ಲಿ 21 ರಾಜ್ಯಗಳ ಸಿಎಂ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ಜೊತೆ ಚರ್ಚಿಸಿ ಕೊರೊನಾ ವೈರಸ್ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ.
ಜೂನ್.16ರ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್
ಮೊದಲ ಹಂತದಲ್ಲಿ ಜೂನ್.16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಜಾಬ್, ಅಸ್ಸಾಂ, ಕೇರಳ, ಉತ್ತರಾಖಂಡ್, ಜಾರ್ಖಂಡ್, ಛತ್ತೀಸ್ ಗಢ್, ತ್ರಿಪುರಾ, ಹಿಮಾಚಲ ಪ್ರದೇಶ, ಚಂಡೀಗರ್, ಗೋವಾ, ಮಣಿಪುರ, ಲಡಾಖ್, ಪುದುಚೇರಿ, ಅರುಣಾಚಲ ಪ್ರದೇಶ, ಮೇಘಾಲಯ, ಮೀಜೋರಾಂ, ದಾದರ್ ನಗರ್, ಹವೇಲಿ ದಿಯು ಮತ್ತು ದಮನ್, ಸಿಕ್ಕಿಂ, ಲಕ್ಷದ್ವೀಪ ರಾಜ್ಯಗಳ ಸಿಎಂ ಹಾಗೂ ಲೆಫ್ಟಿನೆಂಟ್ ಗವರ್ನರ್ ಜೊತೆಗೆ ಚರ್ಚೆ ನಡೆಸಲಿದ್ದಾರೆ.
ಬುಧವಾರ ಪ್ರಧಾನಮಂತ್ರಿ ಮೋದಿ ವಿಡಿಯೋ ಸಂವಾದ
ಜೂನ್.17ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡನೇ ಹಂತದಲ್ಲಿ ಹಲವು ರಾಜ್ಯಗಳ ಸಿಎಂ ಜೊತೆಗೆ ಚರ್ಚೆ ನಡೆಸಲಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಬಿಹಾರ, ಆಂಧ್ರ ಪ್ರದೇಶ ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ತೆಲಂಗಾಣ ಹಾಗೂ ಒಡಿಶಾ ಮುಖ್ಯಮಂತ್ರಿಗಳ ಜೊತೆಗೆ ಮೋದಿ ಚರ್ಚಿಸಲಿದ್ದಾರೆ.
ಲಾಕ್ ಡೌನ್ ಪರಿಣಾಮದ ಕುರಿತು ವಿಡಿಯೋ ಕಾನ್ಫರೆನ್ಸ್
ಭಾರತ ಲಾಕ್ ಡೌನ್ ಸಡಿಲಿಕೆಗೊಳಿಸಿದ ನಂತರದಲ್ಲಿ ದೇಶದಲ್ಲಿನ ಚಟುವಟಿಕೆಗಳು ಸರಳವಾಗಿ ನಡೆಯುತ್ತಿವೆ. ವಾಹನ ಸಂಚಾರ, ಮಾರುಕಟ್ಟೆಗಳಲ್ಲಿನ ಜನದಟ್ಟಣೆ, ಬಸ್, ಕಾರು, ರೈಲುಗಳಲ್ಲಿನ ಪ್ರಯಾಣಿಕರ ಸಂಚಾರ ಮೊದಲಿನಂತೆ ನಡೆಯುತ್ತಿದ್ದು, ಆತಂಕವನ್ನು ಹೆಚ್ಚಿಸಿದೆ. ನಿತ್ಯ ಸಾವಿರಾರು ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದು, ಮತ್ತೊಮ್ಮೆ ಲಾಕ್ ಡೌನ್ ಹೇರಿಕೆ ಬಗ್ಗೆ ಗಾಳಿಸುದ್ದಿಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಮಂತ್ರಿ ನಡೆಸುತ್ತಿರುವ ಈ ವಿಡಿಯೋ ಸಂವಾದ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಜಾಗತಿಕ ಪಟ್ಟಿಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ
ಜಾಗತಿಕ ಮಟ್ಟದಲ್ಲಿ 76,63,678 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ ಮಹಾಮಾರಿಗೆ 4,25,593 ಮಂದಿ ಬಲಿಯಾಗಿದ್ದಾರೆ. 38,81,210 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೆ ಏರಿದೆ. ಭಾರತದಲ್ಲಿ 3,06,270 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದ್ದು, 8,723 ಜನರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. 1,52,748 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, 1,44,777 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.