ಸೆಂಟ್ರಲ್ ವಿಸ್ಟಾಕ್ಕಾಗಿ ದುಡಿದ ಶ್ರಮಜೀವಿಗಳೇ ಗಣರಾಜ್ಯೋತ್ಸವದ ಅತಿಥಿ ಎಂದ ಪ್ರಧಾನಿ
ನವದೆಹಲಿ, ಸೆಪ್ಟೆಂಬರ್ 8: ರಾಷ್ಟ್ರ ರಾಜಧಾನಿಯಲ್ಲಿ ವಸಾಹತುಶಾಹಿಯ ಸಂಕೇತವಾದ 'ಕಿಂಗ್ಸ್ವೇ' ಇತಿಹಾಸದ ಪುಟ ಸೇರಲಿದ್ದು, ಕರ್ತವ್ಯ ಪಥದ ರೂಪದಲ್ಲಿ ಹೊಸ ಯುಗ ಪ್ರಾರಂಭವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯಲ್ಲಿ ಕರ್ತವ್ಯ ಪಥ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಸಾಹತುಶಾಹಿ ಗುರುತುಗಳನ್ನು ಶಾಶ್ವತವಾಗಿ ಅಳಿಸಿಹಾಕಲಾಗಿದೆ ಎಂದರು. ವಸಾಹತುಶಾಹಿಯ ಮತ್ತೊಂದು ಸಂಕೇತದಿಂದ ಹೊರಬಂದಂತೆ ದೇಶದ ಎಲ್ಲ ಜನರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಕಳೆದ 8 ವರ್ಷಗಳಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಛಾಪು ಹೊಂದಿರುವ ಹಲವಾರು ನಿರ್ಧಾರಗಳನ್ನು ನಾವು ತೆಗೆದುಕೊಂಡಿದ್ದೇವೆ. ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ 'ಅಖಂಡ ಭಾರತ'ದ ಮೊದಲ ಮುಖ್ಯಸ್ಥರಾಗಿದ್ದರು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ಮರಿಸಿಕೊಂಡರು. ಈ ವೇಳೆ ಪ್ರಧಾನಿ ಭಾಷಣದ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳೋಣ.

ಸಶಕ್ತ ಭಾರತಕ್ಕಾಗಿ ಹೊಸ ಮಾರ್ಗ ಎಂದ ಮೋದಿ
"ನವದೆಹಲಿಯ ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಬೃಹತ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಬ್ರಿಟಿಷರ ಆಳ್ವಿಕೆಯಲ್ಲಿ ಇದೇ ಸ್ಥಳದಲ್ಲಿ ಬ್ರಿಟಿಷರ ಪ್ರತಿನಿಧಿಯೊಬ್ಬರ ಪ್ರತಿಮೆ ಇತ್ತು. ನೇತಾಜಿ ಅವರ ಪ್ರತಿಮೆ ಸ್ಥಾಪನೆಯೊಂದಿಗೆ, ನಾವು ಸಶಕ್ತ ಭಾರತಕ್ಕಾಗಿ ಹೊಸ ಮಾರ್ಗವನ್ನು ಸ್ಥಾಪಿಸಿದ್ದೇವೆ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ಬ್ರಿಟೀಷ್ ಕಾನೂನುಗಳಿಂದ ಹೊರ ಬಂದ ಭಾರತ
ಭಾರತವು ಬ್ರಿಟಿಷರ ಕಾಲದಿಂದಲೂ ಇದ್ದ ವಿವಿಧ ಕಾನೂನುಗಳಿಂದ ಹೊರಗೆ ಬಂದಿದೆ. ಇಂದು ದೇಶ ಬದಲಾವಣೆಯತ್ತ ದಾಪುಗಾಲು ಇಡುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ದೇಶದ ಯುವಕರು ಅನ್ಯ ಭಾಷೆಗಳನ್ನು ಒತ್ತಾಯಪೂರ್ಕವಾಗಿ ಕಲಿಯಬೇಕು ಎಂಬ ನಿಯಮವಿಲ್ಲ. ಅಂಥ ಕಟ್ಟುಪಾಡುಗಳಿಂದ ಯುವಕರು ಮುಕ್ತರಾಗುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದರು.

ಶ್ರಮಜೀವಿಗಳೇ ಗಣರಾಜ್ಯೋತ್ಸವದ ಅತಿಥಿಗಳು ಎಂದ ಮೋದಿ
ಈ ಹಿಂದೆ ಭಾರತದ ಜನರು ಗುಲಾಮರಾಗಿದ್ದ ಕಾಲದಲ್ಲಿ ಇದು ಬ್ರಿಟಿಷರಿಗೆ ರಾಜಪಥವಾಗಿತ್ತು. ಇದು ವಸಾಹತುಶಾಹಿಯ ಸಂಕೇತವಾಗಿದ್ದು, ಈಗ ಅದರ ವಾಸ್ತುಶಿಲ್ಪ ಬದಲಾಗಿದೆ. ಅದರ ಆತ್ಮವೂ ಬದಲಾಗಿದೆ. ಸೆಂಟ್ರಲ್ ವಿಸ್ಟಾಕ್ಕಾಗಿ ಹಾಗೂ ಪುನರಾಭಿವೃದ್ಧಿಗಾಗಿ ಇಲ್ಲಿ ಕೆಲಸ ಮಾಡಿದ ಶ್ರಮಜೀವಿಗಳೇ ಜನವರಿ 26ರಂದು ನನ್ನ ವಿಶೇಷ ಅತಿಥಿಯಾಗಿರುತ್ತಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ನೇತಾಜಿ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ
ನವದೆಹಲಿಯ ಇಂಡಿಯಾ ಗೇಟ್ನಲ್ಲಿ ಕೇಂದ್ರ ಸರ್ಕಾರದ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ವೇಳೆ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ 28 ಅಡಿ ಎತ್ತರದ ಪ್ರತಿಮೆಯನ್ನು ಇಂಡಿಯಾ ಗೇಟ್ನಲ್ಲಿ ಮೇಲಾವರಣದ ಅಡಿಯಲ್ಲಿ ಸ್ಥಾಪಿಸಲಾಗಿದ್ದು, ಅದನ್ನು ಪ್ರಧಾನಿ ಅನಾವರಣಗೊಳಿಸಿದರು. 280 ಮೆಟ್ರಿಕ್ ಟನ್ ತೂಕದ ಏಕಶಿಲೆಯ ಗ್ರಾನೈಟ್ ಬ್ಲಾಕ್ನಿಂದ ನೇತಾಜಿ ಸುಭಾಷ್ ಅವರ ಭವ್ಯವಾದ ಪ್ರತಿಮೆ ಕೆತ್ತಲಾಗಿದೆ. ಈ ಶಿಲ್ಪಿಗಳ ತಂಡವು 26,000 ಮಾನವ-ಗಂಟೆಗಳ ಸಮಯವನ್ನು ತೆಗೆದುಕೊಂಡು ಅದ್ಭುತ ಕಲಾ ಪ್ರತಿಮೆಯನ್ನು ಕೆತ್ತಿದ್ದಾರೆ. ನವದೆಹಲಿಯ ಇಂಡಿಯಾ ಗೇಟ್ನಲ್ಲಿ ಪ್ರಧಾನಿ ಮೋದಿ ಅನಾವರಣಗೊಳಿಸಿದ ನೇತಾಜಿ ಪ್ರತಿಮೆಯು 65 ಮೆಟ್ರಿಕ್ ಟನ್ ತೂಕವನ್ನು ಹೊಂದಿದೆ.












Click it and Unblock the Notifications