ಸದ್ಯದಲ್ಲೇ ಮೋದಿ ಸಂಪುಟಕ್ಕೆ ಇನ್ನೂ ಮೂವರ ನೇಮಕ
ನವದೆಹಲಿ, ಮೇ 28: ನರೇಂದ್ರ ಮೋದಿ ಸಾರಥ್ಯದ ಕೇಂದ್ರ ಮಂತ್ರಿಮಂಡಳವು ಮುಂದಿನ ತಿಂಗಳು ವಿಸ್ತರಣೆ ಕಾಣುತ್ತಿದೆ. ಜುಲೈಮೊದಲ ವಾರದಲ್ಲಿ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಅಷ್ಟರೊಳಗೆ ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ತರಲು ಪ್ರಧಾನಿ ಮೋದಿ ಆಲೋಚಿಸಿದ್ದಾರೆ.
ಏಕೆಂದರೆ ಈಗ ಮೊದಲ ಸಂಪುಟದಲ್ಲಿ ಸ್ವತಃ ಪ್ರಧಾನಿ ಸೇರಿದಂತೆ ಕೆಲ ಸಚಿವರಿಗೆ ಹೆಚ್ಚಿನ ಹೊಣೆ ನೀಡಲಾಗಿದೆ. ಇದರಿಂದ ಸಚಿವರುಗಳಿಗೆ ಕಾರ್ಯಭಾರ ನಿಜಕ್ಕೂ ಹೆಚ್ಚಾಗಿದೆ, ಸ್ವತಃ ತಮಗೆ ನೀಡಿರುವ ಪ್ರಮುಖ ಖಾತೆಗಳನ್ನು ನಿರ್ವಹಿಸಲು ಇದು ಹೊರೆಯಾಗಿದೆ.
ಉದಾಹರಣಗೆ ಅತ್ಯಂತ ಪ್ರಮುಖವಾದ ಮತ್ತು ಪೂರ್ಣಕಾಲಿಕವಾದಂತ ರಕ್ಷಣಾ ಖಾತೆ, ಕಾನೂನು ಮತ್ತು ನ್ಯಾಯಾಂಗ, ಪರಿಸರ ಹಾಗೂ ಅರಣ್ಯ ಖಾತೆಗಳನ್ನು ಹೆಚ್ಚುವರಿಯಾಗಿ ಅರುಣ್ ಜೇಟ್ಲಿ, ರವಿಶಂಕರ್ ಪ್ರಸಾದ್ ಮತ್ತು ಪ್ರಕಾಶ್ ಜಾವಡೇಕರ್ ಅವರಿಗೆ ವಹಿಸಲಾಗಿದೆ.

ಅರುಣ್ ಜೇಟ್ಲಿ ಅವರು ನಿನ್ನೆ ನಾರ್ತ್ ಬ್ಲಾಕ್ ಸಂಕೀರ್ಣದಲ್ಲಿ ಹಣಕಾಸು ಖಾತೆ ಅಧಿಕಾರ ವಹಿಸಿಕೊಳ್ಳುವಾಗಲೇ ಇದನ್ನು ಸ್ಪಷ್ಟಪಡಿಸಿದ್ದಾರೆ. ತಾವು ರಕ್ಷಣಾ ಖಾತೆ ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆಯನ್ನು ಹೆಚ್ಚುವರಿಯಾಗಿಯಷ್ಟೇ ವಹಿಸಿಕೊಂಡಿರುವುದಾಗಿಯೂ, ಮುಂದೆ ಬೇರೊಬ್ಬರು ಆ ಖಾತೆಗಳನ್ನು ನಿರ್ವಹಿಸಲಿದ್ದಾರೆ ಎಂದು ಹೇಳಿದ್ದಾರೆ. (ಮೋದಿ ಸಂಪುಟ: ಹೊಸ ರೂಪದಲ್ಲಿ ಸಚಿವರ ಪಟ್ಟಿ)
ಸೋಮವಾರ ಅಸ್ತಿತ್ವಕ್ಕೆ ಬಂದ ಮೋದಿ ಸಂಪುಟದಲ್ಲಿ ಒಟ್ಟು 45 ಸಚಿವರು ಇದ್ದಾರೆ. ಇದು ಅತ್ಯಂತ ತೆಳ್ಳನೆಯ ಸಂಪುಟವಾಗಿದೆ. ಇದರಿಂದ ಆತುರದ ಲೆಕ್ಕಾಚಾರದ ಪ್ರಕಾರ ಸುಮಾರು 125 ಕೋಟಿ ರೂ. ಉಳಿತಾಯ ಮಾಡಬಹುದಾಗಿದೆ ಎಂದು ಎಣಿಕೆ ಹಾಕಲಾಗಿದೆಯಾದರೂ ಮುಂದೆ ಪೂರ್ಣಪ್ರಮಾಣದ ಸಂಪುಟ ಅತ್ಯಗತ್ಯವಾಗಿ ರಚನೆಯಾಗಬೇಕಿದೆ.
ಕನಿಷ್ಠ ಮೇಲಿನ ಮೂರು ಖಾತೆಗಳಿಗಂತೂ ನೂತನ ಸಚಿವರ ನೇಮಕವಾಗಬೇಕಿದೆ. ಈ ಮೂವರೂ ಬಿಜೆಪಿ ಪಕ್ಷದಿಂದಲೇ ನೇಮಕವಾಗುವ ಸಾಧ್ಯತೆಯಿದೆ. ಏಕೆಂದರೆ ಇತರೆ ಮೈತ್ರಿಪಕ್ಷಗಳ ಕೋಟಾ ಮುಗಿದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದರ ಹೊರತಾಗಿ ಇನ್ನೂ ಕೆಲ ಸಚಿವರಿಗೆ ಹೆಚ್ಚಿನ ಹೊಣೆ ವಹಿಸಲಾಗಿದೆಯಾದೆಯಾದರೂ ಅವು ಪೂರಕ ಖಾತೆಗಳಾಗಿವೆ. ಜತೆಗೆ, ಹೆಚ್ಚು ಹೊರೆಯಿಲ್ಲದ್ದಾಗಿದೆ.












Click it and Unblock the Notifications