ಅಂತೂ ಸಿದ್ದು ನೇತೃತ್ವದ ನಿಯೋಗವನ್ನು ಭೇಟಿ ಮಾಡಿದ ಮೋದಿ
ಕರ್ನಾಟಕ ಹಿಂದೆಂದೂ ಕೇಳರಿಯದ ಬರಗಾಲವನ್ನು ಎದುರಿಸುತ್ತಿದ್ದು, ಮೋದಿಯನ್ನು ಭೇಟಿಯಾದ ಸಂದರ್ಭದಲ್ಲಿ ಕರ್ನಾಟಕದ ಸರ್ವಪಕ್ಷ ನಾಯಕರ ನಿಯೋಗ ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕೆಂದು ಕೇಳಿಕೊಂಡಿದೆ.
ನವದೆಹಲಿ, ಡಿಸೆಂಬರ್ 30 : ಕರ್ನಾಟಕದ ರಾಜಕೀಯ ನಾಯಕರ ನಿಯೋಗವನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ ಎಂಬ ಅಸಮಾಧಾನವನ್ನು ಪ್ರಧಾನಿ ಶುಕ್ರವಾರ ಶಮನ ಮಾಡಿದ್ದು, ಸಿದ್ದರಾಮಯ್ಯ ನೇತೃತ್ವದ ಸರ್ವಪಕ್ಷ ನಿಯೋಗವನ್ನು ಭೇಟಿ ಮಾಡಿದರು.
ಪ್ರತಿ ಬಾರಿ ಭೇಟಿಯಾಗಲು ನವದೆಹಲಿಗೆ ಹೋದಾಗ ನರೇಂದ್ರ ಮೋದಿ ಅವಕಾಶವನ್ನೇ ನೀಡುತ್ತಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಲವಾರು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಸಿದ್ದರಾಮಯ್ಯ ನೇತೃತ್ವದ ಸರ್ವಪಕ್ಷಗಳ ನಿಯೋಗದಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್, ಸಂಸದರಾದ ಡಿವಿ ಸದಾನಂದ ಗೌಡ, ಅನಂತ್ ಕುಮಾರ್, ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ, ಕಾಂಗ್ರೆಸ್ ನಾಯಕ ಕೃಷ್ಣ ಭೈರೇಗೌಡ, ಜೆಡಿಎಸ್ ಧುರೀಣ ಎಚ್ ಡಿ ರೇವಣ್ಣ ಮುಂತಾದವರಿದ್ದರು. [ಬಿಜೆಪಿಯವರು 2 ನಾಲಿಗೆಯವರು, ಗೋಸುಂಬೆಗಳು: ಸಿದ್ದು]

ಈ ಭೇಟಿಯ ಸಂದರ್ಭದಲ್ಲಿ ಕರ್ನಾಟಕ ಎದುರಿಸುತ್ತಿರುವ ನೀರಿನ ಸಮಸ್ಯೆ, ಮಳೆಯ ವೈಫಲ್ಯದಿಂದಾಗಿ ಹಲವಾರು ಜಿಲ್ಲೆಗಳು ಎದುರಿಸುತ್ತಿರುವ ಬರಗಾಲ, ಉತ್ತರ ಕರ್ನಾಟಕದ ಮಹದಾಯಿ ನೀರು ವಿವಾದದ ಬಗ್ಗೆ ಪ್ರಸ್ತಾಪಿಸಲಾಯಿತು. ಪ್ರಧಾನಿಯವರು ಮಧ್ಯಪ್ರವೇಶಿಸಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಲಾಯಿತು. [ಇನ್ನು ಯಾವ ಯಾವ ರೀತಿಯ ನೀರು ಕುಡಿಯಬೇಕೋ?]
ಅತಿವೃಷ್ಟಿ ಅನಾವೃಷ್ಟಿ ಪರಿಹಾರ : ಕರ್ನಾಟಕ ಹಿಂದೆಂದೂ ಕಂಡರಿಯದ ಬರಗಾಲ ಎದುರಿಸುತ್ತಿದ್ದು, 4,702 ಕೋಟಿ ರುಪಾಯಿ ಪರಿಹಾರ ನೀಡಬೇಕು. ಕರ್ನಾಟಕದ ಕೆಲ ಭಾಗದಲ್ಲಿ ಅತಿವೃಷ್ಟಿಯಾಗಿ ಬೆಳೆ ಹಾನಿಯಾಗಿರುವುದರಿಂದ 386 ಕೋಟಿ ರು. ಪರಿಹಾರ ದೊರಕಿಸಿಕೊಡಬೇಕು ಎಂದು ಸಿದ್ದರಾಮಯ್ಯ ಅವರು ನರೇಂದ್ರ ಮೋದಿಯನ್ನು ಆಗ್ರಹಿಸಿದರು.
ಹದಿನೈದು ವರ್ಷಗಳಲ್ಲಿ ಇದು ಅತೀ ಭೀಕರ ಬರಗಾಲವಾಗಿದೆ. ಅಣೆಕಟ್ಟುಗಳೆಲ್ಲ ಬರಿದಾಗಿವೆ, ಕೆರೆಗಳು ಬತ್ತಿಹೋಗಿವೆ. ಕರ್ನಾಟಕ ಕುಡಿಯುವ ನೀರಿನ ಅತೀವ ಕೊರತೆ ಎದುರಿಸುತ್ತಿದೆ ಎಂದು ಕರ್ನಾಟಕದ ನಿಯೋಗ ಅಳಲನ್ನು ತೋಡಿಕೊಂಡಿದೆ.












Click it and Unblock the Notifications