ತ್ರಿವಳಿ ತಲಾಕ್ ದಾರಿ ತಪ್ಪಿಸಬೇಡಿ: ಕಾಂಗ್ರೆಸ್ ಗೆ ಮೋದಿ ಎಚ್ಚರಿಕೆ
ನವದೆಹಲಿ, ಜೂನ್ 26: ತ್ರಿವಳಿ ತಲಾಖ್ ಕೇವಲ ಒಂದು ನಿರ್ದಿಷ್ಟ ಸಮುದಾಯಕ್ಕೆ ಸಂಬಂಧಿಸಿದ್ದು ಎಂಬಂತೆ ಬಿಂಬಿಸಿ, ಜನರ ಹಾದಿ ತಪ್ಪಿಸಬೇಡಿ ಎಂದು ಕಾಂಗ್ರೆಸ್ ಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.
ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದ ನಂತರ ಮಂಗಳವಾರ ಮೊದಲ ಬಾರಿಗೆ ಸಂಸತ್ತಿನಲ್ಲಿ ಮಾತನಾಡಿದ ಮೋದಿ, ತ್ರಿವಳಿ ತಲಾಖ್ ನಿಷೇಧ ಕಾಯ್ದೆ, ಮಹಿಳೆಯರ ಸಬಲೀಕರಣಕ್ಕೆ, ಅವರಿಗೆ ನ್ಯಾಯ ನೀಡಲು ಬದ್ಧವಾಗಿದೆ. ಕಾಂಗ್ರೆಸ್ಸಿಗೆ ಸಹ ಈ ಕಾಯ್ದೆಯನ್ನು ಜಾರಿಗೆ ತರಲು ಎರಡೆರಡು ಬಾರಿ ಅವಕಾಶ ಸಿಕ್ಕಿತ್ತು. ಆದರೆ ಆ ಎರಡು ಅವಕಾಶವನ್ನೂ ಕಾಂಗ್ರೆಸ್ ಕಳೆದುಕೊಂಡಿತ್ತು ಎಂದರು.
ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಐವತ್ತರ ದಶಕದಲ್ಲೇ ಕಾಂಗ್ರೆಸ್ ಗೆ ಅವಕಾಶವಿತ್ತು. ಆದರೆ ಆ ಅವಕಾಶವನ್ನು ಅದು ಕಳೆದುಕೊಂಡಿತು, ಅದರ ಬದಲಾಗಿ ಹಿಂದು ಕೋಡ್ ಬಿಲ್ ಪರಿಚಯಿಸಿ ಕೈ ತೊಳೆದುಕೊಂಡಿತು ಎಂದು ಮೋದಿ ಲೇವಡಿ ಮಾಡಿದರು.

ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡಿಸಲಾಗಿದ್ದು, ರಾಜ್ಯ ಸಭೆಯಲ್ಲಿ ಅದಕ್ಕೆ ಅನುಮೋದನೆ ದೊರಕಬೇಕಿದೆ. ಎನ್ ಡಿಎ ಅಧಿಕಾರಕ್ಕೆ ಬರುತ್ತಿದ್ದಂತೆಯೇ ತ್ರಿವಳಿ ತಲಾಖ್ ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದನ್ನು ತನ್ನ ಮೊದಲ ಆದ್ಯತೆಯನ್ನಾಗಿ ಇರಿಸಿಕೊಂಡಿದೆ.












Click it and Unblock the Notifications