ಈ ಮೌನವ ತಾಳೆನು! ಅಕ್ಬರ್ ಪ್ರಕರಣದಲ್ಲಿ ಮೋದಿಗೆ ಸ್ವಾಮಿ ಕುಟುಕು!
Recommended Video
ನವದೆಹಲಿ, ಅಕ್ಟೋಬರ್ 13: 'ಕೇಂದ್ರ ಸಚಿವ ಎಂಜೆ ಅಕ್ಬರ್ ಅವರ ವಿರುದ್ಧ ಬಂದಿರುವ ಅತ್ಯಾಚಾರ ಆರೋಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಕ್ರಿಯೆ ನೀಡಬೇಕು' ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.
ಮಾಜಿ ಸಂಪಾದಕರೂ ಆಗಿರುವ ಎಂ ಜೆ ಅಕ್ಬರ್ ಅವರ ವಿರುದ್ಧ ಪ್ರಿಯಾ ರಮಣಿ ಎಂಬುವವರು ಎಂಜೆ ಅಕ್ಬರ್ ಅವರ ವಿರುದ್ಧ ಟ್ವಿಟ್ಟರ್ ನಲ್ಲಿ ಮೀಟೂ ಅಭಿಯಾನದ ಮೂಲಕ ದನಿ ಎತ್ತಿದ್ದರು. ನಂತರ ಅನೇಕ ಮಹಿಳೆಯರು ಎಂಜೆ ಅಕ್ಬರ್ ಅವರ ವಿರುದ್ಧ ಟ್ವೀಟ್ ಮಾಡಿದ್ದರು.
ಕೇಂದ್ರ ಸಚಿವ ಎಂಜೆ ಅಕ್ಬರ್ ವಿರುದ್ದ ಲೈಂಗಿಕ ಕಿರುಕುಳ ಆರೋಪ
ವಿವಿಧ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ, ಸಂಪಾದಕರಾಗಿದ್ದ ಸಮಯದಲ್ಲಿ ಎಂಜೆ ಅಕ್ಬರ್ ಅವರು ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದು ಆರೋಪ. ಆದರೆ ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ ಸೊಲ್ಲೆತ್ತುತ್ತಿಲ್ಲ ಎಂಬುದು ವಿಪಕ್ಷಗಳಿಗೆ ಟೀಕಿಸಲು ಮೃಷ್ಟಾನ್ನ ಭೋಜನ ಬಡಿಸಿದಂತಾಗಿದೆ! ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರ್ಕಾರಕ್ಕೇ ಒಳ್ಳೆಯದು ಎಂದು ಸ್ವಾಮಿ ಹೇಳಿದ್ದಾರೆ.
ಈ ಮೌನವ ತಾಳೆನು!
ಎಂಜೆ ಅಕ್ಬರ್ ಅವರ ವಿರುದ್ಧ ಕೇವಲ ಒಬ್ಬ ಮಹಿಳೆಯಲ್ಲ, ಹಲವರು ಆರೋಪ ಮಾಡಿದ್ದಾರೆ. ಆದ್ದರಿಂದ ಈ ವಿಷಯವನ್ನು ಸುಮ್ಮನೆ ಬಿಡಬಾರದು, ನಿರ್ಲಕ್ಷ್ಯಿಸಬಾರದು. ಪ್ರಧಾನಿ ನರೇಮದ್ರ ಮೋದಿಯವರ ಪ್ರತಿಕ್ರಿಯೆಯನ್ನು ದೇಶದ ಜನ ನಿರೀಕ್ಷಿಸುತ್ತಿದ್ದಾರೆ. ಅವರು ಈ ಕುರಿತು ಮಾತನಾಡಲೇಬೇಕು ಎಂದು ಸ್ವಾಮಿ ಆಗ್ರಹಿಸಿದ್ದಾರೆ. ಪ್ರಧಾನಿಯವರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದರೆ ಪ್ರಕರಣಕ್ಕೆ ಒಂದು ಸ್ಪಷ್ಟ ಚಿತ್ರಣ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.
ಎಂಜೆ ಅಕ್ಬರ್ ವಿರುದ್ಧ ಲೈಂಗಿಕ ಶೋಷಣೆ ಆರೋಪ, ಅಂತರ ಕಾಯ್ದುಕೊಂಡ ಸರಕಾರ
ಮೀಟೂ ಅಭಿಯಾನಕ್ಕೆ ಬೆಂಬಲ
ನಾನಂತೂ ಮೀಟೂ ಅಭಿಯಾನವನ್ನು ಬೆಂಬಲಿಸುತ್ತೇನೆ. ಎಷ್ಟೋ ವರ್ಷಗಳ ನಂತರ ಈ ಮಹಿಳೆಯರೆಲ್ಲ ದನಿ ಎತ್ತಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ಆ ಸಂದರ್ಭದಲ್ಲಿ ದನಿ ಎತ್ತುವುದಕ್ಕೆ ಸಾಧ್ಯವಿಲ್ಲದಂಥ ಅಸಹಾಯಕ ಪರಿಸ್ಥಿತಿ ಇದ್ದಿರಬಹುದು. ಆದ್ದರಿಂದ ಅವರು ಮಾತನಾಡಲಿಲ್ಲ. ಈಗ ಜಗತ್ತು ಬದಲಾಗಿದೆ. ಆದ್ದರಿಂದ ಅವರು ತಮ್ಮ ನೋವನ್ನು ಹೊರಹಾಕಿದ್ದಾರೆ ಎಂದು ಸ್ವಾಮಿ ಮೀಟೂ ಅಭಿಯಾನದಲ್ಲಿ ದೌರ್ಜನ್ಯದ ವಿರುದ್ಧ ದನಿ ಎತ್ತಿದ ಮಹಿಳೆಯರ ಪರ ನಿಂತಿದ್ದಾರೆ.
'ಸಂಸ್ಕಾರಿ'ಯಿಂದ ಅತ್ಯಾಚಾರ! ಸ್ಫೋಟಕ ಸುದ್ದಿ ಹೊರಹಾಕಿದ ವಿನ್ತಾ ನಂದಾ
ಎಂಜೆ ಅಕ್ಬರ್ ಗೆ ಗೇಟ್ ಪಾಸ್?!
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿರುವ ಎಂಜೆ ಅಕ್ಬರ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವ ತೀರ್ಮಾನಕ್ಕೆ ಬಿಜೆಪಿ ಬಂದರೂ ಅಚ್ಚರಿಯೇನಿಲ್ಲ. ಏಕೆಂದರೆ ಇನ್ನು ಕೆಲವೇ ದಿನಗಳಲ್ಲಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಜೊತೆಗೆ ಆರೇಳು ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಳಂಕಿತರನ್ನು ಸಂಪುಟದಲ್ಲಿಟ್ಟುಕೊಳ್ಳುವುದು ಕೇಂದ್ರ ಸರ್ಕಾರಕ್ಕೂ ಶ್ರೇಯಸ್ಕರವಲ್ಲ. ಆದರೆ ಅಕ್ಬರ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ಇದುವರೆಗೂ ಬಿಜೆಪಿಯ ಯಾವುದೇ ನಾಯಕರು ಸ್ಪಷ್ಟ ಮಾಹಿತಿ ನೀಡಿಲ್ಲ.
ದಪ್ಪ, ಕೊಳಕ ಮಹಿಳೆಯರಿಂದ ಲೈಂಗಿಕ ದೌರ್ಜನ್ಯದ ಆರೋಪ : ಅಭಿಜಿತ್
ಸಂದಿಗ್ಧದಲ್ಲಿ ಬಿಜೆಪಿ?
ಅಕಸ್ಮಾತ್ ಅಕ್ಬರ್ ಅವರನ್ನು ಹುದ್ದೆಯಿಂದ ಇಳಸಿದರೂ, ಆರೋಪ ಸತ್ಯ ಎಮದು ಒಪ್ಪಿಕೊಂಡಂತಾಗುತ್ತದೆ. ಆದ್ದರಿಂದ ಬಿಜೆಪಿ ಸಂದಿಗ್ಧಕ್ಕೆ ಸಿಲುಕಿದೆ. ಅಕ್ಬರ್ ಅವರ ವಿರುದ್ಧ ಇದುವರೆಗೂ ಯಾವುದೇ ಅಧಿಕೃತ ದೂರು ದಾಖಲಾಗಿರಲ್ಲದಿರುವುದರಿಂದ ಈಗಲೇ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವ ತುರ್ತು ನಿರ್ಧಾರಕ್ಕೆ ಬಿಜೆಪಿ ಬರುವ ಸಂಭವ ಕಡಿಮೆ.
ಸರ್ಕಾರಕ್ಕೆ ಮುಜುಗರವಿಲ್ಲ!
ಕೆಲವು ಮೂಲಗಳ ಪ್ರಕಾರ ಸರ್ಕಾರ, ತಾನು ಈ ಪ್ರಕರಣದಲ್ಲಿ ಮುಜುಗರ ಅನುಭವಿಸುವ ಅಗತ್ಯವಿಲ್ಲ ಎಂದಿದೆ. ಏಕೆಂದರೆ ಅಕ್ಬರ್ ಅವರು ಪತ್ರಕರ್ತರಾಗಿದ್ದಾಗ ನಡೆದ ಪ್ರಕರಣಗಳು ಎಂಬ ಆರೋಪವಿದೆ. ಸಚಿವರಾದ ಮೇಲೆ ಬಂದ ಆರೋಪವಲ್ಲವಾದ್ದರಿಂದ ಸರ್ಕಾರವೇಕೆ ಮುಜುಗರ ಅನುಭವಿಸಬೇಕು ಎಂಬುದು ಕೆಲವು ನಾಯಕರ ಪ್ರಶ್ನೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ಮನೇಕಾ ಗಾಂಧಿಯವರು ಮಾತ್ರ ಈ ಕುರಿತು ತನಿಖೆ ನಡೆಯಲಿ ಎಂದಿದ್ದು ಗಮನಾರ್ಹ. ಪ್ರಿಯಾ ರಮಣಿ ಅವರೊಂದಿಗೆ ಪ್ರೇರಣಾ ಸಿಂಗ್ ಬಿಂದ್ರಾ, ಸುಜಾತಾ ಆನಂದನ್, ಶುಮಾ ರಹಾ, ಹರೀಂದರ್ ಬವೇಜಾ ಮುಂತಾದ ಅನೇಕ ಮಹಿಳೆಯರು ಎಂಜೆ ಅಕ್ಬರ್ ಅವರ ವಿರುದ್ಧ ಟ್ವೀಟ್ ಮಾಡಿದ್ದರು.