ದೇಶದ ಕೊರೊನಾ ಸ್ಥಿತಿಗತಿ; ಮೋದಿ ಉನ್ನತ ಮಟ್ಟದ ಸಭೆ
ನವದೆಹಲಿ, ಸೆಪ್ಟೆಂಬರ್ 10: ದೇಶದಲ್ಲಿ ಕೊರೊನಾ ಪ್ರಕರಣಗಳು ಹಾಗೂ ಕೊರೊನಾ ಲಸಿಕೆ ಅಭಿಯಾನದ ಸ್ಥಿತಿಗತಿ ಕುರಿತ ಪರಿಶೀಲನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ವರ್ಚುಯಲ್ ಆಗಿ ಪ್ರಧಾನಿ ಮೋದಿ ಸಭೆ ನಡೆಸಿದ್ದು, ಸಭೆಯಲ್ಲಿ ಕೇಂದ್ರ ಸಚಿವರು, ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹಾಗೂ ಇತರೆ ಉನ್ನತಾಧಿಕಾರಿಗಳು ಭಾಗಿವಹಿಸಿ ಮಾಹಿತಿ ಹಂಚಿಕೊಂಡಿದ್ದಾರೆ.
ಕೆಲವು ದಿನಗಳಿಂದ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಕೊರೊನಾ ಪ್ರಕರಣಗಳು ಏರಿಕೆಯಾಗಿದ್ದು, ದೇಶದಲ್ಲಿ ಸಂಭಾವ್ಯ ಕೊರೊನಾ ಮೂರನೇ ಅಲೆ ಎಚ್ಚರಿಕೆ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದೆ. ಇದೇ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಮೂರನೇ ಅಲೆ ಎಚ್ಚರಿಕೆಯನ್ನು ತಜ್ಞರು ನೀಡಿದ್ದು, ಪ್ರತಿನಿತ್ಯ ಆರು ಲಕ್ಷ ಪ್ರಕರಣಗಳು ದಾಖಲಾಗುವ ಅಂದಾಜನ್ನು ನೀಡಿದ್ದಾರೆ. ಹೀಗಾಗಿ ಕೊರೊನಾ ನಿಯಂತ್ರಣ ಸಂಬಂಧ ಸಿದ್ಧತೆಗಳ ಕುರಿತು ಚರ್ಚೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳು ಸೋಂಕಿಗೆ ತುತ್ತಾಗುವ ಸಾಧ್ಯತೆಯನ್ನು ತಜ್ಞರು ವಿವರಿಸಿದ್ದು, ಎಲ್ಲಾ ರಾಜ್ಯಗಳಲ್ಲಿ ಅವಶ್ಯಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.
ಆರೋಗ್ಯ ಸಚಿವಾಲಯದ ಮಾಹಿತಿ
ಗುರುವಾರವಷ್ಟೆ ಕೊರೊನಾ ಲಸಿಕೆ ದಕ್ಷತೆ ಕುರಿತಂತೆ ಆರೋಗ್ಯ ಸಚಿವಾಲಯ ಮಾಹಿತಿ ಬಿಡುಗಡೆಗೊಳಿಸಿತ್ತು. ದೇಶದಲ್ಲಿ ಇನ್ನೂ 35 ಜಿಲ್ಲೆಗಳಲ್ಲಿ ಸೋಂಕಿನ ಪಾಸಿಟಿವಿಟಿ ದರ 10% ಇದೆ. 30 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ 5-10% ಇದೆ ಎಂದು ಉಲ್ಲೇಖಿಸಿತ್ತು. ಹೀಗಾಗಿ ಜನರು ನಿಯಮ ಪಾಲನೆಯಲ್ಲಿ ಮೈಮರೆಯುವಂತಿಲ್ಲ ಎಂದು ಸಲಹೆ ನೀಡಿತ್ತು.
ಇದರೊಂದಿಗೆ, ಕೊರೊನಾ ಲಸಿಕೆಯ ಒಂದು ಡೋಸ್, ಸೋಂಕಿನಿಂದ ಸಾವನ್ನಪ್ಪುವ ಸಾಧ್ಯತೆಯನ್ನು 96.6% ಕಡಿಮೆ ಮಾಡಿದರೆ, ಎರಡು ಡೋಸ್ಗಳ ಲಸಿಕೆ 97.5% ಪರಿಣಾಮಕಾರಿಯಾಗಿವೆ ಎಂದು ತಿಳಿಸಿದೆ.
ಈ ವರ್ಷದ ಏಪ್ರಿಲ್ ಹಾಗೂ ಆಗಸ್ಟ್ ತಿಂಗಳಿನಲ್ಲಿ, ಅಂದರೆ ಕೊರೊನಾ ಎರಡನೇ ಅಲೆ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿನ ದತ್ತಾಂಶಗಳನ್ನು ವಿಶ್ಲೇಷಣೆ ನಡೆಸಿದ್ದು, ಆರೋಗ್ಯ ಸಚಿವಾಲಯ ವಿವರಗಳನ್ನು ಹಂಚಿಕೊಂಡಿದೆ.

ದೇಶದಲ್ಲಿನ ಲಸಿಕಾ ಅಭಿಯಾನದ ಸ್ಥಿತಿಗತಿ ಕುರಿತು ಗುರುವಾರ ವಿವರಣೆ ನೀಡಿದ ಸಚಿವಾಲಯ, ದೇಶದ 58% ಜನಸಂಖ್ಯೆ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 18% ಜನಸಂಖ್ಯೆ ಎರಡೂ ಡೋಸ್ಗಳ ಲಸಿಕೆ ಪಡೆದುಕೊಂಡಿದ್ದಾರೆ. ಒಟ್ಟಾರೆ ಲಸಿಕೆ ಪಡೆದವರ ಸಂಖ್ಯೆ 72 ಕೋಟಿಯನ್ನು ದಾಟಿದೆ ಎಂದು ತಿಳಿಸಿದೆ.
ಕಳೆದ ವಾರ ದೇಶದಲ್ಲಿ ದಾಖಲಾದ ಪ್ರಕರಣಗಳಲ್ಲಿ ಕೇರಳವೊಂದರಿಂದಲೇ 68.59% ಪ್ರಕರಣಗಳು ದಾಖಲಾಗಿವೆ ಎಂದಿದೆ.
ಶುಕ್ರವಾರ ದೇಶದಲ್ಲಿ ದಾಖಲಾದ ಕೊರೊನಾ ಪ್ರಕರಣಗಳು
ಶುಕ್ರವಾರ ಭಾರತದಲ್ಲಿ 34,973 ಹೊಸ ಕೋವಿಡ್- 19 ಪ್ರಕರಣ ಪತ್ತೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 37,681 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 260 ಮಂದಿ ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,90,646 ಆಗಿದೆ. ದೇಶದಲ್ಲಿ ಇದುವರೆಗೂ ಒಟ್ಟಾರೆ 3,31,74,954 ಪ್ರಕರಣಗಳು ದಾಖಲಾಗಿದ್ದು, 3,23,42,299 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದುವರೆಗೂ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 4,42,009 ಆಗಿದೆ. 72,37,84,586 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.
ಮೋದಿ ಹುಟ್ಟುಹಬ್ಬದ ದಿನ ಗರಿಷ್ಠ ಲಸಿಕೆ ವಿತರಣೆ ಯೋಜನೆ: ಮೋದಿ ಹುಟ್ಟು ಹಬ್ಬದ ದಿನ, ಅಂದರೆ ಸೆಪ್ಟೆಂಬರ್ 17ರಂದು ದೇಶದಲ್ಲಿ ಒಂದು ದಿನದಲ್ಲಿ ಅತಿ ಹೆಚ್ಚು ಕೊರೊನಾ ಲಸಿಕೆಗಳನ್ನು ನೀಡಲು ಪಕ್ಷ ಯೋಜನೆ ರೂಪಿಸಿದೆ ಎಂದು ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ ಘೋಷಿಸಿದ್ದಾರೆ.












Click it and Unblock the Notifications