ಈರುಳ್ಳಿ ಬೆಲೆ ಏರಿಕೆ ಸರ್ಕಾರ ಉರುಳಿಸುತ್ತದೆಯೇ?
ನವದೆಹಲಿ, ಅ.24: ದೇಶದ ವಿವಿಧ ಭಾಗಗಳಲ್ಲಿ ಅತಿವೃಷ್ಟಿ-ಅನಾವೃಷ್ಟಿಯಿಂದಾಗಿ ಈ ಬಾರಿ ಈರುಳ್ಳಿ ಬೆಳೆ ಬಹುತೇಕ ಹಾಳಾಗಿದ್ದು, ಹೆಚ್ಚಿನ ಈರುಳ್ಳಿ ಮಾರುಕಟ್ಟೆಗೆ ಬರುವುದೆಂಬ ನಿರೀಕ್ಷೆ ಇಲ್ಲ. ಆದರೂ ಈರುಳ್ಳಿ ಬೆಲೆ ಮುಂದಿನ ಎರಡು-ಮೂರು ವಾರಗಳಲ್ಲಿ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಘೋಷಿಸಿದ್ದಾರೆ.
ಈ ನಡುವೆ ಈರುಳ್ಳಿ ಬೆಲೆ ಏರಿಳಿತದಿಂದ ಇತಿಹಾಸ ಮರುಕಳಿಸುತ್ತದೆ ಎಂಬ ಮಾತು ಮತ್ತೆ ಚರ್ಚೆ ಗೀಡಾಗುತ್ತಿದೆ. 1998ರಲ್ಲಿ ಈರುಳ್ಳಿ ಬೆಲೆ 60 ರು ಪ್ರತಿ ಕೆಜಿ ಆಗುತ್ತಿದ್ದಂತೆ ಬಿಜೆಪಿ ಸರ್ಕಾರ ಕುಸಿದಿತ್ತು ಸಾರ್ವಜನಿಕ ಆಕ್ರೋಶ ತಣ್ಣಗಾಗಿಸಲು ಶೀಲಾ ದೀಕ್ಷಿತ್ ಅಧಿಕಾರಕ್ಕೆ ಬಂದರು. ಈಗ ಶೀಲಾ ದೀಕ್ಷಿತ್ ಅವರು ಅದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ದೆಹಲಿಯಲ್ಲಿ ಈರುಳ್ಳಿ ಬೆಲೆ 100 ರು ಪ್ರತಿ ಕೆಜಿ ಗಡಿ ಮುಟ್ಟಿ ನಂತರ ತ್ವರಿತವಾಗಿ 30 ರು ಕಳೆದುಕೊಂಡು 70 ರು ಇಳಿದಿದ್ದು ಸಿಎಂ ಶೀಲಾ ಅವರ ಆತಂಕ ಇನ್ನಷ್ಟು ಹೆಚ್ಚಿಸಿದೆ. ಶೀಘ್ರವೇ ಕೃಷಿ ಸಚಿವ ಶರದ್ ಪವಾರ್ ಹಾಗೂ ಕೆವಿ ಥಾಮಸ್ ಅವರನ್ನು ಭೇಟಿ ಮಾಡಿ ಪರಿಹಾರಕ್ಕಾಗಿ ಮೊರೆ ಇಡುವ ಸಾಧ್ಯತೆ ಕಂಡು ಬಂದಿದೆ.
ಬೆಳೆ ನಾಶ ಕಾರಣ: ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಉತ್ಪಾದಿಸುವ ಮಹಾರಾಷ್ಟ್ರದಲ್ಲಿ ಅತಿವೃಷ್ಟಿಯಿಂದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದೆ. ರೈತರಿಗೆ ಪರಿಹಾರಕ್ಕಾಗಿ ಕೇಂದ್ರವು ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ 921 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಪವಾರ್ ತಿಳಿಸಿದ್ದಾರೆ.
ಇದೇ ವೇಳೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಉದ್ಯಮ ಸಚಿವ ಆನಂದ್ ಶರ್ಮ, ಮುಂಬರುವ ಕೆಲವು ವಾರಗಳವರೆಗೆ ಈರುಳ್ಳಿ ಮಾರುಕಟ್ಟೆ ಬೆಲೆ ಸ್ಥಿರವಾಗಿರಲಿದೆ ಎಂದು ಹೇಳಿದ್ದಾರೆ. ಸರ್ಕಾರಕ್ಕೆ ಕಣ್ಣೀರು ತರಿಸುತ್ತಿರುವ ಈರುಳ್ಳಿಯ ಕಥೆ ಮುಂದೆ ಓದಿ

ಚೀನಾದಿಂದ ಆಮದು
ದೇಶದೆಲ್ಲೆಡೆ ಗಗನಕ್ಕೇರಿರುವ ಈರುಳ್ಳಿ ಬೆಲೆ ನಿಯಂತ್ರಿಸಲು ಚೀನಾದಿಂದ ಈರುಳ್ಳಿ ಆಮದು ಮಾಡಿಕೊಳ್ಳಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಜತೆಗೆ ಕಾಳಸಂತೆಕೋರರ ಮೇಲೆ ನಿಗಾ ಇಡುವಂತೆಯೂ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ.
ಈ ಮಧ್ಯೆ ನಾಫೆಡ್ ಈರುಳ್ಳಿ ಆಮದಿಗಾಗಿ ಜಾಗತಿಕ ಟೆಂಡರ್ ಕರೆದಿದೆ ಹಾಗೂ ಈರುಳ್ಳಿಯನ್ನು ಅಕ್ರಮವಾಗಿ ದಾಸ್ತಾನು ಮಾಡುವವರ ವಿರುದ್ಧ ಎಸ್ಮಾ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಹೊಸ ಈರುಳ್ಳಿ ನಿರೀಕ್ಷೆ
ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಹೊಸ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ. ಹೊರರಾಜ್ಯಗಳಲ್ಲಿ ಬೇಡಿಕೆ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಅಲ್ಲಿಗೆ ರವಾನೆಯಾಗುತ್ತಿದೆ. ಇದರಿಂದ ಇಲ್ಲಿಯೂ ಬೆಲೆ ತುಸು ಏರಿಕೆ ಆಗಿರಬಹುದು. ನವೆಂಬರ್ ವರೆಗೂ ರಾಜ್ಯದಲ್ಲಿ ಹೊಸ ಈರುಳ್ಳಿ ಮಾರುಕಟ್ಟೆಗೆ ಬರಲಿದೆ. ಅಲ್ಲಿ ತನಕ ದಿಲ್ಲಿ ಸರ್ಕಾರ ಉಸಿರಾಡಬಹುದು ಎನ್ನಲಾಗಿದೆ.

ರಾಜ್ಯಗಳ ಮೇಲೆ ಪರಿಣಾಮ
ರಾಜ್ಯದಲ್ಲಿ ಈರುಳ್ಳಿ ಬೆಲೆ ನಿಯಂತ್ರಿಸಲು ಹೊರ ರಾಜ್ಯಗಳಿಗೆ ಈರುಳ್ಳಿ ಸಾಗಣೆ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ, ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಸರಕಾರ ಮಾರುಕಟ್ಟೆ ಮಧ್ಯ ಪ್ರವೇಶಿಸಿ ಬೆಂಬಲ ಬೆಲೆ ಘೋಷಿಸಬಹುದು. ಆದರೆ ಬೆಲೆ ಏರಿಕೆಯಾದಾಗ ಅದನ್ನು ನಿಯಂತ್ರಿಸಲು ಯಾವುದೇ ವ್ಯವಸ್ಥೆ ಇಲ್ಲ. ಈರುಳ್ಳಿ ರಫ್ತು ನಿಷೇಧ ಹೇರುವ ಅಧಿಕಾರ ಕೇಂದ್ರ ಸರಕಾರಕ್ಕಿದೆ.

ಹೆಚ್ಚು ರಫ್ತು ಕಾರಣವೇ
ಕೇವಲ ಆರು ತಿಂಗಳು ಸಂಗ್ರಹಿಸಿಡಬಹುದಾದ ಈರುಳ್ಳಿ ಬೇಸಿಗೆ ಬೆಳೆ ಸಂಪೂರ್ಣ ಖಾಲಿಯಾಗಿದೆ. ರಫ್ತು ಮಾಡುವ ಮತ್ತು ಐಷಾರಾಮಿ ಹೋಟೆಲುಗಳಿಗೆ, ಆಹಾರ ಸಂಸ್ಕರಣ ಉದ್ಯಮಕ್ಕೆ ಸಂದಾಯವಾಗುವ ಈರುಳ್ಳಿ ಬೆಲೆ ಸಿಕ್ಕಾಪಟ್ಟೆ ದುಬಾರಿ. ಈಗ ಖಾರಿಫ್ ಬೆಳೆ ಕೂಡ ಮಳೆಯಿಂದಾಗಿ ಕೊಳೆತುಹೋಗಿದೆ. ಹೀಗಾಗಿ ಬೆಲೆ ಏರಿಕೆ ನಿರೀಕ್ಷಿತ

ಮಾರುಕಟ್ಟೆಯಲ್ಲಿ ಅಲಭ್ಯತೆ
ಕರ್ನಾಟಕದ ಚಿತ್ರದುರ್ಗ, ಮಹಾರಾಷ್ಟ್ರದ ಬಹುತೇಕ ಭಾಗ ಸೇರಿದಂತೆ ರಾಜಸ್ಥಾನದ ಆಳ್ವಾರ್, ಮಧ್ಯಪ್ರದೇಶದ ಇಂದೋರ್, ವಾರಣಾಸಿ, ಔರಂಗಾಬಾದ್ ಮುಂತಾದ ಪ್ರದೇಶಗಳಿಂದ ಈರುಳ್ಳಿ ರಫ್ತನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ದೇಶದ ಪ್ರಮಖ ನಗರಗಳ ಮಾರುಕಟ್ಟೆಗೆ ಈರುಳ್ಳಿ ಆಗಮಿಸುತ್ತಿಲ್ಲ.

ಮಂಗಳೂರಲ್ಲಿ ಕಮ್ಮಿ
ದೀಪಾವಳಿ ವೇಳೆಗೆ ಈರುಳ್ಳಿ ಬೆಲೆ 100 ರೂ. ಆಗಬಹುದು ಎಂಬ ವರದಿ ಹಿನ್ನೆಲೆಯಲ್ಲಿ ಮಂಗಳೂರು ತಾಲೂಕಿನ ಗ್ರಾಮಾಂತರ ಪ್ರದೇಶದ ಅಂಗಡಿಗಳಲ್ಲಿ ಬುಧವಾರ ದಿಢೀರನೆ ಬೆಲೆ ಏರಿಕೆಯಾಗಿದೆ. ಆದರೆ ಮಂಗಳೂರು ನಗರದಲ್ಲಿ ಏರುಪೇರು ಕಂಡು ಬಂದಿಲ್ಲ. ಬಜಪೆಯಲ್ಲಿ ಈರುಳ್ಳಿ ಬೆಲೆ 70 ರೂ. ಇತ್ತು. ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ನಲ್ಲಿ ಚಿಲ್ಲರೆ ಮಾರಾಟ ಬೆಲೆ 60 ರೂ. ಇದ್ದು, ರಖಂ ಬೆಲೆ 52 ರೂ. ಇತ್ತು.

ಭಾರತಕ್ಕೆ ಸಮಸ್ಯೆ ಏಕೆ
ರಷ್ಯಾ ಬಿಟ್ಟರೆ ಭಾರತವೇ ಅತಿ ಹೆಚ್ಚು ಉತ್ಪಾದನೆ ಮಾಡುವ ರಾಷ್ಟ್ರವಾಗಿದ್ದು, ಈ ಬಾರಿ ಸಮಸ್ಯೆ ಉಂಟಾಗಿರುವುದು ಅಕಾಲಿಕ ಮಳೆಯಿಂದ ಎನ್ನಲಾಗಿದೆ. ದಲ್ಲಾಳಿಗಳ ಕಾಟ, ಮಾರುಕಟ್ಟೆಯಲ್ಲಿ ದರ ವ್ಯತ್ಯಯ ಇದ್ದದ್ದೇ. ಈರುಳ್ಳಿ ರಫ್ತು ಪ್ರಮಾಣ ಕಡಿಮೆ ಕೂಡಾ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಇದೆಲ್ಲವೂ ದೆಹಲಿ ಸರ್ಕಾರಕ್ಕೆ ತಲೆ ನೋವಾಗಿದ್ದು, ಸಿಎಂ ಶೀಲಾ ಯಾವ ಪರಿಹಾರ ಕಂಡು ಕೊಳ್ಳಲಿದ್ದಾರೆ ಕಾದು ನೋಡಬೇಕಿದೆ.












Click it and Unblock the Notifications