ಪೂಲನ್ ದೇವಿ ಹತ್ಯೆಗೈದ ರಾಣಾಗೆ ಜೀವಾವಧಿ ಶಿಕ್ಷೆ
ನವದೆಹಲಿ, ಆ.14: ಸಮಾಜವಾದಿ ಪಕ್ಷದ ಮಾಜಿ ಸಂಸದೆ ಹಾಗೂ ಚಂಬಲ್ ಡಕಾಯಿತರ ರಾಣಿಯೆಂದೇ ಗುರುತಿಸಿಕೊಂಡಿದ್ದ ಪೂಲನ್ ದೇವಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶೇರ್ಸಿಂಗ್ ರಾಣಾಗೆ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಗುರುವಾರ ತೀರ್ಪು ನೀಡಿದೆ.
ಐಪಿಸಿ ಸೆಕ್ಷನ್ 302 ಮತ್ತು 307ರ ಪ್ರಕಾರ ಶೇರ್ಸಿಂಗ್ ರಾಣಾ ಕೊಲೆ ಮಾಡಿರುವುದು ಸಾಬೀತಾಗಿರುವುದರಿಂದ ಆತನಿಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ದಂಡ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಶೇರ್ಸಿಂಗ್ ರಾಣಾ ಮೇಲೆ ಹೂಡಲಾಗಿದ್ದ ಶಸ್ತ್ರಾಸ್ತ್ರ ಕಾಯ್ದೆ ಅಪರಾಧ ಮತ್ತು ಕೊಲೆ ಪಿತೂರಿ ಸೇರಿದಂತೆ 10 ಪ್ರಕರಣಗಳಿಂದ ನ್ಯಾಯಾಲಯ ಆರೋಪ ಮುಕ್ತ ಗೊಳಿಸಿದೆ ಎಂದು ಸರ್ಕಾರಿ ಪರ ವಕೀಲ ಮನಿಷಾ ಶರ್ಮಾ ತಿಳಿಸಿದ್ದಾರೆ.
ನ್ಯಾಯಾಲಯವು ಈ ಪ್ರಕರಣವನ್ನು ಅಪರೂಪದಲ್ಲೇ ಅಪರೂಪ ಇಲ್ಲವೇ ಆರೋಪಿಯನ್ನು ನೇಣುಗಂಬಕ್ಕೆ ಹಾಕುವ ಬಗ್ಗೆ ಯೋಚನೆ ಮಾಡಲಿಲ್ಲ. ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಇದನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮನಿಷಾ ಶರ್ಮಾ ಹೇಳಿದರು.
1981ರಲ್ಲಿ ಉತ್ತರ ಪ್ರದೇಶದ ಚಂಬಲ್ಕಣಿವೆ ವ್ಯಾಪ್ತಿಯಲ್ಲಿ ಬರುವ ಬೆಹಮ್ ಎಂಬಲ್ಲಿ ಪೂಲನ್ದೇವಿ ಮತ್ತು ಆಕೆಯ ತಂಡ ನರಮೇಧ ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ ಶೇರ್ಸಿಂಗ್ ರಾಣಾ 2001 ಜುಲೈ 25ರಂದು ನವದೆಹಲಿಯ ಅಶೋಕ ರಸ್ತೆಯಲ್ಲಿರುವ 44ನೇ ಅಧಿಕೃತ ನಿವಾಸಕ್ಕೆ ನುಗ್ಗಿ ಗುಂಡಿಕ್ಕಿ ಕೊಲೆ ಮಾಡಿದ್ದ.

ಪೂಲನ್ ದೇವಿಯನ್ನು ಕೊಲೆ ಮಾಡಿದ ಬಳಿಕ ಈತ ದೆಹಲಿಯಿಂದ ತಲೆಮರೆಸಿಕೊಂಡು ಕೊಲ್ಕತ್ತಾಗೆ ಪ್ರಯಾಣಿಸಿದ್ದ. ಈತನನ್ನು ಬಂಧಿಸಲು ವಿಶೇಷ ತನಿಖಾ ತಂಡವನ್ನು ರಚಿಸಿದ ಬಳಿಕ ಬಂಧಿತನಾಗಿದ್ದ. 2006ರ ಏಪ್ರಿಲ್ ತಿಂಗಳಿನಲ್ಲಿ ಪೊಲೀಸರು ಬಂಧಿಸಿ ದೆಹಲಿಯ ತಿಹಾರ್ ಜೈಲಿಗೆ ಅಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ 171 ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಶಿಕ್ಷೆ ವಿಧಿಸಿತ್ತು.
ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಕೇಶವ್ ಚೌಹಾಣ್, ಅಮಿತ್ರಾಥಿ, ಪ್ರವೀಣ್ ಮಿಟ್ಟಲ್ ಅವರುಗಳಿಗೆ 2009ರಲ್ಲೇ ಜಾಮೀನು ನೀಡಲಾಗಿತ್ತು. ಮತ್ತೋರ್ವ ಆರೋಪಿ ಪ್ರದೀಪ್ ಕಳೆದ ನವೆಂಬರ್ನಲ್ಲಿ ತಿಹಾರ್ ಜೈಲಿನಲ್ಲಿದ್ದಾಗ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದ. 1981ರಲ್ಲಿ ಪೂಲನ್ ದೇವಿ ನಡೆಸಿದ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಆಕೆಯನ್ನು ಕೊಂದೆ ಠಾಕೂರರ ನಾಯಕ ಎಂದು ತನ್ನನ್ನು ತಾನು ಗುರುತಿಸಿಕೊಂಡಿದ್ದ ಶೇರ್ ಸಿಂಗ್ ಹೇಳಿಕೊಂಡಿದ್ದ.












Click it and Unblock the Notifications