ನೀವು ಏನೂ ಮಾಡದೇ ಉಳಿದರೆ ಜನ ಸಾಯುತ್ತಲೇ ಇರುತ್ತಾರೆ; ಕೇಂದ್ರಕ್ಕೆ ಕೋರ್ಟ್ ತರಾಟೆ
ನವದೆಹಲಿ, ಏಪ್ರಿಲ್ 29: ದೆಹಲಿಯಂತೆ ಎಷ್ಟು ರಾಜ್ಯಗಳು ಆಮ್ಲಜನಕ ಕೊರತೆ ಎದುರಿಸುತ್ತಿವೆ? ನೀವು ಹೀಗೇ ಏನೂ ಮಾಡದೇ ಉಳಿದರೆ ಜನರು ಸಾಯುತ್ತಲೇ ಇರುತ್ತಾರೆ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದೆ.
ದೆಹಲಿಗೆ ಒಂದು ದಿನವೂ ನಿಗದಿಪಡಿಸಿದಷ್ಟು ಆಮ್ಲಜನಕ ಪೂರೈಕೆ ಆಗಿಲ್ಲ ಎಂದು ಕೋರ್ಟ್ ಕಿಡಿಕಾರಿದೆ. ಈ ಮುನ್ನ ದೆಹಲಿಗೆ 490 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕವನ್ನು ಕೇಂದ್ರ ನಿಗದಿ ಪಡಿಸಿತ್ತು. ಈಗ ಈ ಸಂಖ್ಯೆಯ ಕಥೆ ಏನಾಗಿದೆ? 490 ಎಂಟಿ ಆಮ್ಲಜನಕ ಒದಗಿಸುವ ಭರವಸೆ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದೆ.
ಎರಡು ದಿನದಲ್ಲಿ 490 ಎಂಟಿ ಆಮ್ಲಜನಕ ಒದಗಿಸಿದರೆ, ಪರಿಸ್ಥಿತಿಯನ್ನು ತಹಬದಿಗೆ ತರಬಹುದು. ಆದರೆ ಇದೆಲ್ಲವೂ ಆಮ್ಲಜನಕ ಸರಬರಾಜು ಮೇಲೆ ಅವಲಂಬಿತವಾಗಿದೆ ಎಂದು ಹಿರಿಯ ವಕೀಲ ರಾಹುಲ್ ಮೆಹ್ರಾ ವರದಿ ಸಲ್ಲಿಸಿದ್ದಾರೆ.

ದೆಹಲಿಗೆ ಕೇಂದ್ರ 490 ಎಂಟಿ ಆಮ್ಲಜನಕ ನಿಗದಿಪಡಿಸಿತ್ತು. ಆದರೆ ಒಂದು ದಿನವೂ ಇಷ್ಟು ಆಮ್ಲಜನಕ ಪೂರೈಕೆಯಾಗಿಲ್ಲ ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಹಾಗೂ ರೇಖಾ ಪಲ್ಲಿ ಅವರ ಪೀಠವು ಕಿಡಿಕಾರಿದ್ದು, ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದಿತು.
ಭಾರತದಲ್ಲಿ ಮತ್ತೆ ಕೊರೊನಾ ಸ್ಫೋಟವಾಗಿದ್ದು, ಗುರುವಾರ 3,79,257 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನದಲ್ಲಿ 3645 ಮಂದಿ ಸಾವನ್ನಪ್ಪಿದ್ದಾರೆ, 2,69,507 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 1,83,76,524 ಕೊರೊನಾ ಸೋಂಕಿತರಿದ್ದಾರೆ, ಇದುವರೆಗೆ 1,50,86,878 ಮಂದಿ ಗುಣಮುಖರಾಗಿದ್ದಾರೆ. 30,84,814 ಪ್ರಕರಣಗಳು ಸಕ್ರಿಯವಾಗಿವೆ.












Click it and Unblock the Notifications