ಬಂದೂಕಿನೊಂದಿಗೆ ಓಡಾಡುವ ಜನರಿಗೆ ನಿರಾಯುಧ ಹುಡುಗಿ ಕಂಡರೇಕೆ ಭಯ; ದಿಶಾಗೆ ವಿಪಕ್ಷಗಳ ಬೆಂಬಲ
ನವದೆಹಲಿ, ಫೆಬ್ರುವರಿ 15: ಗ್ರೆಟಾ ಥನ್ಬರ್ಗ್ 'ಟೂಲ್ಕಿಟ್' ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾದ ಪರಿಸರ ಹೋರಾಟಗಾರ್ತಿ ದಿಶಾ ರವಿ ಪರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನಿಂತಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Recommended Video
"ಬಂದೂಕುಗಳೊಂದಿಗೆ ಓಡಾಡುವ ಜನರಿಗೆ ನಿರಾಯುಧ ಹುಡುಗಿಯನ್ನು ಕಂಡರೆ ಏಕೆ ಭಯ" ಎಂದು ಪ್ರಶ್ನಿಸಿದ್ದಾರೆ. ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಶಾ ರವಿ ಬಂಧನವಾಗಿದ್ದು, ಅವರ ಬಿಡುಗಡೆಗೆ ಒತ್ತಾಯ ಕೇಳಿಬಂದಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದಿಶಾ ಬಂಧನ ಖಂಡಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಮೇಲೆ ಹಿಂದೆಂದೂ ಕಂಡಿರದ ದಾಳಿ ಎಂದು ಖಂಡಿಸಿದ್ದಾರೆ. ಮುಂದೆ ಓದಿ...
5 ದಿನಗಳ ಪೊಲೀಸ್ ವಶಕ್ಕೆ ದಿಶಾ ರವಿ, ಕೋರ್ಟ್ನಲ್ಲಿ ಕಣ್ಣೀರಿಟ್ಟ ಪರಿಸರ ಹೋರಾಟಗಾರ್ತಿ
ದಿಶಾರವಿ ಪರ ನಿಂತ ವಿಪಕ್ಷ ನಾಯಕರು
21 ವರ್ಷದ ದಿಶಾ ರವಿ ಬಂಧನ ಪ್ರಜಾಪ್ರಭುತ್ವದ ಮೇಲೆ ದಾಳಿ. ರೈತರಿಗೆ ಬೆಂಬಲ ನೀಡುವುದು ಅಪರಾಧವಲ್ಲ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಯುವಜನ ರೈತರಿಗೆ ಬೆಂಬಲವಾಗಿ ನಿಲ್ಲುವುದು ನಿಮಗೆ ಸಹಿಸಿಕೊಳ್ಳಲು ಆಗುತ್ತಿಲ್ಲವೇ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಕೇಂದ್ರದ ಮೇಲೆ ವಾಗ್ದಾಳಿ ಮಾಡಿದ್ದಾರೆ.
ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಪ್ರಶ್ನೆ
ಒಂದು ಸಣ್ಣ ಟ್ವೀಟ್ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಷ್ಟು ದೇಶ ದುರ್ಬಲವಾಗಿದೆಯೇ? ಯುವಜನತೆಯು ರೈತರೊಂದಿಗೆ ನಿಲ್ಲುವುದನ್ನು ಸಹಿಸಲಾಗದಷ್ಟು ರಾಜ್ಯ ಅಸಹಿಷ್ಣುತೆ ಹೊಂದಿದೆಯೇ? ಈ ಬದಲಾವಣೆಯನ್ನೇ ಮೋದಿ ಬಯಸಿದ್ದೇ ಎಂದು ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿ ದಿಶಾ ರವಿ
ಟೂಲ್ ಕಿಟ್ ವಿಚಾರವಾಗಿ ದೆಹಲಿ ಪೊಲೀಸರ ವಿಶೇಷ ಸೈಬರ್ ಕ್ರೈಂ ಘಟಕ ಶನಿವಾರ ದಿಶಾ ಅವರನ್ನು ಬಂಧಿಸಿ ದೆಹಲಿಗೆ ಕರೆದೊಯ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನಂತರ ದಿಶಾ ಅವರನ್ನು ಐದು ದಿನಗಳ ಕಸ್ಟಡಿಗೆ ನೀಡಲಾಗಿದೆ.
ಖಲಿಸ್ತಾನ ಪರ ಚಳವಳಿ ನಂಟಿನ ಆರೋಪ
ದಿಶಾಗೆ ಖಲಿಸ್ತಾನ ಪರ ಚಳವಳಿಯೊಂದಿಗೆ ಇದೆ ಎನ್ನಲಾದ ನಂಟನ್ನು ಖಾತರಿಪಡಿಸಿಕೊಳ್ಳಲು ಮತ್ತು ಭಾರತದ ವ್ಯಾಪಕ ಸಂಚಿನ ವಿಚಾರದಲ್ಲಿ ದಿಶಾ ರವಿ ವಿಚಾರಣೆ ಅಗತ್ಯ ಎಂದು ಪೊಲೀಸರು ಬಂಧಿಸಿದ್ದರು. ಆದರೆ ಟೂಲ್ ಕಿಟ್ ದಾಖಲೆಯ ಎರಡೇ ಎರಡು ಸಾಲುಗಳನ್ನು ಮಾತ್ರ ತಾವು ಸಂಪಾದನೆ ಮಾಡಿದ್ದು, ರೈತರ ಪ್ರತಿಭಟನೆಯನ್ನು ಬೆಂಬಲಿಸುವ ಗುರಿಯನ್ನಷ್ಟೇ ಹೊಂದಿದ್ದಾಗಿ ದಿಶಾ ರವಿ ತಿಳಿಸಿದ್ದರು.