ಸಂಸತ್ ಚಳಿಗಾಲದ ಅಧಿವೇಶನ ಪ್ರಾರಂಭ, ರಾಮ ಮಂದಿರಕ್ಕಾಗಿ ಮಸೂದೆ?
ನವದೆಹಲಿ, ಡಿಸೆಂಬರ್ 11: ಚಳಿಗಾಲದ ಸಂಸತ್ ಅಧಿವೇಶನ ಇಂದಿನಿಂದ ದೆಹಲಿಯಲ್ಲಿ ಪ್ರಾರಂಭವಾಗುತ್ತಿದೆ. ಪ್ರಸ್ತುತ ನರೇಂದ್ರ ಮೋದಿ ಸರ್ಕಾರದ ಅವಧಿಯ ಕೊನೆಯ ಅಧಿವೇಶನ ಇದಾಗಿದೆ.
ರಾಮಮಂದಿರ ನಿರ್ಮಾಣಕ್ಕೆ ಒತ್ತಡ ಹೆಚ್ಚಾಗುತ್ತಿದ್ದು, ಬಿಜೆಪಿಯು ರಾಮಮಂದಿರ ನಿರ್ಮಾಣಕ್ಕಾಗಿ ಮಸೂದೆಯೊಂದನ್ನು ಅಧಿವೇಶನದಲ್ಲಿ ಇಡುವ ಸಾಧ್ಯತೆ ಇದೆ. ಪ್ರಯತ್ನವನ್ನಾದರೂ ಪಟ್ಟು ರಾಮ ಭಕ್ತರ ನಿಂದನೆಯಿಂದ ಬಚಾವಾಗಲು ಬಿಜೆಪಿ ಈ ಯತ್ನ ಮಾಡುವ ಸಾಧ್ಯತೆ ಇದೆ.
ಚುನಾವಣೆ ಸಮೀಪ ಇರುವ ಕಾರಣ, ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳು ಆಡಳಿತ ಪಕ್ಷದ ಮೇಲೆ ಸವಾರಿ ನಡೆಸಿ ಹುಳುಕುಗಳನ್ನು ಹೊರ ಹಾಕಲು ತುದಿಗಾಲ ಮೇಲೆ ನಿಂತಿದೆ.

ಇನ್ನು ಬಿಜೆಪಿ ಸರ್ಕಾರವು ಇದೇ ಅಧಿವೇಶನದಲ್ಲಿ ಮಧ್ಯಂತರ ಬಜೆಟ್ ಮಂಡಿಸಲಿದ್ದು, ಲೋಕಸಭೆ ಚುನಾವಣೆ ದೃಷ್ಠಿಯಿಂದ ಇದೊಂದು ಭಾರಿ ಜನಪ್ರಿಯ ಬಜೆಟ್ ಆಗಿರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಇನ್ನು ರಾಮಮಂದಿರದ ಬಗ್ಗೆ ಚರ್ಚೆ ಆಗುವ ಸಾಧ್ಯತೆ ಬಹಳವೇ ಇದೆ. ರಾಮಮಂದಿರ ನಿರ್ಮಾಣಕ್ಕೆ ಕಾಯ್ದೆ ತರಬೇಕೆಂದು ಒತ್ತಾಯ ಹೆಚ್ಚಾಗುತ್ತಿರುವ ಕಾರಣ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಆಗುವ ಸಾಧ್ಯತೆಯೂ ಇದೆ.
ಡಿಸೆಂಬರ್ 11 ರಂದು ಆರಂಭವಾಗುವ ಅಧಿವೇಶನ 20 ದಿನಗಳು ನಡೆಯಲಿದ್ದು ಜನವರಿ 8 ಕ್ಕೆ ಮುಕ್ತಾಯ ಆಗಲಿದೆ. ಈ ಬಾರಿ ಅಧಿವೇಶನದಲ್ಲಿ ಹಲವು ಮಹತ್ವದ ಮಸೂದೆ, ಕಾಯ್ದೆಗಳನ್ನು ಅಂಗೀಕಾರಕ್ಕೆ ಸದನಕ್ಕೆ ಹಾಕಲಾಗುತ್ತಿದೆ.
2017ರ ಜನರ ಪ್ರಾತಿನಿಧ್ಯ ಕಾಯ್ದೆ, ಅನಿಯಂತ್ರಿತ ಠೇವಣಿಗಳನ್ನು ರದ್ದು ಮಾಡುವ ಬಿಲ್, ವೈದ್ಯಕೀಯ ಶಿಕ್ಷಣ, ಔಷಧ ಶಿಕ್ಷಣ ಮತ್ತು ವ್ಯಾಪಾರದ ನಿಗಾವಹಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸುವ ಮಸೂದೆ, ಮೊಟಾರು ವಾಹನ ಕಾಯ್ದೆ ಈ ಎಲ್ಲ ಕಾಯ್ದೆಗಳಿಗೆ ಅನುಮೋದನೆ ಪಡೆಯುವ ಯತ್ನ ಮಾಡಲಾಗುತ್ತದೆ.
ಕಂಪೆನಿ ಕಾಯ್ದೆ 2018, ಮುಸ್ಲಿಂ ಮಹಿಳೆ ಕಾಯ್ದೆ ಇವೆರಡು ಕಾಯ್ದೆಗಳನ್ನು ಹೊಸದಾಗಿ ಈ ಬಾರಿ ಸದನದಲ್ಲಿ ಪರಿಚಯಿಸುವ ಸಾಧ್ಯತೆ ಇದೆ. ಜೊತೆಗೆ ರಾಮಮಂದಿರ ನಿರ್ಮಾಣ ಮಸೂದೆ, ಮಹಿಳಾ ಮೀಸಲಾತಿ ಬಿಲ್ ಸಹ ಈ ಬಾರಿ ಸದನದಲ್ಲಿ ಮಂಡಿಸುವ ಸಾದ್ಯತೆ ಇದೆ.












Click it and Unblock the Notifications