ಯುವಕನಿಂದ ಪ್ರಧಾನಿ ಮೋದಿಗೆ ಜೀವ ಬೆದರಿಕೆ ಕರೆ: ಕಾರಣ ವಿಚಿತ್ರ
ನವದೆಹಲಿ, ಜೂನ್ 5: ವಿಚಿತ್ರ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಬೆದರಿಕೆ ಕರೆಹಾಕಿದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 22ವರ್ಷದ ಈ ಯುವಕ, ಪ್ರಧಾನಿಯನ್ನು ಕೊಲ್ಲುವುದಾಗಿ ದೂರವಾಣಿ ಕರೆ ಮಾಡಿದ್ದ.
ನಗರದ ಖಜೂರಿ ಖಾಸ್ ಪೊಲೀಸ್ ರು ಈತನನ್ನು ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾಕೆ ಬೆದರಿಕೆ ಹಾಕಿದ್ದು ಎಂದು ಯುವಕನನ್ನು ವಿಚಾರಣೆ ನಡೆಸಿದಾಗ, ಆತ ನೀಡಿದ ಕಾರಣ ಕೇಳಿ ಪೊಲೀಸರು ಶಾಕ್ ಆಗಿದ್ದಾರೆ.
ಬೇಲ್ ನಿಂದ ಹೊರಬಂದಿದ್ದ ಸಲ್ಮಾನ್ ಎನ್ನುವ ಈ ಯುವಕ, ಮತ್ತೆ ಜೈಲಿಗೆ ಹೋಗಬೇಕೆಂದು ಬಯಸಿದ್ದ. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಈತ ಪ್ರಧಾನಿಗೆ ಬೆದರಿಕೆ ಹಾಕಿದರೆ, ಮತ್ತೆ ಜೈಲಿಗೆ ಹೋಗಬಹುದೆಂದು ಇಂತಹ ಕೆಲಸವನ್ನು ಮಾಡಿದ್ದಾನೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ದೂರವಾಣಿ ಕರೆಯ ಬೆನ್ನತ್ತಿದ್ದ ಈಶಾನ್ಯ ದೆಹಲಿ ಪೊಲೀಸರು ಆತನನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಪ್ರಧಾನಮಂತ್ರಿಗೆ ಸಂಬಂಧಪಟ್ಟ ಕೇಸ್ ಇದಾಗಿರುವುದರಿಂದ, ದೆಹಲಿ ಪೊಲೀಸರ ಜೊತೆಗೆ ಗುಪ್ತಚರ ಇಲಾಖೆಯ ಅಧಿಕಾರಿಗಳೂ ವಿಚಾರಣೆಯನ್ನು ನಡೆಸಿದ್ದಾರೆ.
ಸಲ್ಮಾನ್ ಅರ್ಮಾನ್ ಎನ್ನುವ ಈತ ಡ್ರಗ್ಸ್ ವ್ಯಸನಿಯಾಗಿದ್ದ. ಮೂರು ವರ್ಷದ ಹಿಂದೆ ಕೊಲೆ ಕೇಸಿನಲ್ಲಿ ಬಾಲಾಪರಾಧಿಯಾಗಿ ಜೈಲು ಸೇರಿದ್ದ. ಇತ್ತೀಚೆಗೆ ಜೈಲಿನಿಂದ ಬಿಡುಗಡೆ ಹೊಂದಿದ್ದ.
ಜೈಲಿನಿಂದ ಮನೆಗೆ ಬಂದಿದ್ದ ಈತ ಪೋಷಕರು ಬೈಗುಳದದಿಂದ ಬೇಸರಗೊಂಡಿದ್ದ. ಹಾಗಾಗಿ, ಮನೆಗಿಂತ ಜೈಲೇ ವಾಸಿ ಎಂದು ಇಂತಹ ಕೆಲಸವನ್ನು ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications